ನವದೆಹಲಿ (ಜೂ.28): ರಾಷ್ಟ್ರ ರಾಜಧಾನಿ ದೆಹಲಿ, ಗುರುಗ್ರಾಮ ಹಾಗೂ ಹರಿಯಾಣದಲ್ಲಿ ಶನಿವಾರ ಬೆಳೆ ನಾಶ ಮಾಡುವ ಮಿಡತೆಗಳು ಅಪಾರ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದವು. ಈಗ ಇವು ಹಾರಾಟ ಮುಂದುವರಿಸಿದ್ದು, ದೆಹಲಿಯಿಂದ ತೆರಳಿವೆ. ಆಘಾತಕಾರಿ ವಿಚಾರ ಎಂದರೆ, ಮುಂದಿನ ತಿಂಗಳು ರಾಜಸ್ಥಾನ ಭಾಗದಲ್ಲಿ ಈ ಮಿಡತೆಗಳು ಮತ್ತೆ ಕಾಣಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷಾಂತರ ಸಂಖ್ಯೆಯಲ್ಲಿರುವ ಮಿಡತೆಗಳ ಹಿಂಡು ಮರ, ಮನೆಯ ಛಾವಣಿ ಮತ್ತು ಗಿಡಗಳ ಮೇಲೆ ಕುಳಿತಿರುವ ವಿಡಿಯೋ ಮತ್ತು ಪೋಟೋಗಳನ್ನು ಗುರುಗ್ರಾಮದ ನಿವಾಸಿಗಳು ಹಂಚಿಕೊಂಡಿದ್ದರು. ಇದಾದ ಬೆನ್ನಲ್ಲೇ ದೆಹಲಿ ಹಾಗೂ ಹರಿಯಾಣ ಭಾಗಕ್ಕೆ ಇವು ದಾಳಿ ನಡೆಸಿದ್ದವು. ಈಗ ಅವು ನಮ್ಮ ದೇಶ ಬಿಟ್ಟು ಹೊರನಡೆಯಲಿವೆ ಎಂದು ಉತ್ತರ ಭಾರತದ ಜನತೆ ನಿಟ್ಟುಸಿರು ಬಿಡುತ್ತಿರುವಾಗಲೇ ಈ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.
ಜುಲೈ ವೇಳೆಗೆ ಪೂರ್ವ ಆಫ್ರಿಕಾದಿಂದ ಮಿಡತೆ ದಂಡು ಆಗಮಿಸಬಹುದು. ಸಿಂಧ್ ಪ್ರಾಂತ್ಯ ಮಾರ್ಗವಾಗಿ ಇವು ರಾಜಸ್ಥಾನ ಹಾಗೂ ಗುಜರಾತ್ ಪ್ರವೇಶಿಸಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಈ ಭಾಗದ ಜನತೆ ಮತ್ತೊಂದು ದಾಳಿಗೆ ಸಿದ್ಧರಾಗಿ ಎನ್ನುವ ಸೂಚನೆ ನೀಡಿದೆ.
ಕಳೆದ ಮೂರು ವಾರಗಳಿಂದ ರಾಜಸ್ಥಾನ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಮಿಡತೆ ಹಿಂಡು ಬರುತ್ತಿವೆ. ಇವೆಲ್ಲವೂ ಇರಾನ್ ಹಾಗೂ ಪಾಕಿಸ್ತಾನದಿಂದ ಆಗಮಿಸುತ್ತಿವೆ. ಇವುಗಳು ತುಂಬಾ ಹೊತ್ತು ಒಂದೇ ಕಡೆಯಲ್ಲಿ ಕುಳಿತಿರುವುದಿಲ್ಲ. ಹೀಗಾಗಿ ಇವುಗಳನ್ನು ಸಾಯಿಸೋದು ಅಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ