ನವದೆಹಲಿ(ಸೆ.10): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ದಾಳಿ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರವಿಶಂಕರ್ ಪ್ರಸಾದ್, ಯಾರೇ ಆಗಲೀ ಸೋಷಿಯಲ್ ಮೀಡಿಯಾದಲ್ಲಿ ದೇಶದ ಜಡ್ಜ್ಗಳ ಮೇಲೆ ದಾಳಿ ನಡೆಸುವುದು ತಪ್ಪು. ಮುಖ್ಯ ನ್ಯಾಯಮೂರ್ತಿಗಳಾಗಲೀ ಅಥವಾ ನ್ಯಾಯಧೀಶರ ವಿರುದ್ಧವಾಗಲೀ ನ್ಯಾಯಾಂಗ ನಿಂದನೆ ಮಾಡುವುದು ಖಂಡನೀಯ. ಒಂದು ಪ್ರಕರಣ ಸಂಬಂಧ ಸರಿ ತಪ್ಪುಗಳಾಚೆಗೆ ತೀರ್ಪು ನೀಡುವುದು ಜಡ್ಜ್ಗಳ ಆದ್ಯ ಕರ್ತವ್ಯ. ಹೀಗಿರುವಾಗ ನಿಮಗೆ ಇಷ್ಟವಾದ ತೀರ್ಪು ಬಂದಾಗ ಹೊಗಳುವುದು, ಇಲ್ಲದೇ ಹೋದಾಗ ಅವರ ವಿರುದ್ಧ ದಾಳಿ ನಡೆಸುವುದು ಅಕ್ಷ್ಯಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ. ಹಾಗೆಯೇ ಭಾರತೀಯ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕಾಂಗ್ರೆಸ್ ಬೆಂಬಲಿಸುವ ವಕೀಲರು ಲಾಂಚ್ ಮಾಡಿದ ಕ್ಯಾಂಪೇನ್ ಸರಿಯಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ಆಗಸ್ಟ್ 31ನೇ ತಾರೀಕಿನಂದು ಭಾರತೀಯ ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸಿ ನ್ಯಾಯಾಂಗ ನಿಂದನೆ ಆರೋಪ ಎದುರಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಒಂದು ರೂಪಾಯಿ ದಂಡ ವಿಧಿಸಿ ಬಿಟ್ಟುಕಳುಹಿಸಿತ್ತು. ನ್ಯಾ| ಅರುಣ್ ಮಿಶ್ರ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ತೀರ್ಪು ನೀಡಿತ್ತು. ಒಂದು ವೇಳೆ ಭೂಷನ್ ಅವರು ನಿಗದಿತ ಅವಧಿಯೊಳಗೆ 1 ರೂ ದಂಡ ಪಾವತಿ ಮಾಡದಿದ್ದರೆ 3 ತಿಂಗಳು ಸೆರೆಮನೆವಾಸಕ್ಕೆ ಹೋಗಬೇಕಾಗಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರನ್ನ ಟೀಕಿಸಿ ಪ್ರಶಾಂತ್ ಭೂಷಣ್ ಎರಡು ಟ್ವೀಟ್ ಪೋಸ್ಟ್ ಮಾಡಿದ್ದರು. ಇವು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ನ್ಯಾ| ಅರುಣ್ ಮಿಶ್ರಾ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಪ್ರಶಾಂತ್ ಭೂಷಣ್ ದೋಷಿ ಎಂದು ತೀರ್ಮಾನಿಸಿತ್ತು. ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರುವಂತೆ ಪ್ರಶಾಂತ್ ಭೂಷಣ್ಗೆ ಮೂರು ದಿನ ಕಾಲಾವಕಾಶವನ್ನೂ ಕೋರ್ಟ್ ನೀಡಿತ್ತು.
ಆದರೆ, 63 ವರ್ಷದ ಪ್ರಶಾಂತ್ ಭೂಷಣ್ ತಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಿದರೆ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಂತೆ. ನೀವು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆಯೇ ಹೊರತು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ನ್ಯಾ| ಅರುಣ್ ಮಿಶ್ರ ಅವರಿದ್ದ ಸುಪ್ರೀಂ ನ್ಯಾಯಪೀಠ 1 ರೂ. ದಂಡ ವಿಧಿಸಿತ್ತು. ಹೀಗೆ ತೀರ್ಪು ನೀಡಿದ ನ್ಯಾಯಮೂರ್ತಿಗಳ ವಿರುದ್ಧ ಹಲವರಿಂದ ಟೀಕೆಗಳು ಕೇಳಿ ಬಂದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ