ಎನ್​ಡಿಎ ಶಾಸಕರಿಗೆ ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಆಮಿಷ; ಬಿಜೆಪಿ ಗಂಭೀರ ಆರೋಪ

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಎನ್​ಡಿಎ ಶಾಸಕರೊಬ್ಬರಿಗೆ ಫೋನ್ ಮಾಡಿದ್ದು, ಕೊರೋನಾ ನೆಪವೊಡ್ಡಿ ಸ್ಪೀಕರ್ ಚುನಾವಣೆಯ ದಿನ ಹಾಜರಾಗದಂತೆ ಆಮಿಷವೊಡ್ಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

  • Share this:

ಪಾಟ್ನಾ (ನ. 25): ಬಿಹಾರದಲ್ಲಿ ಜೆಡಿಯು- ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ಬಿಹಾರದ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಎನ್​ಡಿಎ ಪರವಾಗಿ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಮಹಾಘಟಬಂಧನದ ಪರವಾಗಿ ಆರ್​ಜೆಡಿಯ ಅವಧ್ ಬಿಹಾರಿ ಚೌಧರಿ ನಾಮಪತ್ರ ಸಲ್ಲಿಸಿದ್ದಾರೆ. ಬರೋಬ್ಬರಿ 50 ವರ್ಷಗಳ ಬಳಿಕ ಬಿಹಾರದಲ್ಲಿ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಬಿಹಾರ ಸ್ಪೀಕರ್ ಚುನಾವಣೆಗೆ ಕೇವಲ ಕೆಲವೇ ಗಂಟೆಗಳು ಉಳಿದಿರುವಾಗ ಆರ್​ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ಆಡಿಯೋ ಕ್ಲಿಪ್ ಒಂದನ್ನು ರಿಲೀಸ್ ಮಾಡಿದೆ. ಲಾಲೂ ಪ್ರಸಾದ್ ಯಾದವ್ ಬಿಜೆಪಿಯ ಶಾಸಕರಿಗೆ ಆಮಿಷವೊಡ್ಡಿ, ಸ್ಪೀಕರ್ ಚುನಾವಣೆಯ ದಿನ ಹಾಜರಾಗದಂತೆ ಕೋರುತ್ತಿರುವ ಆಡಿಯೋ ಕ್ಲಿಪ್ ಇದಾಗಿದೆ.


ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಎನ್​ಡಿಎ ಶಾಸಕರೊಬ್ಬರಿಗೆ ಫೋನ್ ಮಾಡಿದ್ದು, ಕೊರೋನಾ ನೆಪವೊಡ್ಡಿ ಸ್ಪೀಕರ್ ಚುನಾವಣೆಯ ದಿನ ಹಾಜರಾಗದಂತೆ ಆಮಿಷವೊಡ್ಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪದ ಜೊತೆಗೆ ಜೈಲಿನಿಂದ ಲಾಲೂ ಪ್ರಸಾದ್​ ಫೋನ್​ನಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕೂಡ ಬಿಡುಗಡೆ ಮಾಡಿದೆ.



ನಿನ್ನೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಈ ಬಗ್ಗೆ ಆರೋಪಿಸಿದ್ದರು. ಬಿಜೆಪಿ ನಾಯಕರಿಗೆ ಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿ ಲಾಲೂ ಪ್ರಸಾದ್ ಯಾದವ್ ಜೈಲಿನಿಂದಲೇ ರಾಜಕೀಯದಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಎನ್​ಡಿಎ ನೇತೃತ್ವದಲ್ಲಿ ನಿತೀಶ್​ ಕುಮಾರ್ ಮುಖ್ಯಮಂತ್ರಿಯಾಗಿದ್ದರೂ ಇನ್ನೂ ರಾಜಕೀಯದ ಲೆಕ್ಕಾಚಾರ ಮುಗಿದಿಲ್ಲ.


243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅಧಿವೇಶನ ನವೆಂಬರ್ 27ರಿಂದ ಶುರುವಾಗಲಿದೆ. ಮೊದಲ ದಿನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್​ಡಿಎ ಮೈತ್ರಿಕೂಟ 125 ಹಾಗೂ ಆರ್​ಜೆಡಿ ನೇತೃತ್ವದ ಮಹಾಘಟಬಂಧನ 110 ಶಾಸಕರನ್ನು ಹೊಂದಿದೆ. ಇತರರು 8 ಸ್ಥಾನಗಳನ್ನು ಪಡೆದಿದ್ದಾರೆ. ಇದೀಗ ವಿಧಾನಸಭೆ ಸ್ಪೀಕರ್ ಯಾರಾಗಲಿದ್ದಾರೆ ಎಂಬುದು ಇಂದು ಸಂಜೆಯ ವೇಳೆಗೆ ಗೊತ್ತಾಗಲಿದೆ.

top videos
    First published: