ಕೊರೋನಾ ಎಂಬ ಸಾಂಕ್ರಾಮಿಕ ಪಿಡುಗು ದೇಶವನ್ನು ಜರ್ಝರಿತಗೊಳಿಸಿದ್ದು, ದಿನಗೂಲಿ ಕಾರ್ಮಿಕರಿಂದ ಹಿಡಿದು ಉದ್ಯೋಗವನ್ನೇ ನಂಬಿದ್ದ ಹಲವಾರು ಜನರ ಹೊಟ್ಟೆಗೆ ಕೊಡಲಿಯೇಟು ನೀಡಿದೆ. ಹೊಟ್ಟೆಪಾಡಿಗಾಗಿ ದಿನವೂ ಉದ್ಯೋಗ, ವೇತನವನ್ನು ನಂಬಿದ್ದು ನೌಕರರನ್ನು ಬೀದಿಗೆ ತಂದಿದೆ. ಲೈಂಗಿಕ ಅಲ್ಪಸಂಖ್ಯಾತರೂ ಈ ಹೊಡೆತದಿಂದ ಹೆಚ್ಚಾಗಿಯೇ ಪೆಟ್ಟು ತಿಂದಿದ್ದಾರೆ. ಸಮುದಾಯದಿಂದ ಮನೆಯವರಿಂದ ಕೇವಲವಾಗಿಯೇ ನೋಡಲ್ಪಟ್ಟ ಈ ಸಮುದಾಯ ದುಡ್ಡಿಗಾಗಿ ಯಾರನ್ನೂ ಹಿಂಸಿಸುವುದಿಲ್ಲ. ಇವರಿಗೂ ಬದುಕುವ ಹಕ್ಕಿದೆ. ಇವರೂ ಸಮಾನತೆಯನ್ನು ಪಡೆದುಕೊಳ್ಳಬೇಕೆಂದು ಸರಕಾರ ಇವರಿಗಾಗಿ ಯೋಜನೆಗಳನ್ನು ರೂಪಿಸುತ್ತಿದೆ ಮತ್ತು ಉತ್ತಮ ಸ್ಥಾನಮಾನಗಳನ್ನು ನೀಡುತ್ತಿದೆ.ಆದರೆ ಈ ಸೌಲಭ್ಯಗಳು ಇವರನ್ನು ತಲುಪುತ್ತಿಲ್ಲ ಎಂಬುದು ಇವರುಗಳ ಮೂಕರೋಧನವಾಗಿದೆ.
ಸಾಂಕ್ರಾಮಿಕ ರೋಗದ ಬಿಸಿ ತಟ್ಟುವ ಮೊದಲೇ ಇವರ ಕಥೆಯನ್ನು ಕೇಳುವವರು ಯಾರೂ ಇಲ್ಲದಂತಾಗಿತ್ತು. ಸಿಗಬೇಕಾದ ಮೂಲ ಸೌಕರ್ಯಗಳಿಂದ ಇವರುಗಳು ವಂಚಿತರಾಗಿದ್ದರು. ಆದರೆ ಈ ಪಿಡುಗು ಬಂದ ನಂತರ ಕೂಡ ಇವರ ಸ್ಥಿತಿ ದಯನೀಯವಾಗಿದೆ. ವೈದ್ಯಕೀಯ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ ಆರೋಗ್ಯ ಕೇಂದ್ರಗಳು ಇವರುಗಳನ್ನು ಒಳಗೆ ಸೇರಿಸಿಕೊಳ್ಳುತ್ತಿಲ್ಲ ಎಂಬುದು ಇವರ ಕೂಗಾಗಿದೆ.
ಕೋಲ್ಕತ್ತಾದಂತಹ ನಗರಗಳಲ್ಲಿ ಕೂಡ ಲೈಂಗಿಕ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯವಾಗಿದೆ. ಲಾಕ್ಡೌನ್ ಪರಿಸ್ಥಿತಿಗಳಲ್ಲಿ ಮನೆಯಲ್ಲೇ ಇರಬೇಕಾದಂತಹ ಸ್ಥಿತಿ. ಮನೆಯವರೇ ಇವರನ್ನು ಮನೆಯಿಂದ ಹೊರದಬ್ಬಿದ್ದರು. ಕೆಲವರು ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳನ್ನು ತಂಗುತ್ತಿದ್ದರೆ ಇನ್ನು ಕೆಲವರು ಅಪಹರಣಕ್ಕೆ ಒಳಗಾಗುತ್ತಿದ್ದರು ಎಂದು ಬಂಗಾಳದ ಲೈಂಗಿಕ ಅಲ್ಪಸಂಖ್ಯಾತ ಅಸೋಸಿಯೇಶನ್ನ ಸೆಕ್ರೆಟರಿ ರಂಜಿತಾ ಸಿನ್ಹ ಅವರ ಮಾತಾಗಿದೆ.
ಇವರಿಗೆ ಅಗತ್ಯವಿರುವ ಔಷಧಗಳನ್ನು ಪಡೆದುಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿರುವ ಸಮುದಾಯದ ಸ್ಥಿತಿ ಕೊರೋನಾ ನಂತರ ದಾರುಣವಾಗಿದೆ. ಭಾರತದ ಮೊದಲ ಲೈಂಗಿಕ ಅಲ್ಪಸಂಖ್ಯಾತ ಕಾಲೇಜಿನ ಪ್ರಾಂಶುಪಾಲೆ ಮನೋಬಿ ಬಂದೂಪಾಧ್ಯಾಯಗೆ ಕೋವಿಡ್- 19 ಆರ್ಟಿ-ಪಿಸಿಆರ್ ಟೆಸ್ಟ್ ಅನ್ನು ಸರಕಾರಿ ಆಸ್ಪತ್ರೆಯಲ್ಲಿ ಮಾಡಲು ನಿರಾಕರಿಸಿದ್ದು, ಆಕೆಯನ್ನು ಮಾನಸಿಕ ಅಸ್ವಸ್ಥತೆ ಎಂದು ಹೇಳಿ ಆಸ್ಪತ್ರೆಯಿಂದ ಹೊರದಬ್ಬಿದ್ದಾರೆ ಎಂಬುದಾಗಿ ಮನೋಬಿ ದೂರಿದ್ದಾರೆ.
ಕಳೆದ ವರ್ಷ ಏಪ್ರಿಲ್ನ ಲಾಕ್ಡೌನ್ ಸಮಯದಲ್ಲಿ ಸಿನ್ಹಾ ಮತ್ತು ಸಂಸ್ಥೆಯ ಸದಸ್ಯರು 10 ಬೆಡ್ಗಳನ್ನು ಎಮ್ಆರ್ ಬಂಗೂರ್ ಆಸ್ಪತ್ರೆಯಲ್ಲಿ ಕಾಯ್ದಿರಿಸಲು ಸಾಧ್ಯವಾಯಿತು. ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ರಂಜಿತಾ ಸಿನ್ಹಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಚಂದ್ರಮಾ ಭಟ್ಟಾಚಾರ್ಯರಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲು ಅನುಮತಿ ಕೋರಿ ಮನವರಿಕೆ ಮಾಡಿದ್ದರು. ಇದರಿಂದ ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಿಗೂ ಸೇವೆಯನ್ನು ವಿಸ್ತರಿಸಬೇಕೆಂದು ಅವರು ಚಂದ್ರಮಾರನ್ನು ಒತ್ತಾಯಿಸಿದ್ದಾರೆ.
ಮನೆಯಿಂದ ಹೊರಹಾಕಲಾದ, ಬಾಡಿಗೆ ಕಟ್ಟಲು ಕಷ್ಟವಾಗಿರುವ ಯಾವುದೇ ಆದಾಯ ಇಲ್ಲದವರಿಗೆ ಸಿನ್ಹಾ ಮತ್ತು ಆಕೆಯ ಸಂಸ್ಥೆ ಸಹಾಯ ಮಾಡುತ್ತದೆ. ಲಾಕ್ಡೌನ್ ಸಮಯದಲ್ಲಿ ಸಮುದಾಯದ ಜೀವನ ಅವಶ್ಯಕತೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಂಸ್ಥೆ ಅವಿರತ ಶ್ರಮಿಸಿತ್ತು. ಕೆಲವೊಂದು ಸಂಸ್ಥೆಗಳು ತಮ್ಮಲ್ಲಿ ಉದ್ಯೋಗಿಗಳಾಗಿ ಸಮುದಾಯದ ಸದಸ್ಯರನ್ನು ನೇಮಿಸಿಕೊಂಡಿದ್ದಾರೆ.ಇನ್ನು ಖಾಸಗಿ ಆಸ್ಪತ್ರೆಯೊಂದು ಕ್ಲಿನಿಕಲ್ ಬೆಂಬಲವನ್ನು ಅವರಿಗೆ ಒದಗಿಸುವುದಾಗಿ ಭರವಸೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ