ನವದೆಹಲಿ: ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ (Siddique Kappan) ಅವರು ಎರಡು ವರ್ಷಗಳ ಸುದೀರ್ಘ ಜೈಲುವಾಸದ (Imprisonment) ನಂತರ ಕೊನೆಗೂ ಹೊರ ಬಂದಿದ್ದಾರೆ. ಸಿದ್ದಿಕ್ ಕಪ್ಪನ್ ಅವರನ್ನು ಲಕ್ನೋ ಜೈಲಿನಿಂದ (Lucknow) ಬಿಡುಗಡೆ ಮಾಡುವಂತೆ ಲಕ್ನೋ ಸೆಷನ್ಸ್ ನ್ಯಾಯಾಲಯ (Lucknow Sessions Court) ಜಾಮೀನು ಆದೇಶಕ್ಕೆ ಸಹಿ ಮಾಡಿದೆ. ಆ ಮೂಲಕ 2020ರ ಅಕ್ಟೋಬರ್ನಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿ ಬಂಧಿತರಾಗಿ 2 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ಕಪ್ಪನ್ ಅವರು ಜೈಲುಮುಕ್ತರಾಗಿದ್ದಾರೆ.
2020 ರಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಠಾಕೂರ್ ಸಮುದಾಯದ ಕಾಮುಕರು ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆ ಆ ಯುವತಿ ಸಾವನ್ನಪ್ಪಿದ್ದಳು. ಬಳಿಕ ಈ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿ ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹಿಸಿ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು. ಅಲ್ಲದೇ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧವೂ ವ್ಯಾಪಕ ಜನಾಕ್ರೋಶ ಕೇಳಿ ಬಂದಿತ್ತು. ಈ ವೇಳೆ ಉತ್ತರಪ್ರದೇಶದಲ್ಲಿ ಹತ್ರಾಸ್ ಪ್ರಕರಣದ ಕುರಿತು ನಡೆಯುತ್ತಿರುವ ಜನರ ಆಕ್ರೋಶದ ಪ್ರತಿಭಟನೆಯ ವರದಿಗೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: Siddiqui Kappan: ಜೈಲಿನಲ್ಲಿದ್ದ ಪತ್ರಕರ್ತ ಸಿದ್ದಿಕಿ ಕಪ್ಪನ್ಗೆ ಸುಪ್ರೀಂನಿಂದ ಜಾಮೀನು ಮಂಜೂರು!
'28 ತಿಂಗಳು ಕಳೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ'
ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಬಂಧನ ಮಾಡಿದ ಬಳಿಕ ಅವರ ಮತ್ತು ಇತರ ಮೂವರ ವಿರುದ್ಧ ಪಿಎಫ್ಐ ಸಂಘಟನೆ ಜೊತೆ ಸಂಪರ್ಕ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಬಂದಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಪರಿಣಾಮ ಎರಡ ವರ್ಷಕ್ಕೂ ಹೆಚ್ಚು ಕಾಲ ಸಿದ್ದಿಕ್ ಕಪ್ಪನ್ ಜೈಲು ವಾಸ ಅನುಭವಿಸಬೇಕಾಯ್ತು. ಇದೀಗ ಜೈಲಿನಿಂದ ಹೊರ ಬಂದಿರುವ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನಾನು ಹತ್ರಾಸ್ ಪ್ರಕರಣದ ಬಗ್ಗೆ ವರದಿ ಮಾಡಲು ಅಲ್ಲಿಗೆ ಹೋಗಿದ್ದೆ. ವರದಿ ಮಾಡುವುದೇ ಅಪರಾಧವಾಗಿದೆ.! ನಾನು ಜೈಲಿಗೆ ಹೋಗಿ 28 ತಿಂಗಳು ಕಳೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಆದರೆ 28 ತಿಂಗಳ ಹೋರಾಟದ ನಂತರ ನಾನು ಕೊನೆಗೂ ಹೊರ ಬಂದಿದ್ದೇನೆ. ಸದ್ಯ ನಾನು ಸಂತೋಷವಾಗಿದ್ದೇನೆ’ ಎಂದು ಹೇಳಿದರು.
ಇದನ್ನೂ ಓದಿ: Crime News: ಥೂ.. ಇವನೆಂಥಾ ಗಂಡ! ಪತ್ನಿಯನ್ನೇ ಅತ್ಯಾಚಾರ ಮಾಡುವಂತೆ ಸ್ನೇಹಿತನಿಗೆ ಸಹಕರಿಸಿದ ಕಿರಾತಕ
ಸಿದ್ದಿಕ್ ಕಪ್ಪನ್ ಅವರ ಬಂಧನ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ನೀಡಿತ್ತು. ಆದರೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದಾಗಿ ಸಿದ್ದಿಕ್ ಮತ್ತೆ ಜೈಲಿನಲ್ಲೇ ಮುಂದುವರಿಯಬೇಕಾಗಿತ್ತು. ಇದೀಗ ಅವರನ್ನು ಲಕ್ನೋ ಜೈಲಿನಿಂದ ಬಿಡುಗಡೆ ಮಾಡುವಂತೆ ಲಕ್ನೋ ಸೆಷನ್ಸ್ ನ್ಯಾಯಾಲಯ ಜಾಮೀನು ಆದೇಶಕ್ಕೆ ಸಹಿ ಮಾಡಿದೆ.
ಕೊನೆಗೂ ಹೊರಬಂದ ಪತ್ರಕರ್ತ
ಹತ್ರಾಸ್ ಪ್ರಕರಣದ ವರದಿಗೆ ಹೋಗಿದ್ದ ಸಿದ್ದಿಕ್ ಕಪ್ಪನ್ಗೆ ವಿರುದ್ಧ ಆರಂಭದಲ್ಲಿ ದೇಶದ್ರೋಹದ ಆರೋಪ ಹೊರಿಸಿ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ 2022ರ ಫೆಬ್ರವರಿಯಲ್ಲಿ ಈಗ ನಿಷೇಧಿತ ಸಂಘಟನೆ ಪಿಎಫ್ಐನಿಂದ ಅಕ್ರಮವಾಗಿ ಹಣ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಮನಿ ಲಾಂಡರಿಂಗ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿದ್ದಿಕ್ ಅವರ ಯಾವುದೇ ನಿರ್ದಿಷ್ಟ ಪಾತ್ರದ ಬಗ್ಗೆ ಅಧಿಕಾರಿಗಳು ತನಿಖೆಯಲ್ಲಿ ತೋರಿಸಿಲ್ಲ ಎಂದು ಅಲಹಾಬಾದ್ ಕೋರ್ಟ್ ಡಿಸೆಂಬರ್ 23 ರಂದು ಜಾಮೀನು ನೀಡಿತ್ತು. ಆದರೆ ಅವರ ವಿರುದ್ಧ ಹಾಕಲಾಗಿದ್ದ ಬಾಕಿ ಪ್ರಕರಣಗಳಿಂದಾಗಿ ಜೈಲಿನಲ್ಲೇ ಉಳಿಯಬೇಕಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ