Kerala Rains: ಕೇರಳದ ಭೂಕುಸಿತ ದುರಂತ; ಸಾವಿನ ಸಂಖ್ಯೆ 28ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

ಕೇರಳದಲ್ಲಿ ಭೂಕುಸಿತವಾದ ಸ್ಥಳದಲ್ಲಿ ಶೋಧ ಕಾರ್ಯ

ಕೇರಳದಲ್ಲಿ ಭೂಕುಸಿತವಾದ ಸ್ಥಳದಲ್ಲಿ ಶೋಧ ಕಾರ್ಯ

Kerala Rain: ಕೇರಳದ ಮುನ್ನಾರ್ ಬಳಿ ಮಳೆಯಿಂದಾಗಿ ಭಾರೀ ಭೂಕುಸಿತ ಉಂಟಾಗಿದ್ದು, ಈ ಘಟನೆ ನಡೆದ ವೇಳೆ 78 ಜನರು ಅಲ್ಲಿ ವಾಸವಾಗಿದ್ದರು. ಅವರೆಲ್ಲರೂ ಮಣ್ಣಿನಡಿ ಸಿಲುಕಿದ್ದಾರೆ. ಅವರಲ್ಲಿ 12 ಜನರನ್ನು ರಕ್ಷಣೆ ಮಾಡಲಾಗಿದ್ದು, 28 ಮೃತದೇಹಗಳನ್ನು ಹೊರಗೆಳೆಯಲಾಗಿದೆ.

  • Share this:

ತಿರುವನಂತಪುರಂ (ಆ. 9): ಕೇರಳದ ಮುನ್ನಾರ್ ಬಳಿ ನಿನ್ನೆ ಭೂಕುಸಿತ ಉಂಟಾಗಿ 20 ಮನೆಗಳು ಕೊಚ್ಚಿಕೊಂಡು ಹೋಗಿದ್ದವು. 70ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದರು. ಈ ದುರಂತದ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ನಿನ್ನೆ 26 ಜನರ ಮೃತದೇಹಗಳನ್ನು ಹೊರಗೆಳೆಯಲಾಗಿತ್ತು. ಇಂದು ನಡೆದ ಕಾರ್ಯಾಚರಣೆ ವೇಳೆ ಮತ್ತೆರಡು ಶವಗಳು ಪತ್ತೆಯಾಗಿವೆ.


ಕೇರಳದ ಮುನ್ನಾರ್ ಬಳಿ ಮಳೆಯಿಂದಾಗಿ ಭಾರೀ ಭೂಕುಸಿತ ಉಂಟಾಗಿದ್ದು, ಒಟ್ಟು 28 ಜನರು ಸಾವನ್ನಪ್ಪಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ಈ ಘಟನೆ ನಡೆದ ವೇಳೆ 78 ಜನರು ಅಲ್ಲಿ ವಾಸವಾಗಿದ್ದರು. ಅವರೆಲ್ಲರೂ ಮಣ್ಣಿನಡಿ ಸಿಲುಕಿದ್ದಾರೆ. ಅವರಲ್ಲಿ 12 ಜನರನ್ನು ರಕ್ಷಣೆ ಮಾಡಲಾಗಿದ್ದು, 28 ಮೃತದೇಹಗಳನ್ನು ಹೊರಗೆಳೆಯಲಾಗಿದೆ. ಉಳಿದವರು ಬದುಕಿರುವ ಸಾಧ್ಯತೆ ಕಡಿಮೆಯಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ದೇವರನಾಡೆಂದೇ ಕರೆಯಲಾಗುವ ಕೇರಳದಲ್ಲಿ ಪ್ರತಿವರ್ಷ ಪ್ರವಾಹದಿಂದ ಲಕ್ಷಾಂತರ ಎಕರೆ ಜಾಗ, ಮನೆಗಳು ಕೊಚ್ಚಿಹೋಗುತ್ತವೆ. ನೂರಾರು ಜನರು ಸಾವನ್ನಪ್ಪುತ್ತಾರೆ. ಈಗ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಇಂದು ಮುನ್ನಾರ್ ಬಳಿ ನಡೆದ ಭೂಕುಸಿತದ ಮೂಲಕ ಈ ವರ್ಷವೂ ಕೇರಳದಲ್ಲಿ ಪ್ರವಾಹ ತನ್ನ ಆರ್ಭಟವನ್ನು ಶುರುಮಾಡಿದೆ.


ಇದನ್ನೂ ಓದಿ: Karnataka Rains: ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು ರೆಡ್ ಅಲರ್ಟ್​ ಘೋಷಣೆ


ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ರಾಜಮಲಾದಲ್ಲಿ ಶನಿವಾರ ಮುಂಜಾನೆ ಗುಡ್ಡ ಕುಸಿದಿದೆ. ಇದರ ಪರಿಣಾಮ ಹಲವರು ಮಣ್ಣಿನಡಿ ಸಿಲುಕಿದ್ದರು. ಇಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಟೀ ಎಸ್ಟೇಟ್​ಗಳಲ್ಲಿ ಕೆಲಸ ಮಾಡುತ್ತಿದ್ದವರು ಆ ಭಾಗದಲ್ಲಿ ವಾಸವಾಗಿದ್ದರು. ಮೂರು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಲವೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲು ಕೂಡ ಸಾಧ್ಯವಾಗದಂತಾಗಿದೆ. ರಸ್ತೆಗಳಲ್ಲಿ ಬಿದ್ದ ಮರ, ಮಣ್ಣನ್ನು ತೆರವುಗೊಳಿಸಿ, ಮಣ್ಣಿನಡಿ ಸಿಲುಕಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.



ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 78 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎನ್ನಲಾಗಿದೆ. ನಿನ್ನೆ ಬೆಳಗ್ಗೆ ಈ ದುರಂತ ಸಂಭವಿಸಿದ್ದರಿಂದ ನಿದ್ರೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಮಯ ಇರಲಿಲ್ಲ. ಅಲ್ಲದೆ, ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ಸ್ಥಳಕ್ಕೆ ಬೇಗನೆ ತಲುಪಲು ಕೂಡ ಸಾಧ್ಯವಾಗಿಲ್ಲ. ಇಂದು ಕೂಡ ಬೆಳಗ್ಗೆಯಿಂದ ಎನ್​ಡಿಆರ್​ಎಫ್​ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Published by:Sushma Chakre
First published: