ಇಡುಕ್ಕಿ (ಆ. 11): ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಶನಿವಾರ ಭೂಕುಸಿತ ಉಂಟಾಗಿ 20 ಮನೆಗಳು ಕೊಚ್ಚಿಕೊಂಡು ಹೋಗಿದ್ದವು. 78 ಜನರು ಮಣ್ಣಿನಡಿ ಸಿಲುಕಿದ್ದರು. ಈ ದುರಂತದಲ್ಲಿ ಇದುವರೆಗೂ 52 ಜನರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ನಿನ್ನೆ 49 ಶವಗಳನ್ನು ಪತ್ತೆಹಚ್ಚಲಾಗಿತ್ತು. ಇಂದು ಇನ್ನೂ ಮೂರು ಶವಗಳನ್ನು ಹೊರಗೆ ತೆಗೆಯಲಾಗಿದೆ.
ಕೇರಳದ ಇಡುಕ್ಕಿಯಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ 20 ಮನೆಗಳಲ್ಲಿ ವಾಸವಾಗಿದ್ದ 78 ಜನರು ಮಣ್ಣಿನಡಿ ಸಿಲುಕಿದ್ದರು. ಶನಿವಾರ 26 ಜನರ ಶವಗಳನ್ನು ಪತ್ತೆಹಚ್ಚಲಾಗಿತ್ತು. ಇಂದಿನವರೆಗೆ ನಡೆದ ಕಾರ್ಯಾಚರಣೆಯಲ್ಲಿ 52 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದುವರೆಗೂ 12 ಜನರನ್ನು ರಕ್ಷಿಸಲಾಗಿದೆ. ಉಳಿದವರ ಶವಗಳಿಗಾಗಿ ಎನ್ಡಿಆರ್ಎಫ್ ಸಿಬ್ಬಂದಿ ಇಂದು ಕೂಡ ಶೋಧ ಕಾರ್ಯ ನಡೆಸಲಿದ್ದಾರೆ.
ಇದನ್ನೂ ಓದಿ: ಕಾಶಿ, ಮಥುರಾದ ಮಸೀದಿ ಧ್ವಂಸ ಮಾಡಿ ದೇವಸ್ಥಾನ ನಿರ್ಮಿಸಬೇಕು; ಸಚಿವ ಕೆ.ಎಸ್. ಈಶ್ವರಪ್ಪ ಪುನರುಚ್ಛಾರ
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ನ ರಾಜಮಲಾದಲ್ಲಿ ಶನಿವಾರ ಮುಂಜಾನೆ ಗುಡ್ಡ ಕುಸಿದಿತ್ತು. ಇದರ ಪರಿಣಾಮ ಹಲವರು ಮಣ್ಣಿನಡಿ ಸಿಲುಕಿದ್ದರು. ಇಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಟೀ ಎಸ್ಟೇಟ್ಗಳಲ್ಲಿ ಕೆಲಸ ಮಾಡುತ್ತಿದ್ದವರು ಆ ಭಾಗದಲ್ಲಿ ವಾಸವಾಗಿದ್ದರು. 5 ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಲವೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲು ಕೂಡ ಸಾಧ್ಯವಾಗದಂತಾಗಿದೆ. ರಸ್ತೆಗಳಲ್ಲಿ ಬಿದ್ದ ಮರ, ಮಣ್ಣನ್ನು ತೆರವುಗೊಳಿಸಿ, ಮಣ್ಣಿನಡಿ ಸಿಲುಕಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ಅಪ್ಪನ ಆಸ್ತಿ ಹಕ್ಕು ಎಲ್ಲಾ ಕಾಲಕ್ಕೂ ಅನ್ವಯ: ಸುಪ್ರೀಂ ತೀರ್ಪು
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 78 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎನ್ನಲಾಗಿದೆ. ಶನಿವಾರ ಬೆಳಗ್ಗೆಯೇ ಈ ದುರಂತ ಸಂಭವಿಸಿದ್ದರಿಂದ ನಿದ್ರೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಮಯ ಇರಲಿಲ್ಲ. ಅಲ್ಲದೆ, ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ಸ್ಥಳಕ್ಕೆ ಬೇಗನೆ ತಲುಪಲು ಕೂಡ ಸಾಧ್ಯವಾಗಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ