ಕಾಶ್ಮೀರದ ಜನರಿಗೆ ಈಗ ಭಾರತಕ್ಕಿಂತ ಚೀನಾ ಆಡಳಿತವೇ ವಾಸಿ ಎನ್ನುವಂತಾಗಿದೆ: ಫಾರೂಕ್
ಕಾಶ್ಮೀರದ ಜನರು ಭಾರತದ ಒಕ್ಕೂಟದ ಬಗ್ಗೆ ನಂಬಿಕೆ ಕಳೆದುಕೊಂಡಿದ್ಧಾರೆ. ಅವರಿಗೆ ಭಾರತದ ಆಡಳಿತಕ್ಕಿಂತ ಚೀನಾ ಆಡಳಿತವೇ ಎಷ್ಟೋ ವಾಸಿ ಎಂಬ ಭಾವನೆ ಬಂದಿದೆ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು(ಸೆ. 24): ಭಾರತದಲ್ಲಿ ಕಾಶ್ಮೀರಿಗಳನ್ನು ಗುಲಾಮರಂತೆ ಕಾಣಲಾಗುತ್ತಿದೆ. ಅವರು ದ್ವಿತೀಯ ದರ್ಜೆ ನಾಗರಿಕರಂತಾಗಿದ್ದಾರೆ. ಅವರಿಗೆ ಭಾರತೀಯತನವೆಂಬ ಭಾವನೆಯೇ ಬತ್ತಿಹೋಗಿದೆ. ಭಾರತಕ್ಕಿಂತ ಚೀನಾ ಆಡಳಿತವೇ ಎಷ್ಟೋ ವಾಸಿಯಾಗಿರುತ್ತದೆ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ‘ದಿ ವೈರ್’ ಜಾಲತಾಣಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಾಶ್ಮೀರದ ವಾಸ್ತವ ಸ್ಥಿತಿ ಕುರಿತು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಆರ್ಟಿಕಲ್ 370ನೇ ವಿಧಿಯನ್ನು ತೆಗೆದುಹಾಕಿದ್ದನ್ನು ಕಾಶ್ಮೀರಿಗಳು ಒಪ್ಪಿಕೊಂಡಿದ್ದಾರೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ಕಾಶ್ಮೀರದಿಂದ ಸೇನೆಯನ್ನ ಹೊರಕಳುಹಿಸಿದರೆ ಕಾಶ್ಮೀರಿ ಜನರು ಸಾಗರೋಪಾದಿಯಲ್ಲಿ ಬೀದಿಗೆ ಬಂದು ಪ್ರತಿಭಟನೆ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರಿಗಳು ಭಾರತ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನಗೂ ವಂಚಿಸಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚಿನ ಸೇನಾ ಪಡೆಗಳ ನಿಯೋಜಿಸಿದಾಗ ನಾನು ಪ್ರಶ್ನೆ ಮಾಡಿದ್ದೆ. ಆದರೆ, ಅದು ಭದ್ರತಾ ಕಾರಣಕ್ಕಾಗಿ ಮಾತ್ರ ಈ ಕೆಲಸ ಮಾಡುತ್ತಿದ್ದೇವೆಂದು ಪ್ರಧಾನಿ ವಾಗ್ದಾನ ನೀಡಿದ್ದರು. ಆದರೆ, ಅವರ ಉದ್ದೇಶ ಬೇರೆಯದೇ ಇತ್ತು ಎಂದು ಈ ಸಂದರ್ಶನದಲ್ಲಿ ಅಬ್ದುಲ್ಲಾ ಟೀಕಿಸಿದ್ದಾರೆ.
2019, ಆಗಸ್ಟ್ 5ರಂದು ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ತೆಗೆದುಹಾಕಿತ್ತು. ಅದಕ್ಕೆ 72 ಗಂಟೆ ಮುಂಚೆ ಪ್ರಧಾನಿ ಮೋದಿ ಅವರು ಫಾರೂಕ್ ಅಬ್ದುಲ್ಲಾ ಅವರನ್ನ ಭೇಟಿಯಾಗಿ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಗೆ ಅಪಾಯ ಇಲ್ಲ ಎಂದು ಭರವಸೆ ನೀಡಿದ್ದರಂತೆ. ಆದರೆ, ಕೊನೆಗೆ ಆ ಎರಡು ವಿಧಿಗಳು ಇತಿಹಾಸ ಪುಟ ಸೇರಿತು. 370ನೇ ವಿಧಿಯಿಂದ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸರಿಯಾದ ಶಿಕ್ಷಣ, ಆರೋಗ್ಯ, ಔದ್ಯಮಿಕ ಪ್ರಗತಿಗೆ, ಭಯೋತ್ಪಾದನೆ ನಿಯಂತ್ರಣಕ್ಕೆ ಮಾರಕವಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. 370ನೇ ವಿಧಿ ತೆಗೆದುಹಾಕಿದ ಬೆನ್ನಲ್ಲೇ ಕಾಶ್ಮೀರಾದ್ಯಂತ ಸೆಕ್ಷನ್ 144 ಜಾರಿಗೊಳಿಸಿತು. ಯಾರೂ ಪ್ರತಿಭಟನೆ ನಡೆಸದಂತೆ ಎಚ್ಚರ ವಹಿಸಿತು. ಮುಖ್ಯವಾಹಿನಿಯ ಬಹುತೇಕ ರಾಜಕೀಯ ಮುಖಂಡರು ಸೇರಿದಂತೆ ಅನೇಕ ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೊಳಪಡಿಸಿತ್ತು. ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ಬಹಳ ದಿನಗಳ ಬಳಿಕವಷ್ಟೇ ಬಂಧ ಮುಕ್ತಗೊಳಿಸಲಾಯಿತು.
ಅದಾದ ಬಳಿಕ ಫಾರೂಕ್ ಅಬ್ದುಲ್ಲಾ ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿರುವುದು ಇದೇ ಮೊದಲು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ಕ್ರಮವನ್ನು ತಾವು ಪ್ರಶ್ನಿಸುವುದನ್ನು ಮುಂದುವರಿಸುವುದಾಗಿಯೂ ಹಾಗೂ ಎಲ್ಲಾ ಪ್ರಜಾತಂತ್ರೀಯ ಮಾರ್ಗಗಳ ಮೂಲಕ ಹೋರಾಟ ನಡೆಸುವುದಾಗಿ ಅವರು ದಿ ವೈರ್ ವೆಬ್ಸೈಟ್ಗೆ ತಿಳಿಸಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ