ಜಮ್ಮು ಕಾಶ್ಮೀರ: ಮಹಾ ಶಿವರಾತ್ರಿಗೂ (Maha Shivaratri) ಮೊದಲು ಅನೇಕ ಸಮಯದಿಂದ ಬಾಕಿ ಇರುವ ತಮ್ಮ ವೇತನವನ್ನು (Salary) ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಜಮ್ಮು ಕಾಶ್ಮೀರದಲ್ಲಿ (Jammu Kashmir) ಪ್ರತಿಭಟನೆ ನಡೆಸಿದರು. ಪಿಎಂ ಪ್ಯಾಕೇಜ್ ಕಾಶ್ಮೀರಿ ಪಂಡಿತರು (Kashmir Pandits) ಸುದೀರ್ಘ ಸಮಯದಿಂದ ಬಾಕಿ ಇರುವ ವೇತನವನ್ನು ತಕ್ಷಣ ನೀಡುವಂತೆ ಆಗ್ರಹಿಸಿದ್ದು, ವೇತನ ನೀಡದ ಹೊರತು ಭದ್ರತೆಯ ದೃಷ್ಟಿಯಿಂದ ಕಾಶ್ಮೀರಕ್ಕೆ ಮರಳುವಂತೆ ಒತ್ತಾಯಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಫೆಬ್ರವರಿ 15ರಂದು 50ಕ್ಕೂ ಹೆಚ್ಚು ವಲಸೆ ಕಾಶ್ಮೀರಿ ಪಂಡಿತರು ಜಮ್ಮುವಿನ ಬಿಜೆಪಿ ಕಚೇರಿ ಮುಂದೆ ತಮ್ಮ ಬಾಕಿ ಸಂಬಳವನ್ನು ನೀಡುವಂತೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಪಿಎಂ ಪ್ಯಾಕೇಜ್ ಪಂಡಿತ ಉದ್ಯೋಗಿಗಳಲ್ಲಿ, ಕಣಿವೆಯಲ್ಲಿ ಕರ್ತವ್ಯಕ್ಕೆ ಮರಳಿರುವ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಬಿಡುಗಡೆ ಮಾಡುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಧಿಕಾರಿಗಳಿಗೆ ಇತ್ತೀಚೆಗೆ ಆದೇಶ ನೀಡಿತ್ತು.
ಪ್ರತಿಭಟನೆ ಹತ್ತಿಕ್ಕಲು ಕ್ರಮ
ಜಮ್ಮುವಿನ ಪ್ರೆಸ್ ಕ್ಲಬ್ನಲ್ಲಿ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರಿಂದ ಅವರ ಹೋರಾಟವನ್ನು ಹತ್ತಿಕ್ಕಲು ಪ್ರತಿಭಟನೆ ನಡೆಯುವ ಪ್ರದೇಶದ ಸುತ್ತಲೂ 144 ಸೆಕ್ಷನ್ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಅಲ್ಲಿಂದ ಜಮ್ಮುವಿನ ಬಿಜೆಪಿ ಕಚೇರಿಗೆ ಜಮಾಯಿಸಿದ ಕಾಶ್ಮೀರಿ ಪಂಡಿತ್ ಸಮುದಾಯದ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾತನಾಡಿರುವ ಕಾಶ್ಮೀರಿ ವಲಸಿಗ ನಿರ್ವಸಿತ ಉದ್ಯೋಗಿಗಳ ಸಂಘಟನೆಯ ಅಧ್ಯಕ್ಷ ರುಬೊನ್ ಸಪ್ರೂ, ನಮ್ಮ ವೇತನವನ್ನು ಕಳೆದ ಹಲವು ತಿಂಗಳಿನಿಂದ ತಡೆಹಿಡಿಯಲಾಗಿದೆ. ಮಹಾ ಶಿವರಾತ್ರಿಯಂದು ನಮ್ಮ ಬಾಕಿ ಸಂಬಳವನ್ನು ಬಿಡುಗಡೆ ಮಾಡಬೇಕು. ತಮ್ಮ ಬಾಕಿ ವೇತನವನ್ನು ಬಿಡುಗಡೆ ಮಾಡಲು ಸರ್ಕಾರ ಯಾವುದೇ ಷರತ್ತು ವಿಧಿಸಬಾರದು. ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಮಹಾ ಶಿವರಾತ್ರಿಯನ್ನು ಆಚರಿಸಲು ಅನುಕೂಲವಾಗುವಂತೆ ಎಲ್ಲ ಪಿಎಂ ಪ್ಯಾಕೇಜ್ ಉದ್ಯೋಗಿಗಳು ತಮ್ಮ ಸಂಬಳ ಪಡೆದುಕೊಳ್ಳುವಂತೆ ಆಡಳಿತ ನೋಡಿಕೊಳ್ಳಬೇಕು.
ಸರ್ಕಾರ ನೋವು ಕೇಳಿಸುತ್ತಿಲ್ಲ
ಕೇಂದ್ರ ಕಾಶ್ಮೀರದಲ್ಲಿನ ಸರ್ಕಾರಿ ಕಚೇರಿಯಲ್ಲಿ ಪಂಡಿತ ಸಮುದಾಯದ ಉದ್ಯೋಗಿ ರಾಹುಲ್ ಭಟ್ ಅವರನ್ನು ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ ನಂತರ ಕಳೆದ ವರ್ಷ ಮೇ 12ರಿಂದ ಸುಮಾರು 5000 ಪಿಎಂ ಪ್ಯಾಕೇಜ್ ಪಂಡಿತ ಉದ್ಯೋಗಿಗಳು ಮುಷ್ಕರ ನಡೆಸುತ್ತಿದ್ದಾರೆ. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿದ್ದ ದಾಳಿಗಳಿಂದಾಗಿ ಕಾಶ್ಮೀರ ತೊರೆದ ಬಹುತೇಕ ಉದ್ಯೋಗಿಗಳು ಜಮ್ಮುವಿನಲ್ಲಿ ಪ್ರತಿ ದಿನವೂ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈವರೆಗೂ ಸರ್ಕಾರ ಅವರ ಅಹವಾಲುಗಳಿಗೆ ಆಲಿಸಲು ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ಕಳೆದ ವರ್ಷ ಮತ್ತೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡಗಳು ಆರಂಭವಾಗಿದ್ದರಿಂದ, ಜೀವ ಭಯಕ್ಕೆ ಒಳಗಾದ ಪಂಡಿತರು ಕಣಿವೆ ತೊರೆದು ಜಮ್ಮುವಿಗೆ ವಲಸೆ ಹೋಗಿದ್ದರು. ಇವರಲ್ಲಿ ಪಿಎಂ ಪ್ಯಾಕೇಜ್ ಅಡಿ ಸರ್ಕಾರಿ ಉದ್ಯೋಗ ಪಡೆದು ಕಣಿವೆಗೆ ಮರಳಿದವರೂ ಸೇರಿದ್ದಾರೆ. ಒಂದಷ್ಟು ಜನ ವೇತನಕ್ಕಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೂ, ಕೊನೆಗೆ ಸಂಬಳ ಸಿಗದೆ ಹತಾಶರಾಗಿ ಕಣಿವೆಗೆ ವಾಪಸಾಗಿ ಕರ್ತವ್ಯಕ್ಕೆ ಮರಳಿದ್ದಾರೆ.
ಇದನ್ನೂ ಓದಿ: Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾಕಾರರಲ್ಲೊಬ್ಬರು, ಸರ್ಕಾರ ನಮ್ಮ ವೇತನಗಳನ್ನು ಬಿಡುಗಡೆ ಮಾಡಬೇಕು. ಕಣಿವೆಗೆ ಮರಳಿ ಕೆಲಸ ಆರಂಭಿಸುವಂತೆ ನಮಗೆ ಒತ್ತಾಯಿಸಬಾರದು. ನಿರ್ದಿಷ್ಟ ಗುರಿಯ ಹತ್ಯೆಗಳು ಮುಂದುವರಿದಿರುವುದರಿಂದ ನಮಗೆ ಕಾಶ್ಮೀರದಲ್ಲಿ ಸುಭದ್ರತೆಯ ಭಾವನೆ ಉಂಟಾಗುತ್ತಿಲ್ಲ. ಹೀಗಾಗಿ ಪಂಡಿತ ಸಮುದಾಯದ ಉದ್ಯೋಗಿಗಳ ಸುರಕ್ಷತೆ, ಭದ್ರತೆ ಹಾಗೂ ಮರುವಸತಿಗೆ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ಭದ್ರತಾ ಆತಂಕದ ಕಾರಣ ನಾವು ಕಣಿವೆಗೆ ಹೋಗಿ ಕೆಲಸ ಮಾಡಲು ಬಯಸುವುದಿಲ್ಲ. ಸರ್ಕಾರ ನಮಗೆ ಜಮ್ಮುವಿನಲ್ಲಿಯೇ ತಾತ್ಕಾಲಿಕವಾಗಿ ನೆಲೆ ಒದಗಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೇ, ಜಮ್ಮುವಿನಲ್ಲಿನ ಪರಿಹಾರ ಹಾಗೂ ಮರುವಸತಿ ಕಚೇರಿಯೊಂದಿಗೆ ನಮ್ಮನ್ನು ಸಂಪರ್ಕಿಸಬಹುದು ‘ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ