ಶ್ರೀನಗರ (ಜೂನ್ 30); ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ UAPA ಕಾಯ್ದೆಯ ಅಡಿಯಲ್ಲಿ ಪೊಲೀಸರು ಯಾರನ್ನೂ ಪ್ರಶ್ನೆ ಮಾಡದೆ ಪೊಲೀಸರು ಆರೋಪಿಯನ್ನು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಭಯೋತ್ಪಾದನೆ ಪ್ರಕರಣದ ಆರೋಪ ಹೊತ್ತು ಗುಜರಾತ್ನ ಜೈಲಿನಲ್ಲಿದ್ದ ಕಾಶ್ಮೀರ ಮೂಲದ ಬಶೀರ್ ಅಹ್ಮದ್ ಬಾಬಾ (44) ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 12 ವರ್ಷಗಳ ಬಳಿಕ ಈಗ ಗುಜರಾತ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಆ ಎಲ್ಲಾ ಆರೋಪಗಳಲ್ಲಿ ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅವರು ತಮ್ಮ ಮನೆಗೆ ಮರಳಿದ್ದಾರೆ.
ಆದರೆ, ಅವರು ಜೈಲಿನಲ್ಲಿದ್ದಾಗ, ಅವರ ಚಿಕ್ಕಪ್ಪ ಮತ್ತು ಅವರ ತಂದೆ ಗುಲಾಮ್ ನಬಿ ಬಾಬಾ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರು ಸಾವನ್ನಪ್ಪಿದರು. ಗುತ್ತಿಗೆದಾರ ರಾಗಿದ್ದ ಅವರ ತಂದೆ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದರು, ಅವರು 2017 ರಲ್ಲಿ ನಿಧನರಾದರು. ಈ ಬಗ್ಗೆ ಹಲವಾರು ದಿನಗಳು ಕಳೆದರೂ ಬಶೀರ್ ಅವರಿಗೆ ಮಾಹಿತಿ ಇರಲಿಲ್ಲ. ಬಶೀರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭ ದಲ್ಲಿ ಅವರ ತಂದೆ ಸಾವನ್ನಪ್ಪಿದ್ದರ ಮಾಹಿತಿ ತಿಳಿಯಿತು ಎಂದು ಅವರು ಹೇಳಿದ್ದಾರೆ.
ಬಶೀರ್ ಅವರು ಶ್ರೀನಗರದ ರೈನವರಿ ಪ್ರದೇಶದ ತಮ್ಮ ನಿವಾಸದ ಹತ್ತಿರ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅವರು ಎನ್ಜಿಓ ಒಂದರಲ್ಲಿ ಸಹಾಯಕ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು, ಅವರ ಭಾಗವಾಗಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.
ಫೆಬ್ರವರಿ 2010 ರಲ್ಲಿ ಅವರು ಗುಜರಾತ್ನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಕಾಶ್ಮೀರದಿಂದ ಬಂದಿದ್ದರು. ಆದರೆ, ಅವರು ಹಿಂದಿರುಗುವ ಒಂದು ದಿನ ಮೊದಲು ಅವರನ್ನು ಗುಜರಾತ್ನ ಆನಂದ್ ಜಿಲ್ಲೆಯ ಸಮರ್ಖಾ ಗ್ರಾಮದ ಬಳಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತು. ಅಲ್ಲದೆ, ಬಶೀರ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಭಾಗವಾಗಿದ್ದಾರೆ. "ಭಯೋತ್ಪಾದಕ ತರಬೇತಿ"ಗಾಗಿ ಯುವಕರ ಜಾಲವನ್ನು ಸ್ಥಾಪಿಸಲು ಬಶೀರ್ ಯೋಜಿಸುತ್ತಿದ್ದಾರೆ ಎಂದು ಎಟಿಎಸ್ ಆರೋಪಿಸಿ, ಪ್ರಕರಣ ದಾಖಲಿಸಿತ್ತು.
ಬಂಧನಕ್ಕೆ ಮುಂಚಿತವಾಗಿ, ಬಶೀರ್ ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ ಡಿಪ್ಲೊಮಾ ಪಡೆದಿದ್ದರು. ಆದರೆ ಅವರು ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ ಮತ್ತು ಬೌದ್ಧಿಕ ಆಸ್ತಿ ಕಾಯ್ದೆಯಲ್ಲಿ ಮೂರು ಸ್ನಾತಕೋತ್ತರ ಪದವಿಗಳನ್ನೂ ಪಡೆದಕೊಂಡಿದ್ದರು.
"ನಾನು ನನ್ನ ಹೆಚ್ಚಿನ ಸಮಯವನ್ನು ಜೈಲಿನ ಅಧ್ಯಯನದಲ್ಲಿ ಕಳೆದಿದ್ದೇನೆ. ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂಬ ಭರವಸೆ ನನಗೆ ಇತ್ತು" ಎಂದು ಬಶೀರ್ ತಿಳಿಸಿರುವುದಾಗಿ ನ್ಯೂಸ್ಕ್ಲಿಕ್ ವರದಿ ಮಾಡಿದೆ.
ನಾನು ಮನೆಗೆ ಹಿಂದಿರುಗಿದ ನಂತರ, ರಾಜ್ಯದಲ್ಲಿ "ನಿರುದ್ಯೋಗ, ಆತ್ಮಹತ್ಯೆ ಮತ್ತು ಹಿಂಸಾಚಾರ" ಹೆಚ್ಚುತ್ತಿರುವ ವರದಿಗಳನ್ನು ಕೇಳಿದ್ದೇನೆ ಎಂದು ಬಶೀರ್ ಹೇಳಿದರು.
ಕಾಶ್ಮೀರ ಸೇರಿದಂತೆ ದೇಶಾದ್ಯಂತ ಕಳೆದ ಮೂರು ದಶಕಗಳಲ್ಲಿ ಜೈಲಿನಲ್ಲಿದ್ದ ನೂರಾರು ಕಾಶ್ಮೀರಿಗಳಲ್ಲಿ ಬಶೀರ್ ಕೂಡ ಒಬ್ಬರು. ಹಲವರ ವಿರುದ್ದ "ಭಯೋತ್ಪಾದನೆ" ಸಂಬಂಧಿತ ಚಟುವಟಿಕೆಗಳಲ್ಲಿ ಯೋಜನೆ ಮತ್ತು ಭಾಗವಹಿಸಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ವರ್ಷಗಳಲ್ಲಿ, ಡಜನ್ಗಟ್ಟಲೆ ಜನರು ನಿರಪರಾಧಿಗಳು ಎಂದು ಸಾಬೀತಾಗಿದೆ ಮತ್ತು ಅವರನ್ನು ಭಾರತೀಯ ನ್ಯಾಯಾಲಯಗಳು ಆರೋಪ ಮುಕ್ತಗೊಳಿಸಿವೆ.
ತನ್ನ ಮಗನ ಹಿಂದಿರುಗುವಿಕೆಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದೆ ಎಂದು ಅವರ ನ ತಾಯಿ ಮೊಕ್ತಾ ತಿಳಿಸಿದ್ದಾರೆ. “ಆತನ ಬಂಧನದ ನಂತರ ನಮ್ಮ ಕುಟುಂಬವು ಸಾಕಷ್ಟು ತೊಂದರೆ ಅನುಭವಿಸಿತು. ನನ್ನ ಪತಿಗೆ ನಿಧನರಾದರು ಮತ್ತು ಮನೆಯಲ್ಲಿ ಅವಿವಾಹಿತ ಇಬ್ಬರು ಹೆಣ್ಣು ಮಕ್ಕಳಿದ್ದರು. ನಮ್ಮ ಕಷ್ಟ ಅಲ್ಲಾಹನಿಗೆ ಮಾತ್ರ ತಿಳಿದಿದೆ” ಎಂದು ಅವರು ಹೇಳಿದ್ದಾರೆ.
ಬಶೀರ್ ಅವರ ಸಹೋದರಿಯರಿಬ್ಬರೂ ಈಗ ಮದುವೆಯಾಗಿದ್ದಾರೆ. ಅವರ ಸಹೋದರ ನಜೀರ್ ಅಹ್ಮದ್ ಅವರ ಕುಟುಂಬದ ಹೊಣೆ ಹೊತ್ತು, ಕುಟುಂಬ ನಿರ್ವಹಣೆಗಾಗಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಇನ್ನೂ ಮದುವೆಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ