ಸಂಭಾಲ್: ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಉತ್ತರ ಪ್ರದೇಶ (Uttar Pradesh Govt) ಸರ್ಕಾರದ ಸಚಿವರೊಬ್ಬರಿಗೆ ಪತ್ರಕರ್ತನೊಬ್ಬ (Journalist) ನೇರವಾಗಿ ಪ್ರಶ್ನೆ ಕೇಳಿದ್ದಕ್ಕೆ ಆತನನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್ನ ಬುದ್ಧನಗರ ಖಾಂಡ್ವಾ ಗ್ರಾಮದಲ್ಲಿ ನಡೆದಿದೆ. ಯುಟ್ಯೂಬ್ ವೇದಿಕೆಯಲ್ಲಿ ನ್ಯೂಸ್ ಚಾನೆಲ್ ನಡೆಸುತ್ತಿರುವ ಪತ್ರಕರ್ತ ಸಂಜಯ್ ರಾಣಾ (Sanjay Rana) ಅವರು ಬಂಧನಕ್ಕೊಳಗಾದ ಪತ್ರಕರ್ತನಾಗಿದ್ದು, ಯೋಗಿ ಆದಿತ್ಯನಾಥ್ (Yogi Adithyanath) ಸಂಪುಟದ ಸಚಿವೆಯ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಾರ್ಚ್ 11ರಂದು ಖಾಂಡ್ವಾ ಗ್ರಾಮದಲ್ಲಿ ಚೆಕ್ ಡ್ಯಾಮ್ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರಕಾರದ ಮಾಧ್ಯಮಿಕ ಶಿಕ್ಷಣ ಸಚಿವೆ ಗುಲಾಬ್ ದೇವಿ ಆಗಮಿಸಿದ್ದರು. ಈ ವೇಳೆ ಅಭಿವೃದ್ಧಿ ಕಾರ್ಯಗಳ ಕುರಿತು ಪತ್ರಕರ್ತ ಸಂಜಯ್ ರಾಣಾ ಅವರು ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದರಿಂದ ನೂರಾರು ಜನರ ಮುಂದೆ ತೀವ್ರ ಮುಜುಗರಕ್ಕೊಳಗಾದ ಸಚಿವೆ ತನ್ನ ಬೆಂಬಲಿಗರ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಆಗ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಪತ್ರಕರ್ತನ ವಿರುದ್ಧ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾನೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸಚಿವೆ ಗುಲಾಬ್ ದೇವಿ ನೀಡಿದ್ದ ಅನೇಕ ಅಭಿವೃದ್ಧಿ ಭರವಸೆಗಳಲ್ಲಿ ಬಹುತೇಕವು ಇನ್ನೂ ಈಡೇರದಿರುವ ಬಗ್ಗೆ ಪತ್ರಕರ್ತ ಸಂಜಯ್ ರಾಣ್ ಪ್ರಶ್ನೆ ಮಾಡಿದ್ದರು. ಈ ವೇಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ಯುವ ಮೋರ್ಚಾದ ಮುಖಂಡ ಶುಭಂ ರಾಘವ್, ಕಾರ್ಯಕ್ರಮ ಮುಗಿದ ಬಳಿಕ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಸಚಿವೆಗೆ ಪತ್ರಕರ್ತ ಸಂಜಯ್ ರಾಣಾ ಮದುವೆ ಹಾಲ್, ಸಾರ್ವಜನಿಕ ಶೌಚಾಲಯಗಳು ಹಾಗೂ ಗ್ರಾಮದಲ್ಲಿ ರಸ್ತೆಗಳು ನಿರ್ಮಾಣ ಆಗದಿರುವ ಬಗ್ಗೆ ನೇರವಾಗಿ ಪ್ರಶ್ನಿಸಿದ್ದರು. ಪತ್ರಕರ್ತ ಮತ್ತು ಸಚಿವೆಯ ಪ್ರಶ್ನೋತ್ತರದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಗ್ರಾಮಸ್ಥರು ಪತ್ರಕರ್ತನ ಪ್ರಶ್ನೆಗಳಿಗೆ ಬೆಂಬಲಿಸುತ್ತಿರುವುದು ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವ ಬಗ್ಗೆ ದನಿ ಎತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ಮೂಲಕ ಗ್ರಾಮಸ್ಥರು ಕೂಡ ಅಭಿವೃದ್ಧಿ ಕಾರ್ಯಗಳು ಆಗದಿರುವ ಬಗ್ಗೆ ಅಸಮಾಧಾನ ಹೊಂದಿರುವುದು ಖಾತ್ರಿಯಾಗಿದೆ.
ಇದನ್ನೂ ಓದಿ: Cop Death: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭದ್ರತಾ ಸಿಬ್ಬಂದಿ ಗುಂಡು ತಗುಲಿ ಸಾವು! ಅಷ್ಟಕ್ಕೂ ಆಗಿದ್ದೇನು?
ಪತ್ರಕರ್ತ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಮೂಗು ತೂರಿಸಿ ಅಡ್ಡಿಯುಂಟು ಮಾಡುತ್ತಿದ್ದಾನೆ ಎಂದು ಬಿಜೆಪಿ ಮುಖಂಡ ಶುಭಂ ರಾಘವ್ ದೂರು ನೀಡಿದ್ದು, ಪೊಲೀಸರು ಸಂಜಯ್ ರಾಣಾ ವಿರುದ್ಧ ಐಪಿಸಿ ಸೆಕ್ಷನ್ 323, 506, 504 ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಸಿಆರ್ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಬಂಧಿಸಿದ್ದಾರೆ. ಸಾಮಾನ್ಯವಾಗಿ ಗಂಭೀರ ಪ್ರಕರಣಗಳಲ್ಲಿ ಮಾತ್ರ ಪೊಲೀಸರು ವಾರೆಂಟ್ ಇಲ್ಲದೆಯೇ ಆರೋಪಿಗಳನ್ನು ಬಂಧಿಸಲು ಈ ಸೆಕ್ಷನ್ ಬಳಸುತ್ತಾರೆ. ಆದರೆ ಪತ್ರಕರ್ತ ತಾನು ಕಾರ್ಯಕ್ರಮಕ್ಕೆ ಅಡ್ಡಿ ಮಾಡಿಲ್ಲ, ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಪತ್ರಕರ್ತ ಸಂಜಯ್ ರಾಣಾ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ