ನವದೆಹಲಿ, ಜೂ. 30: ಇತ್ತೀಚೆಗೆ ಚಂಡೀಘಡದಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ (GST Council Meeting) ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಜಿಎಸ್ಟಿ ಪರಿಹಾರ ಮುಂದುವರೆಸುವಂತೆ ಒತ್ತಾಯ ಮಾಡಿಲ್ಲ. ಜಿಎಸ್ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಆಗುವ ನಷ್ಟ ಭರಿಸಿ ಕೊಡಲು 14% ಪರಿಹಾರ ನೀಡಬೇಕು ಎಂದು ಹಿಂದೆ ತೀರ್ಮಾನವಾಗಿತ್ತು. 2017ರ ಜುಲೈ 1ರಿಂದ ಇದು ಇದೇ ಜೂನ್ 30ಕ್ಕೆ ಕೊನೆಯಾಗಲಿದೆ. ಈಗ ಪರಿಹಾರ ಕೊಡುವುದನ್ನು ನಿಲ್ಲಿಸಿದರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಕೂಡಲೇ ಜಿಎಸ್ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.
ಇನ್ನೂ 5 ವರ್ಷ ಜಿಎಸ್ಟಿ ಪರಿಹಾರ ಕೊಡಬೇಕು
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಹಳ ಜನ ಜಿಎಸ್ಟಿ ಪರಿಹಾರವನ್ನು ಇನ್ನೂ 3 ವರ್ಷ ಅಥವಾ 5 ವರ್ಷ ಮುಂದುವರೆಸಬೇಕು ಎಂದಿದ್ದಾರೆ. ನನ್ನ ಪ್ರಕಾರ 5 ವರ್ಷ ಮುಂದುವರೆಸಬೇಕು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಕೇಂದ್ರ ಸರ್ಕಾರದ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ತುತ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಅದನ್ನು ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗೆ ಇಲ್ಲ. ಬಿಜೆಪಿಯೇತರ ರಾಜ್ಯಗಳು ಇದನ್ನು ಮುಂದುವರೆಸಬೇಕು ಎಂದು ಹೆಚ್ಚು ಒತ್ತಾಯ ಮಾಡಿವೆ. ನಿನ್ನೆ ಕೂಡ ಈ ಬಗ್ಗೆ ಯಾವ ತೀರ್ಮಾನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಸ್ ಮೂಲಕ ಸುಲಿಗೆ ಮಾಡುತ್ತಿರುವ ಕೇಂದ್ರ
ಜಿಎಸ್ಟಿ ಪರಿಹಾರ ನೀಡಲು ಸೆಸ್ ಹಾಕುತ್ತಿದ್ದಾರೆ. ಇದನ್ನು ಕೊಡೋದು ರಾಜ್ಯಗಳೇ. ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ವಸ್ತುಗಳ ಮೇಲೆ ಸೆಸ್ ಹಾಕಿ ಕೇಂದ್ರ ಸರ್ಕಾರವೇ ಹಣ ಸಂಗ್ರಹಿಸಿಕೊಳ್ಳುತ್ತದೆ. ಈ ಹಣದಲ್ಲಿ ಇಷ್ಟು ದಿನ ಪರಿಹಾರ ನೀಡುತ್ತಿದ್ದರು. 2026ರ ವರೆಗೆ ಸೆಸ್ ಸಂಗ್ರಹ ಮುಂದುವರೆದರೂ ರಾಜ್ಯಗಳಿಗೆ ಪಾಲು ಸಿಗಲ್ಲ. ಈ ರೀತಿ ಸೆಸ್ ಸಂಗ್ರಹ ಮಾಡಿದ್ರೂ ತೊಂದರೆಯಲ್ಲಿರುವ ರಾಜ್ಯಗಳಿಗೆ ಪರಿಹಾರ ನೀಡುತ್ತಿಲ್ಲ, ಇದಕ್ಕೆ ನನ್ನ ವಿರೋಧವಿದೆ. ಜಿಎಸ್ಟಿ ಪರಿಹಾರವನ್ನು ಮುಂದಿನ 5 ವರ್ಷಗಳ ವರೆಗೆ ಮುಂದುವರೆಸಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.
ಸಿಎಂ ಬೊಮ್ಮಾಯಿಯಿಂದಲೇ ರಾಜ್ಯಕ್ಕೆ ಅನ್ಯಾಯ
ಜಿಎಸ್ಟಿ ಜಾರಿ ಮೊದಲು 14% ಇದ್ದ ತೆರಿಗೆ ಬೆಳವಣಿಗೆ ಈಗ 6% ಇದೆ. ಇದಕ್ಕೆ ಕೊವಿಡ್ ಕಾರಣ ಎಂದು ಹೇಳಿದರೂ, ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಯಾರು? ಕೇಂದ್ರ ಸರ್ಕಾರ ಅಲ್ಲವೇ? ಬಸವರಾಜ ಬೊಮ್ಮಾಯಿ ಅವರು ಜಿಎಸ್ಟಿ ಸಭೆಗೆ ಹೋಗಿದ್ದರೂ ಕೂಡ ಬೇಡಿಕೆಯನ್ನೇ ಇಟ್ಟಿಲ್ಲ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಇದನ್ನು ಸರಿಪಡಿಸುವ ಪ್ರಯತ್ನವನ್ನು ಬೊಮ್ಮಾಯಿ ಅವರು ಮಾಡಿಲ್ಲ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಬೆಲೆ ಏರಿಸಿದ ಕೇಂದ್ರ ಸರ್ಕಾರ
ಕೆಲವು ವಸ್ತುಗಳ ಮೇಲಿನ ಜಿಎಸ್ಟಿ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. 12% ಇಂದ 18%, ಇನ್ನು ಕೆಲವು 0% ಇಂದ 18%, 5% ಇದ್ದದ್ದನ್ನು 12% ಗೆ ಏರಿಕೆ ಮಾಡಿದ್ದಾರೆ. ರೈತರು ಹಾಗೂ ಜನ ಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್ ಮೆರಿನ್ ಪಂಪ್ ಗಳ ಮೇಲೆ 12% ಇದ್ದ ತೆರಿಗೆಯನ್ನು 15% ಗೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು 12% ಇಂದ 18% ಗೆ ಏರಿಕೆ ಮಾಡಿದ್ದಾರೆ. ಇದರಿಂದ ರೈತರಿಗೆ, ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಲ್ವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಜನ ಸಾಮಾನ್ಯರ ಜೇಬಿಗೆ ಕತ್ತರಿ
ಜಿಎಸ್ಟಿ ಮೊದಲೇ ಅವೈಜ್ಞಾನಿಕವಾಗಿದೆ, ರಾಜ್ಯಗಳು ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಇಂತಹಾ ಸಂದರ್ಭದಲ್ಲಿ, ಜನ ಸಾಮಾನ್ಯರು ಪೆಟ್ರೋಲ್, ಡೀಸೆಲ್, ಗ್ಯಾಸ್, ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ ದುಬಾರಿಯಾಗಿರುವ ಇಂಥಾ ಸಮಯದಲ್ಲೇ ತೆರಿಗೆ ಏರಿಕೆ ಮಾಡಿದ್ದಾರೆ. ಸೋಲಾರ್ ಸಿಸ್ಟಂಗಳು ಮತ್ತು ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇಂದ 12% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಧಾನ್ಯಗಳನ್ನು ಸ್ವಚ್ಚ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲೆ ಇದ್ದ ತೆರಿಗೆ 12% ಇಂದ 18% ಗೆ ಹೆಚ್ಚಿಸಿದ್ದಾರೆ. ಇಟ್ಟಿಗೆ ಮಾಡುವ ಜಾಗ್ ವರ್ಕ್ ಗಳ ಮೇಲಿನ ತೆರಿಗೆಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ.
ಎಲ್ಇಡಿ ಬಲ್ಬ್ ಮತ್ತು ಸಂಬಂಧಿತ ವಸ್ತುಗಳ ಮೇಲೆ 12% ಇಂದ 18% ಗೆ ಏರಿಸಲಾಗಿದೆ. ಬರೆಯುವ ಮತ್ತು ಮುದ್ರಿಸುವ ಇಂಕ್ ಗಳ ಮೇಲಿನ ತೆರಿಗೆಯನ್ನು 12% ಇಂದ 18% ಗೆ ಹೆಚ್ಚಿಸಲಾಗಿದೆ. ಇದರಿಂದ ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಮ್ಯಾಪ್ ಗಳು ಹಾಗೂ ಶಿಕ್ಷಣದ ಉದ್ದೇಶಕ್ಕೆ ಬಳಸುವ ಚಾರ್ಟ್ ಗಳು, ಗ್ಲೋಬ್ ಮಾದರಿಗಳಿಗೆ ಈ ವರೆಗೆ ತೆರಿಗೆ ವಿನಾಯಿತಿ ಇತ್ತು, ಅದನ್ನು 12% ಮಾಡಿದ್ದಾರೆ. ಬ್ಯಾಂಕುಗಳ ಚೆಕ್ ಬುಕ್ ಮೇಲೆ ತೆರಿಗೆ ಇರಲಿಲ್ಲ, ಈಗ 18% ತೆರಿಗೆ ಹಾಕಿದ್ದಾರೆ. ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ? ಎಂದು ಕಿಡಿ ಕಾರಿದರು.
ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ
ನನ್ನ ಪ್ರಕಾರ ಜಿಎಸ್ಟಿ ಮಾಡಿರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ. ತೆರಿಗೆ ಹಾಕುವುದು ರಾಜ್ಯ ಸರ್ಕಾರದ ಕೆಲಸ, ಈಗ ಜಿಎಸ್ಟಿ ಮಾಡಿ ಎದ್ವಾತದ್ವಾ ಏರಿಸಿದ್ರೆ ಹೇಗೆ? ಜಿಎಸ್ಟಿ ಕೌನ್ಸಿಲ್ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತೆ, ಹೆಚ್ಚಿನ ಕಡೆ ಬಿಜೆಪಿ ಸರ್ಕಾರಗಲೇ ಇವೆ, ಜಿಎಸ್ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಇರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಾರೆ ಎಂದರು.
ಪರೋಕ್ಷವಾಗಿ ತೆರಿಗೆ ಹೆಚ್ಚಿಸಿರುವ ಕೇಂದ್ರ
ಒಟ್ಟಾರೆ ಇಂದು ಬೆಲೆಯೇರಿಕೆ ಹೆಚ್ಚಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಕಡಿಮೆ ಮಾಡುವ ಬದಲು ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ, ರಾಜ್ಯಗಳಿಗೆ ಜಿಎಸ್ಟಿ ಪರಿಹಾರವನ್ನು ಮುಂದುವರೆಸಿಲ್ಲ. ಕಾರ್ಪೋರೇಟ್ ಕಂಪೆನಿಗಳ ಮೇಲಿನ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದಾರೆ ಬಿಟ್ಟರೆ ಇದನ್ನು ಹೆಚ್ಚು ಮಾಡೇ ಇಲ್ಲ. ಬಡವರು, ಸಾಮಾನ್ಯ ಜನರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ಇದು ಮೋದಿ ಅವರ ಸರ್ಕಾರ ಮಾಡಿರುವ ಘೋರ ಅಪರಾಧ ಎಂದು ಹೇಳಿದರು.
ಕಾರ್ಪೋರೇಟ್ ತೆರಿಗೆ ಏರಿಕೆ ಮಾಡಿ
ಈಗ ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಒತ್ತಾಯಿಸುತ್ತೇನೆ. ಬೇಕಾದರೆ ಕಾರ್ಪೋರೇಟ್ ತೆರಿಗೆ ಏರಿಕೆ ಮಾಡಿ. ಕೊರೊನಾ ಬಂದಾಗ ಕಾರ್ಪೋರೇಟ್ ಬಾಡಿಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ಹಾಕೋದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರ? ಈಗಾಗಲೇ ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ಬದುಕೋದು ಕಷ್ಟವಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ