ನವದೆಹಲಿ: ಕಾಂಗ್ರೆಸ್ (Congress) ನಾಯಕ ವಯನಾಡು ಸಂಸದ ರಾಹುಲ್ ಗಾಂಧಿ (Rahul Gandhi) ತಮ್ಮಅಜ್ಜಿ ಇಂದಿರಾ ಗಾಂಧಿ (Indira Gandhi) ಹಾಗೂ ತಂದೆ ರಾಜೀವ್ ಗಾಂಧಿ (Rajeev Gandhi) ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಇಬ್ಬರು ಮಾಜಿ ಪ್ರಧಾನಿಗಳಾದ ತಮ್ಮ ಅಜ್ಜಿ ಹಾಗೂ ತಂದೆಗೆ ತಾವೂ ಶೀಘ್ರದಲ್ಲಿ ಸಾಯಲಿದ್ದೇವೆ ಎಂಬ ಮಾಹಿತಿ ಮೊದಲೇ ತಿಳಿದಿತ್ತು ಎಂದು ಇಟಲಿಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಹಲ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ಇಂದಿರಾ ಗಾಂಧಿ ಅವರು 'ತಾನೂ ಸಾಯುತ್ತಾನೆ, ನೀನು ಅಳಬಾರದು, ಅದರಲ್ಲೂ ಸಾರ್ವಜನಿಕವಾಗಿ ಅಳದಿರುವಂತೆ ವೈಯಕ್ತಿಕವಾಗಿ ನನಗೆ ಹೇಳಿದ್ದರು' ಎಂದು ರಾಹುಲ್ ನೆನಪಿಸಿಕೊಂಡಿದ್ದಾರೆ.
ಇಟಲಿಯ ದಿನಪತ್ರಿಕೆ ಕೊರಿಯರ್ ಡೆಲ್ಲಾ ಸೆರಾದೊಂದಗಿನ ಸಂಭಾಷಣೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರೊಂದಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಾವೂ ಇಂದಿರಾ ಅವರ ನೆಚ್ಚಿನ ಮೊಮ್ಮಗನಾಗಿದ್ದೆ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಇಟಲಿ ಅಜ್ಜಿಯ ನೆಚ್ಚಿನವರಾಗಿದ್ದರು ಎಂದು ರಾಹುಲ್ ಹೇಳಿದ್ದಾರೆ.
ಇಂದಿರಾ ಗಾಂಧಿ ನೆಚ್ಚಿನ ಮೊಮ್ಮಗ
" ನನಗೆ ಪಾಲಕ್ ಮತ್ತು ಬಟಾಣಿ ಹಿಡಿಸುತ್ತಿರಲಿಲ್ಲ, ಆದರೆ ನನ್ನ ತಂದೆ ರಾಜೀವ್ ತುಂಬಾ ಕಟ್ಟುನಿಟ್ಟಾಗಿದ್ದರು ಮತ್ತು ನಾನು ತಟ್ಟೆಯಲ್ಲಿರುವುದನ್ನೆಲ್ಲಾ ಮುಗಿಸಬೇಕೆಂದು ಎಂದು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ನನ್ನ ಅಜ್ಜಿ ಪತ್ರಿಕೆ ತೋರಿಸಿ 'ರಾಹುಲ್ ಇದನ್ನು ಓದು' ಎಂದು ತಂದೆ ಕಾಣದ ಹಾಗೆ ಪತ್ರಿಕೆಯನ್ನ ಮರೆಮಾಡುತ್ತಿದ್ದರು. ಈ ವೇಳೆ ನಾನು ಅವರ ತಟ್ಟೆಗೆ ಪಾಲಕ್ ಮತ್ತು ಬಟಾಣಿಯನ್ನು ಹಾಕುತ್ತಿದ್ದೆ" ಎಂದು ಇಂದಿರಾ ಗಾಂಧಿ ಅವರೊಂದಿಗಿನ ತಮ್ಮ ಸಂಬಂಧ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.
ಅಜ್ಜಿ-ತಂದೆಗೆ ಸಾಯುವ ಭಾವನೆಯಿತ್ತು
ತಮ್ಮ ಅಜ್ಜಿ ಮತ್ತು ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ತಾವೂ ಶೀಘ್ರದಲ್ಲೇ ಸಾಯುತ್ತೇವೆಂಬ ಭಾವನೆಯಿತ್ತು. ಒಂದು ವೇಳೆ ತಮಗೆ ಸಾವು ಸಂಭವಿಸಿದರೆ ಆ ದಿನ ಅಳಬಾರದು ಎಂದು ಅಜ್ಜಿ (ಇಂದಿರಾ ಗಾಂಧಿ) ನನಗೆ ವೈಯಕ್ತಿಕವಾಗಿ ಎಚ್ಚರಿಕೆ ನೀಡಿದ್ದರು. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ಅಳದಿರಲು ಪ್ರಯತ್ನಿಸುವಂತೆ ನನಗೆ ಸೂಚನೆ ನೀಡಿದ್ದರು ಎಂದು ರಾಹುಲ್ ಗಾಂಧಿ ಬಹಿರಂಗ ಪಡಿಸಿದ್ದಾರೆ.
ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ನಂತರ 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರನ್ನು ಅವರ ನಿವಾಸದಲ್ಲಿಯೇ ಅವರ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರು ಹತ್ಯೆಗೈದಿದ್ದರು.
ಸಾವು ಬರುತ್ತದೆ ರಾಜೀವ್ ಗಾಂಧಿ ಭಾವಿಸಿದ್ದರು
" ತಂದೆ ರಾಜೀವ್ ಗಾಂಧಿ ಅವರಿಗೆ ತಮಿಳ್ ಟೈಗರ್ಸ್ ತನ್ನನ್ನು ಕೊಲ್ಲುತ್ತಾರೆ ಎಂಬುದು ಮೊದಲೇ ಅರಿವಿತ್ತಾ ಎನ್ನುವುದರ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಆದರೆ ಅಂತಹ ಶಕ್ತಿಗಳು ತಮ್ಮನ್ನು ಕೊಲ್ಲಬಹುದು ಎಂಬುದನ್ನು ಅವರು ಮೊದಲೇ ಗ್ರಹಿಸದ್ದರು" ಎಂದು ರಾಹುಲ್ ತಿಳಿಸಿದ್ದಾರೆ.
1991ರ ಮೇ 21ರಂದು ಶ್ರೀಪೆರಂಬದೂರಿನಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ ರಾಜೀವ್ ಗಾಂಧಿ ಹತ್ಯೆಗೀಡಾಗಿದ್ದರು. ರಾತ್ರಿ 10:10 ರ ಸಮಯದಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂನ (LTTE) ಸದಸ್ಯೆಯಾದ ತೆನ್ಮೋಳಿ ರಾಜರತ್ನಂ ಎಂಬ ಮಹಿಳೆ ಸಾರ್ವಜನಿಕವಾಗಿ ರಾಹುಲ್ ಗಾಂಧಿಯ ಬಳಿಗೆ ಬಂದು ಅವರನ್ನು ಸ್ವಾಗತಿಸಿದರು. ನಂತರ ರಾಜೀವ್ ಪಾದಗಳನ್ನು ಮುಟ್ಟುವಂತೆ ನಟಿಸಿ RDX ಸ್ಫೋಟಕಗಳನ್ನು ತುಂಬಿದ ಬೆಲ್ಟ್ ಅನ್ನು ಸ್ಫೋಟಿಸಿಕೊಳ್ಳುವ ಮೂಲಕ ಮಾಜಿ ಪ್ರಧಾನಿ ಸಾವಿಗೆ ಕಾರಣಳಾಗಿದ್ದಳು.
ನನಗೆ ಪ್ರಾಣದ ಭಯವಿಲ್ಲ
ತಂದೆ ಮತ್ತು ಅಜ್ಜಿ ಹತ್ಯೆಗೀಡಾಗಿರುವುದರಿಂದ ತಮಗೂ ಭಯವಿದೆ ಎಂಬ ಊಹಾಪೋಹವನ್ನು ರಾಹುಲ್ ತಿರಸ್ಕರಿಸಿದ್ದಾರೆ. ಇದು ಭಯದ ವಿಷಯವಲ್ಲ, ನಾನು ಏನು ಮಾಡಬೇಕೋ ಅಂದು ಕೊಂಡಿದ್ದೇನೋ, ಅದನ್ನು ಮಾಡುತ್ತೇನೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ