ನವದೆಹಲಿ: ಭಾರತಾದ್ಯಂತ (India) ಇಂದು ಗಣರಾಜ್ಯೋತ್ಸವನ್ನು (Republic Day) ಆಚರಿಸಲಾಗುತ್ತಿದೆ. ಮೊದಲ ಬಾರಿಗೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವೆಂದರೆ ಇದೇ ಸಂದರ್ಭದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ (Attari-Wagah Border) ಭಾರತೀಯ ಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನ ಭದ್ರತಾ ಪಡೆಗೆ (Pakistan Rangers) ಸಿಹಿಯನ್ನು (Sweets) ಹಂಚಿದರು. ಭಾರತ ಮತ್ತು ಪಾಕಿಸ್ತಾನದ ಗಡಿಯ ಶೂನ್ಯ ಗೆರೆಗೆ ಕೆಲವೇ ಮೀಟರ್ ಹತ್ತಿರದಲ್ಲಿ ಬಿಎಸ್ಎಫ್ನ (Border Security Force) ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಅವರು ಭಾರತದ ತ್ರಿವರ್ಣ ಧ್ವಜದ ಧ್ವಜಾರೋಹಣ ನೆರವೇರಿಸಿದರು.
Punjab | BSF (Border Security Force) exchanged sweets with Pakistan Rangers at the Attari-Wagah border today on #RepublicDay2023 pic.twitter.com/Q2agwrsDtq
— ANI (@ANI) January 26, 2023
ಗಣರಾಜ್ಯೋತ್ಸವ ಬಗ್ಗೆ ಬಿಎಸ್ಎಫ್ ಕಮಾಂಡರ್ ಜಸ್ಬೀರ್ ಸಿಂಗ್ ರಿಯಾಕ್ಷನ್
ಇದೇ ವೇಳೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬಿಎಸ್ಎಫ್ ಕಮಾಂಡರ್ ಜಸ್ಬೀರ್ ಸಿಂಗ್ ಅವರು, ದೇಶದ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜೆಸಿಪಿ ಅಟ್ಟಾರಿಯು ರಾಷ್ಟ್ರೀಯತೆಯ ಸಂಕೇತವಾಗಿ ವಿಶೇಷ ಹೆಗ್ಗುರುತಾಗಿದೆ. ಇಂದು ಸಂಜೆ ಹಿಮ್ಮೆಟ್ಟುವಿಕೆ ಸಮಾರಂಭ ನಡೆಯುತ್ತದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಜನರು ಆಗಮಿಸಿ ಇಲ್ಲಿನ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬುತ್ತಾರೆ. ಅಲ್ಲದೇ ಇಂದು ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಪಾಕಿಸ್ತಾನದ ರೇಂಜರ್ಗಳಿಗೆ ಸಿಹಿತಿಂಡಿಯನ್ನೂ ನೀಡಿದ್ದೇವೆ ಎಂದು ಹೇಳಿದ್ದಾರೆ.
ಧ್ವಜಾರೋಹಣ ನೆರವೇರಿಸಿದ ದ್ರೌಪದಿ ಮುರ್ಮು
74ನೇ ಗಣರಾಜ್ಯೋತ್ಸವನ್ನು ನವದೆಹಲಿಯ ಕರ್ತವ್ಯ ಪಥದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಇನ್ನೂ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಆಗಮಿಸಿದ್ದರು.
105 ಎಂಎಂ ಲೈಟ್ ಫೀಲ್ಡ್ ಭಾರತೀಯ ನಿರ್ಮಿತ ಬಂದೂಕುಗಳಿಂದ ಸೆಲ್ಯೂಟ್
ಈ ವರ್ಷದ ಮೆರವಣಿಗೆಯನ್ನು ಹೊಸದಾಗಿ ಉದ್ಘಾಟನೆಗೊಂಡ ಕರ್ತವ್ಯ ಪಥದಲ್ಲಿ ನಡೆಸಲಾಯಿತು. ಈ ವರ್ಷ 21-ಗನ್ ಸೆಲ್ಯೂಟ್ ನ್ನು ಮೊದಲ ಬಾರಿಗೆ 105 ಎಂಎಂ ಲೈಟ್ ಫೀಲ್ಡ್ ಭಾರತೀಯ ನಿರ್ಮಿತ ಬಂದೂಕುಗಳಿಂದ ನೀಡಲಾಯಿತು. ಇದು ರಕ್ಷಣಾಪಡೆಯಲ್ಲಿ ಬೆಳೆಯುತ್ತಿರುವ 'ಆತ್ಮನಿರ್ಭರವನ್ನು ಪ್ರತಿಬಿಂಬಿಸುತ್ತದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಅಸಿಸ್ಟೆಂಟ್ ಕಮಾಂಡೆಂಟ್ ಪೂನಂ ಗುಪ್ತಾ ನೇತೃತ್ವದ 'ರಾಷ್ಟ್ರದ ಶಾಂತಿಪಾಲಕರು' ಸಂಪೂರ್ಣ ಮಹಿಳಾ ತುಕಡಿ. ವಿಶ್ವದಲ್ಲೇ ಮೊಟ್ಟಮೊದಲ ಮಹಿಳಾ ಸಶಸ್ತ್ರ ಪೊಲೀಸ್ ಬೆಟಾಲಿಯನ್ ನ್ನು ಬೆಳೆಸಿದ ಹೆಗ್ಗಳಿಕೆಗೆ ಈ ಪಡೆ ಪಾತ್ರವಾಗಿದೆ.
ಆರು 'ಅಗ್ನಿವೀರ್'ಗಳು ಮೊದಲ ಬಾರಿಗೆ ಮೆರವಣಿಗೆಯ ಭಾಗವಾಗಿದ್ದವು. ಮೊದಲ ಬಾರಿಗೆ, ಈಜಿಪ್ಟ್ ಸಶಸ್ತ್ರ ಪಡೆಗಳ ಸಂಯೋಜಿತ ಬ್ಯಾಂಡ್ ಮತ್ತು ಮೆರವಣಿಗೆಯ ತಂಡವು ವಿದ್ಯುಕ್ತ ಮೆರವಣಿಗೆಯಲ್ಲಿ ಭಾಗವಹಿಸಿತು. ಕರ್ನಲ್ ಎಲ್ಖರಸಾವಿ ನೇತೃತ್ವದ ಈಜಿಪ್ಟಿನ ಸಶಸ್ತ್ರ ಪಡೆಗಳ ಮುಖ್ಯ ಶಾಖೆಗಳನ್ನು ಪ್ರತಿನಿಧಿಸುವ 144 ಸೈನಿಕರನ್ನು ಒಳಗೊಂಡಿತ್ತು.
ಪರೇಡ್ನಲ್ಲಿ ದೇಶದ ಪರಂಪರೆ ಹಾಗೂ ಸಂಸ್ಕೃತಿ ಸ್ತಬ್ಧಚಿತ್ರ ಪ್ರದರ್ಶನ
ಇನ್ನು ಈ ಪರೇಡ್ನಲ್ಲಿ ಎಂದಿನಂತೆ ದೇಶದ ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ಕರ್ನಾಟಕ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧ ಚಿತ್ರಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಈ ಮೂಲಕ ಸತತ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯಸ್ಸು ಕರ್ನಾಟಕ ಪಾಲಾಗಲಿದೆ.
ಚಾಮರಾಜಪೇಟೆಯಲ್ಲೂ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ
ಇನ್ನೂ ಕರ್ನಾಟಕದಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬೆಂಗಳೂರು ಉತ್ತರ ಉಪವಿಭಾಗ ಅಧಿಕಾರಿ ಡಾ.ಎಂಜೆ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ಈದ್ಗಾ ಮೈದಾನದಲ್ಲಿ ರಾಷ್ಟಗೀತೆ ಹಾಗೂ ನಾಡಗೀತೆಯೂ ಮೊಳಗಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಚಾಮರಾಜಪೇಟೆ ನಾಗರೀಕರು ಭಾರತ ಮಾತೆಗೆ ಜೈಕಾರ ಹಾಕಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು.
ಇದನ್ನೂ ಓದಿ: Republic Day: ಗಣರಾಜ್ಯೋತ್ಸವದ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ರಾಜ್ಯಪಾಲರು
ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬೆಂಗಳೂರು ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ