ಲಾಹೋರ್: ಪಾಕಿಸ್ತಾನದ ಲಾಹೋರ್ನ ನೌಲಾಖಾ ಬಜಾರ್ನಲ್ಲಿರುವ ಪ್ರಸಿದ್ಧ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ, ಇದನ್ನು ವಿರೋಧಿಸಿರುವ ಭಾರತ ಸರ್ಕಾರ ಪಾಕಿಸ್ತಾನದ ಹೈಕಮಿಷನ್ ಎದುರು ಸೋಮವಾರ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಲಾಹೋರ್ನ ನೌಲಾಖಾ ಬಜಾರ್ನಲ್ಲಿರುವ “ಭಾಯಿ ತರು ಸಿಂಗ್ ಜಿ” ಅವರ ಹುತಾತ್ಮ ಸ್ಥಳವಾದ ಗುರುದ್ವಾರ ಅಲ್ಲಿನ ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರ. ಆದರೆ, ಪಾಕಿಸ್ತಾನ ಈ ಸ್ಥಳವನ್ನು ಇಸ್ಲಾಂ ಧರ್ಮ ಪ್ರವರ್ತಕರಲ್ಲೊಬ್ಬರಾದ "ಶಾಹಿದ್ ಗಂಜ್" ಅವರ ಸ್ಥಳವೆಂದು ಹೇಳಿಕೊಂಡಿದೆ. ಅಲ್ಲದೆ, ಈ ಸ್ಥಳವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ದಾಖಲಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, "ಈ ಘಟನೆಯ ಬಗ್ಗೆ ಭಾರತ ಸರ್ಕಾರ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಮತ್ತು ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. ತಮ್ಮ ಧಾರ್ಮಿಕ ಹಕ್ಕುಗಳು ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಯೋಗಕ್ಷೇಮವನ್ನು ಕಾಪಾಡುವಂತೆ ಪಾಕಿಸ್ತಾನವನ್ನು ಕೇಳಿಕೊಳ್ಳಲಾಗಿದೆ" ಎಂದಿದ್ದಾರೆ.
ಲಾಹೋರ್ನಲ್ಲಿರುವ "ಶಾಹಿದಿ ಅಸ್ತಾನ್ ಭಾಯಿ ತರು ಜಿ" ಎಂಬುದು ಐತಿಹಾಸಿಕ ಗುರುದ್ವಾರವಾಗಿದ್ದು, ಭಾಯಿ ತರು ಜಿ 1745 ರಲ್ಲಿ ಇದೇ ಜಾಗದಲ್ಲಿ ಹುತಾತ್ಮರಾಗಿದ್ದರು. ಪರಿಣಾಮ ಈ ಗುರುದ್ವಾರವು ಪೂಜ್ಯ ಸ್ಥಳವಾಗಿದ್ದು, ಸಿಖ್ ಸಮುದಾಯದಿಂದ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಘಟನೆಯನ್ನು ಭಾರತದಲ್ಲಿ ಗಂಭೀರವಾಗಿ ಪರಿಗಣಿಸಿದ್ದು, ಕಾಳಜಿಯಿಂದ ನೋಡಲಾಗಿದೆ. ಅಲ್ಲದೆ, ಪಾಕಿಸ್ತಾನದ ಅಲ್ಪಸಂಖ್ಯಾತ ಸಿಖ್ ಸಮುದಾಯದ ನ್ಯಾಯಕ್ಕಾಗಿ ಕರೆ ನೀಡಲಾಗಿದೆ"ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ