ನಾಳೆ ಭಾರತದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆಗಸ್ಟ್ 15 ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸಿ, ನಮಗೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ನೆನೆಪಿಸಿಕೊಳ್ಳುವ ದಿನ. ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜವನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯನೂ ರೋಮಾಂಚನಗೊಳ್ಳುತ್ತಾನೆ. ಭಾರತೀಯತೆಯ ಪ್ರತೀಕವಾದ ಈ ತ್ರಿವರ್ಣ ಧ್ವಜದ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ...
ಅದು 1947ರ ಜುಲೈ 22. ಅಂದು ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಭಾರತದಲ್ಲಿ ರಾಷ್ಟ್ರಧ್ವಜ ಯಾವ ರೀತಿಯಾಗಿರಬೇಕೆಂಬ ಬಗ್ಗೆ ಚರ್ಚೆ ನಡೆಯಿತು. ಕೇಸರಿ, ಬಿಳಿ ಮತ್ತು ಕಡು ಹಸಿರು ಬಣ್ಣದಲ್ಲಿ ರಾಷ್ಟ್ರಧ್ವಜ ಇರಬೇಕೆಂದು ಪ್ರಸ್ತಾವನೆ ಇಡಲಾಯಿತು. ಮೂರೂ ಬಣ್ಣಗಳೂ ಸಮಾನವಾಗಿರಬೇಕು. ಮಧ್ಯದಲ್ಲಿರುವ ಬಿಳಿ ಬಣ್ಣದ ಮೇಲೆ ಕಡುನೀಲಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಇರಿಸಬೇಕೆಂಬ ಬಗ್ಗೆಯೂ ನಿರ್ಧರಿಸಲಾಯಿತು. ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ, ಅಂತಿಮ ನಿರ್ಧಾರಕ್ಕೆ ಬರಲಾಯಿತು.
ಇದನ್ನೂ ಓದಿ: Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಮತ್ತು ಮಹತ್ವ
1947ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಜವಹರಲಾಲ್ ನೆಹರು ಈ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಹಾರಿಸಿ, ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಮೂಲಗಳ ಪ್ರಕಾರ ಮೊದಲು ಈ ಧ್ವಜವನ್ನು ವಿನ್ಯಾಸಗೊಳಿಸಿದವರು ಸ್ವಾಮಿ ವಿವೇಕಾನಂದ ಅವರ ಶಿಷ್ಯೆ ಐರಿಷ್ ದೇಶದ ಸಿಸ್ಟರ್ ನಿವೇದಿತಾ. 1904-1906ರಲ್ಲಿ ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ್ದ ನಿವೇದಿತಾ ಅವರ ಬಳಿಕ ಈ ಧ್ವಜದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಮಾಡಿ 1947ರ ವೇಳೆಗೆ ಅಂತಿಮ ರೂಪ ನೀಡಲಾಯಿತು.
ಇದನ್ನೂ ಓದಿ: 74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ
ಈಗಿನ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದವರು ಆಂಧ್ರಪ್ರದೇಶದ ಮಚಲೀಪಟ್ಟಣದ ಪಿಂಗಳಿ ವೆಂಕಯ್ಯ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು 1902ರ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧೀಜಿ ಅವರನ್ನು ಭೇಟಿಯಾದರು. ಆಗ ಅಲ್ಲಿ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ಮಚಲೀಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಉನ್ನತ ಶಿಕ್ಷಣಕ್ಕೆ ಕೊಲಂಬೋಕ್ಕೆ ತೆರಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ