ಕೊರೋನಾ ಲಸಿಕೆಯ ನಡುವೆ ಕುಸಿಯುತ್ತಿರುವ ದೇಶದ ಆರ್ಥಿಕತೆ ಬಗ್ಗೆಯೂ ಗಮನವಿರಲಿ; ಸುಬ್ರಮಣ್ಯಂ ಸ್ವಾಮಿ
ಈ ಕೊರೋನಾ ಲಸಿಕೆ ಸಂಭ್ರಮದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಲಡಾಖ್ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಚೀನಾ ಆಕ್ರಮಿಸಿರುವುದನ್ನು ಮರೆಯಬೇಡಿ ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ನವ ದೆಹಲಿ (ಜನವರಿ 05); ಭಾರತದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಲಂಡನ್ನಲ್ಲಿ ಹೊಸದಾಗಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಸಹ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಭಾರತದಲ್ಲಿ 1 ಕೋಟಿಗೂ ಅಧಿಕ ಜನರಿಗೆ ಈ ಸೋಂಕು ತಗುಲಿದ್ದು, ಈವರೆಗೆ ಸುಮಾರು 1.5 ಲಕ್ಷ ಜನ ಮೃತಪಟ್ಟಿದ್ದಾರೆ. ಹೀಗಾಗಿ ಈ ಸೋಂಕನ್ನು ನಿವಾರಿಸುವ ಸಲುವಾಗಿ ಭಾರತೀಯ ಔಷಧ ನಿಯಂತ್ರಕ ಈಗಾಗಲೇ ಎರಡು ಕೊರೋನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದೆ. ಒಕ್ಕೂಟ ಸರ್ಕಾರ ಈ ಹಿನ್ನಲೆಯಲ್ಲಿ ಅದನ್ನು ತನ್ನ ರಾಜಕೀಯ ಲಾಭಕ್ಕೆ ಬಳಸುತ್ತಿರುವ ಹೊತ್ತಿಗೆ, ಬಿಜೆಪಿಯ ರಾಜ್ಯಸಭಾ ಸಂಸದರಾಗಿರುವ ಸುಬ್ರಮಣಿಯಣ್ ಸ್ವಾಮಿ, "ಈ ಲಸಿಕೆ ಸಂಭ್ರಮದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮತ್ತು ಲಡಾಖ್ನಲ್ಲಿ 4 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಚೀನಾ ಆಕ್ರಮಿಸಿರುವುದನ್ನು ಮರೆಯಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.
In all this excitements of Vaccine don’t forget the economy collapsing and China gobbling up at least 4000 sq kms in Ladakh
ಭಾರತದ ಆರ್ಥಿಕತೆ ಕಳೆದ ಮೂರು ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿದೆ. ಹೀಗಾಗಿ ಆಗಾಗ್ಗೆ ತಮ್ಮದೇ ಬಿಜೆಪಿ ಸರ್ಕಾರದ ಹಾಗೂ ಕೇಂದ್ರ ಸಚಿವರುಗಳ ವಿರುದ್ಧ ಚಾಟಿ ಬೀಸುವ ಬಿಜೆಪಿ ಸಂಸದ ಹಾಗೂ ಅರ್ಥ ಶಾಸ್ತ್ರಜ್ಞ ಸುಬ್ರಮಣ್ಯಂ ಸ್ವಾಮಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕುಸಿಯುತ್ತಿರುವ ದೇಶದ ಆರ್ಥಿಕತೆ ಕುರಿತು ಗಮನ ಸೆಳೆದಿರುವ ಅವರು, "ಕೊರೋನಾ ಲಸಿಕೆಯ ಸಂಭ್ರಮದಲ್ಲಿ ಕಳೆದು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಅವರು. "ಲಸಿಕೆಯ ಎಲ್ಲಾ ಸಂಭ್ರಮಗಳ ನಡುವೆ ಆರ್ಥಿಕತೆಯು ಕುಸಿಯುತ್ತಿರುವುದು ಮತ್ತು ಲಡಾಖ್ನಲ್ಲಿ ಚೀನಾ ಕನಿಷ್ಠ 4000 ಚದರ ಕಿ.ಮೀ. ಆಕ್ರಮಿಸಿರುವುದನ್ನು ಮರೆಯಬೇಡಿ" ಎಂದು ಎಚ್ಚರಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕದ ಸಂಕಷ್ಟದ ನಡುವೆಯೂ ಚೀನಾ ಗಡಿ ತಗಾದೆ ತೆಗೆದು ಭಾರತದ ಭೂಪ್ರದೇಶದ ಒಳಗೆ ಕಾಲಿಟ್ಟಿದೆ. ಇದನ್ನು ಆಡಳಿತ ಪಕ್ಷ ಬಿಜೆಪಿ ನೇರವಾಗಿ ಒಪ್ಪುತ್ತಿಲ್ಲವಾದರೂ, ಮಾಧ್ಯಮಗಳು ಅಲ್ಲಿನ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿ ಗಡಿಯಲ್ಲಿ ಚೀನಾ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೀಗ ರೈತರ ಹೋರಾಟ, ಕೊರೋನಾ ಲಸಿಕೆಯ ಅಬ್ಬರದಲ್ಲಿ ಆ ಸುದ್ದಿಗಳು ಹಿನ್ನಲೆಗೆ ಸರಿದಿವೆ.
ಅಲ್ಲದೆ ಕೊರೋನಾ ಪತ್ತೆಯಾಗಿರುವುಕ್ಕಿಂತ ಮುಂಚೆಯೆ ಭಾರತದ ಆರ್ಥಿಕತೆ ಹಿಮ್ಮುಖವಾಗಿಯೇ ಚಲಿಸುತ್ತಿತ್ತು. ಇದಕ್ಕೆ ನೋಟ್ ನಿಷೇಧ ಮತ್ತು ಜಿಎಸ್ಟಿ ಸೇರಿದಂತೆ ಬಿಜೆಪಿಯ ಅಸಮರ್ಪಕ ಆರ್ಥಿಕ ನೀತಿಯು ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದರು. ಜೊತೆಗೆ ಕೊರೊನಾ ಪತ್ತೆಯಾದ ನಂತರ ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಹೇರಲ್ಪಟ್ಟ ಲಾಕ್ಡೌನ್ನಿಂದಾಗಿ ಭಾರತದ ಆರ್ಥಿಕತೆ ಹಿಮ್ಮುಖವಾಗಿ ಚಲಿಸಲು ಫ್ರಾರಂಭವಾಯಿತು. ಏಷ್ಯಾಖಂಡದಲ್ಲೇ ಅತೀ ಕೆಟ್ಟ ಆರ್ಥಿಕತೆಯನ್ನು ಭಾರತದ್ದಾಗಿದೆ ಎಂದು ವರದಿಗಳಾಗಿವೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ