ನವ ದೆಹಲಿ (ಸೆಪ್ಟೆಂಬರ್ 24); ಕಳೆದ ವರ್ಷ ಆಗಸ್ಟ್ 05 ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ನೀಡಿಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. ಆ ನಂತರ ಕಣಿವೆ ರಾಜ್ಯದಲ್ಲಿ ದೊಡ್ಡ ಹೋರಾಟವೇ ರೂಪುಗೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಸೇರಿದಂತೆ ಅನೇಕ ರಾಜಕೀಯ ನಾಯಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಗೃಹ ಬಂಧನದಲ್ಲಿಟ್ಟಿತ್ತು. ಆದರೆ, ಇತ್ತೀಚೆಗೆ ಓಮರ್ ಅಬ್ದುಲ್ಲಾ ಗೃಹ ಬಂಧನದಿಂದ ಬಿಡುಗಡೆಯಾಗಿದ್ದರೂ ಸಹ ಮೆಹಬೂಬ ಮುಫ್ತಿಯನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ತಮ್ಮ ತಾಯಿಯನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಆಗಸ್ಟ್ 5 ಆರ್ಟಿಕಲ್ 370 ರದ್ದತಿಗೆ ಮೊದಲಿನಿಂದಲೇ ಬಂಧನದಲ್ಲಿಡಲಾಗಿದೆ.
ವಕೀಲ ಆಕಾಶ್ ಕಮ್ರಾ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ತನ್ನ ತಾಯಿಯ ಬಂಧನ ಮತ್ತು ನಂತರದ ಬಂಧನ ವಿಸ್ತರಣೆಗಳು ಕಾನೂನುಬಾಹಿರ ಎಂದು ವಾದಿಸಿದ್ದಾರೆ.
ಆರ್ಟಿಕಲ್ 370 ರದ್ದು ಮಾಡುವ ಕೆಲವೇ ಗಂಟೆಗಳ ಮೊದಲು ರಾಜಕೀಯವಾಗಿ ಸಕ್ರಿಯವಾಗಿರುವ ನೂರಾರು ಜನರನ್ನು ಬಂಧಿಸಲಾಗಿತ್ತು. ಕಳೆದ ವರ್ಷದ ಆಗಸ್ಟ್ ನಿಂದಲೇ ಪಿಡಿಪಿ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನೂ ಬಂಧಿಸಿಡಲಾಗಿದೆ.
ಆರು ತಿಂಗಳ ಕಸ್ಟಡಿ ಅವಧಿ ಮುಗಿಯುವ ಮುನ್ನವೇ ಕಠಿಣ ಪಿಎಸ್ಎ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಜುಲೈ 31 ರಂದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಪಿಎಸ್ಎ ಅಡಿಯಲ್ಲಿ ಅವರ ಬಂಧನವನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿದೆ.
“ಪ್ರಜಾಪ್ರಭುತ್ವದ ದೇಶದಲ್ಲಿ ಅವರ ಬಂಧನ ಕಾನೂನುಬಾಹಿರವಾಗಿದೆ. ಪ್ರತಿಪಕ್ಷದ ಪ್ರಮುಖ ನಾಯಕಿನನ್ನು ಒಂದು ವರ್ಷದಿಂದ ವಿಚಾರಣೆಗೆ ಒಳಪಡಿಸದೆ ಜೈಲಿಗೆ ಹಾಕಲಾಗಿದೆ ”ಎಂದು ಇಲ್ತಿಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಹಬೂಬಾ ಬಂಧನವನ್ನು ಪ್ರಶ್ನಿಸಿ ಇಲ್ತಿಜಾ ಸಲ್ಲಿಸಿದ್ದ ಮೊದಲ ಅರ್ಜಿ ಫೆಬ್ರವರಿ 26 ರಿಂದ ಸುಪ್ರೀಂ ಕೋರ್ಟ್ನಲ್ಲಿ ಇನ್ನು ಬಾಕಿ ಇದೆ. ಇತ್ತೀಚಿನ ಅರ್ಜಿಯಲ್ಲಿ ಇಲ್ತಿಜಾ ಇಲ್ಲಿಯವರೆಗೆ ಪ್ರತಿವಾದಿಗಳು [ಜೆ & ಕೆ ಆಡಳಿತ] ಶೀರ್ಷಿಕೆಯ ರಿಟ್ ಅರ್ಜಿಗೆ ಯಾವುದೇ ಉತ್ತರ ಅಥವಾ ಪ್ರತಿ-ಅಫಿಡವಿಟ್ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಉತ್ತರ ಸಲ್ಲಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಆದೇಶಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ