ದೆಹಲಿ: ಸುಮಾರು ಮೂರು ವರ್ಷವೇ ಆಯ್ತು ನೋಡಿ, ಈ ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ಜಗತ್ತಿನಾದ್ಯಂತ ಮನುಕುಲವನ್ನು ಬೆಂಬಿಡದೆ ಕಾಡುತ್ತಿರುವುದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ರೂಪಾಂತರಗೊಳ್ಳುತ್ತಿರುವ ಈ ಕೋವಿಡ್ ವೈರಸ್ ಪೂರ್ತಿಯಾಗಿ ಕಡಿಮೆ ಆಗೋ ಲಕ್ಷಣಗಳೇ ಕಾಣುತ್ತಿಲ್ಲ ನೋಡಿ. ಕೆಲವು ತಿಂಗಳವರೆಗೆ ಕೋವಿಡ್ (Covid 19) ಪ್ರಕರಣಗಳು ಸ್ವಲ್ಪ ಇಳಿಮುಖವಾದರೆ, ಮತ್ತೆ ಕೆಲವು ತಿಂಗಳು ಕೋವಿಡ್ ಪ್ರಕರಣಗಳು (Corona Virus) ಜಾಸ್ತಿಯಾಗುತ್ತಿರುವುದು ಕಂಡು ಬರುತ್ತವೆ ಅಂತ ಹೇಳಬಹುದು.
ಭಾರತದಲ್ಲಿಯೂ ಸಹ ಕಳೆದ 24 ಗಂಟೆಗಳಲ್ಲಿ ಸುಮಾರು 6,050 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶವು ಕೊರೊನಾ ವೈರಸ್ ಪ್ರಕರಣಗಳಲ್ಲಿ ನಿನ್ನೆಗಿಂತ ಶೇಕಡಾ 13 ರಷ್ಟು ಏರಿಕೆ ಕಂಡಿದೆ ಅಂತ ಹೇಳಲಾಗುತ್ತಿದೆ.
ಅಂಕಿ ಅಂಶಗಳು ಹೀಗಿವೆ
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ವೈರಸ್ನಿಂದಾಗಿ ಭಾರತದಲ್ಲಿ 14 ಸಾವುಗಳು ಸಹ ವರದಿಯಾಗಿವೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 5,30,943 ಕ್ಕೆ ಏರಿದೆ. ಆರೋಗ್ಯ ಸಚಿವಾಲಯವು ಶುಕ್ರವಾರ ಹಂಚಿಕೊಂಡ ಮಾಹಿತಿಯ ಪ್ರಕಾರ ಕೋವಿಡ್ ಚಿಕಿತ್ಸೆ ಪಡೆದು ಹುಷಾರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 4,41,85,858 ಆಗಿದೆ.
ಕೋವಿಡ್-19 ಪ್ರಕರಣಗಳ ಹೆಚ್ಚಳದ ಮಧ್ಯೆ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಐಐಟಿ ಪ್ರೊಫೆಸರ್ ಹೇಳಿದ್ದೇನು ನೋಡಿ?
ಕೋವಿಡ್ -19 ಪ್ರಕರಣಗಳು ಮತ್ತೊಮ್ಮೆ ದೇಶದ ಹಲವಾರು ರಾಜ್ಯಗಳಲ್ಲಿ ಹೆಚ್ಚಾಗುತ್ತಿದ್ದು, ಮತ್ತೊಂದು ವೈರಲ್ ಅಲೆಯ ಭೀತಿಯನ್ನು ಜನರಲ್ಲಿ ಹೆಚ್ಚಿಸಿದೆ ಅಂತ ಹೇಳಬಹುದು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ಅವರು ಈ ಪರಿಸ್ಥಿತಿ ಆತಂಕಕಾರಿಯಲ್ಲ ಮತ್ತು ಇದು ಕೆಮ್ಮು ಮತ್ತು ಶೀತದಂತೆ ಬಂದು ಹೋಗುತ್ತದೆ ಎಂದು ಹೇಳಿದರು.
ಡಾ. ಮಣೀಂದ್ರ ಅಗರ್ವಾಲ್ ಅವರ ಗಣಿತದ ಮಾದರಿ ಈ ಕೋವಿಡ್ -19 ಪ್ರಕರಣಗಳನ್ನು ಊಹಿಸುವಲ್ಲಿ ಅತ್ಯಂತ ಸಮರ್ಥವಾಗಿದೆ. ಅವರ ಗಣಿತದ ಮಾದರಿ ಮಾಡಿದ ಲೆಕ್ಕಾಚಾರಗಳ ಆಧಾರದ ಮೇಲೆ, ಕೋವಿಡ್ ಬಗ್ಗೆ ಇದುವರೆಗೆ ಅತ್ಯಂತ ನಿಖರವಾದ ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ: COVID 19: ಕೇಂದ್ರ ಸರ್ಕಾರಕ್ಕೆ ಮತ್ತೆ ಕೊರೊನಾ ಟೆನ್ಷನ್! ನಾಳೆ ಎಲ್ಲಾ ರಾಜ್ಯಗಳೊಂದಿಗೆ ಮಹತ್ವದ ಸಭೆ
ಆದರೂ ಡಾ. ಅಗರ್ವಾಲ್ ಅವರು ಈ ಮಾದರಿಯನ್ನು ಬಳಸುವ ಅಗತ್ಯ ಇನ್ನೂ ಬಂದಿಲ್ಲ, ಅವರ ಮಾದರಿ ಅದನ್ನು ಸೆರೆಹಿಡಿಯುವಷ್ಟು ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಿಲ್ಲ ಎಂದಿದ್ದಾರೆ. ಪ್ರತಿದಿನದ ಪ್ರಕರಣಗಳು 10,000 ಕ್ಕಿಂತ ಹೆಚ್ಚಾಗದ ಹೊರತು, ಈ ಗಣಿತದ ಮಾದರಿ ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ, ಈ ಪ್ರಕರಣಗಳು ಆ ಮಿತಿಯನ್ನು ದಾಟಿದ ನಂತರವೇ ನಿಖರವಾದ ಮೌಲ್ಯಮಾಪನ ಮಾಡಬಹುದು ಎನ್ನುತ್ತಾರೆ.
ಕಳೆದ ವರ್ಷದ 4ನೇ ಅಲೆಯಂತೆಯೇ ಇರಬಹುದಂತೆ
ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕೋವಿಡ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗಬಹುದು ಮತ್ತು ಪರಿಸ್ಥಿತಿ ಕಳೆದ ವರ್ಷದ ನಾಲ್ಕನೇ ಅಲೆಯಂತೆಯೇ ಇರಬಹುದು ಎಂದು ಐಐಟಿ ಪ್ರಾಧ್ಯಾಪಕರು ಅಂದಾಜಿಸಿದ್ದಾರೆ. "ಪ್ರಸ್ತುತ ಇಷ್ಟು ದೊಡ್ಡ ಜನಸಂಖ್ಯೆಯಲ್ಲಿ, ಯಾವುದೇ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಇನ್ನುವರೆಗೂ ಕಂಡು ಬಂದಿಲ್ಲ, ಅಂದರೆ ಪರಿಸ್ಥಿತಿ ಅಷ್ಟೊಂದು ಆತಂಕಕಾರಿಯಲ್ಲ. ಇದರಿಂದ ಪ್ರಕರಣಗಳ ಸಂಖ್ಯೆ 10 ಪಟ್ಟು ಹೆಚ್ಚಾದರೂ, ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಇದು ಸಹ ಒಂದು ರೀತಿಯ ಜ್ವರವಾಗಿದೆ ಮತ್ತು ಅದರ ಪರಿಣಾಮವು ಕೆಮ್ಮು ಮತ್ತು ಶೀತದ ರೂಪದಲ್ಲಿ ಗೋಚರಿಸುತ್ತದೆ" ಎಂದು ಡಾ. ಅಗರ್ವಾಲ್ ಹೇಳಿದರು.
ಇದನ್ನೂ ಓದಿ: Compensation: ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ಪರಿಹಾರ! ವಿಮಾ ಕಂಪನಿಗೆ ಕೋರ್ಟ್ ಆದೇಶ
"ಕೋವಿಡ್ ಬಂದಂತಹ ಪರಿಸ್ಥಿತಿಯಲ್ಲಿ ಭಯಪಡುವ ಅಗತ್ಯವಿಲ್ಲ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ ಮತ್ತು ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ" ಎಂಬುದು ತಜ್ಞರ ಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ