ಮನೆಯೊಂದು (House) ಮೂರು ಬಾಗಿಲು (Door) ಅನ್ನೋದನ್ನ ನೀವೆಲ್ಲಾ ಕೇಳಿರಬಹುದು. ಮನೆಯಲ್ಲಿ ಅಣ್ಣ ತಮ್ಮಂದಿರು ಜಗಳವಾಡಿ, ಆಸ್ತಿ (Property) ಹಂಚಿಕೆಯಾದಾಗ, ಒಬ್ಬರು ಮನೆ, ಇನ್ನೊಬ್ಬರು, ಜಾಗ, ಹೊಲ ಹೀಗೆ ಆಸ್ತಿ ಪಾಲು ಮಾಡಿಕೊಳ್ತಾರೆ. ಒಂದೇ ಮನೆಯಲ್ಲೇ ಇರುವವರು ಎಷ್ಟೋ ವಿಷಯಗಳಿಗೆ ಜಗಳವಾಡಿ, ಕೊನೆಗೆ ತಮ್ಮ ತಮ್ಮ ಅಡುಗೆಯನ್ನ ಬೇರೆ ಮಾಡಿ ಊಟ ಮಾಡ್ತಾರೆ. ಇದು ಸಾಮಾನ್ಯವಾಗಿ ಕಂಡು ಬರುವ ವಿಷಯ. ಮಜಾ ಏನಂದ್ರೆ ಮನೆಯಲ್ಲಿ ಅಣ್ಣ ತಮ್ಮಂದಿರು ಜಗಳವಾಡಿ, ಆಸ್ತಿ ಪಾಲು ಮಾಡಿಕೊಂಡಂತೆ, ಎರಡು ರಾಜ್ಯಗಳೂ (Two States) ಸಹ ಆಸ್ತಿ ಭಾಗ ಮಾಡಿಕೊಂಡಿವೆ. ಹೀಗಾಗಿ ಮನೆಯೊಂದು ಎರಡು ರಾಜ್ಯವಾಗಿ ವಿಭಜನೆಗೊಂಡಿದೆ.
ಮನೆಯೊಂದು ಎರಡು ರಾಜ್ಯಗಳ ಪಾಲು!
ಹೌದು.. ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಭಾಗದಲ್ಲಿ ಬರುವ ಮನೆಯೊಂದು ಎರಡು ರಾಜ್ಯಗಳ ಪಾಲಾಗಿದೆ. ಮನೆಯಲ್ಲಿ ಎರಡೂ ರಾಜ್ಯಗಳ ಫಲಕ ಹಾಕಲಾಗಿದೆ. ಕೆಲ ಕೋಣೆಗಳು ಮಹಾರಾಷ್ಟ್ರದಲ್ಲಿದ್ರೆ, ಇನ್ನು ಕೆಲವು ತೆಲಂಗಾಣದಲ್ಲಿವೆ. ಆಶ್ಚರ್ಯ ಅನ್ನಿಸಿದ್ರೂ ಇದು ನಿಜ.
ಗಡಿ ಭಾಗಗಳಲ್ಲಿರುವ ಜನರಿಗೆ ಯಾವಾಗಲೂ ಎರಡು ರಾಜ್ಯಗಳ ಕಿತ್ತಾಟದ ಪರಿಣಾಮ ಬಿದ್ದೇ ಬೀರುತ್ತೆ. ಗಡಿ ಭಾಗಗಳಲ್ಲಿ ವಾಸಿಸುವ ಹಳ್ಳಿಗಳು, ನಗರದ ಜನರು ಸಾಮಾನ್ಯವಾಗಿ ಎರಡು ರಾಜ್ಯಗಳ ಕಿತ್ತಾಟದಲ್ಲಿ ನಲುಗಿ ಹೋಗುತ್ತವೆ. ಆದರೆ ಇಲ್ಲಿ ಹಾಗಿಲ್ಲ. ಮನೆಯು ಎರಡು ರಾಜ್ಯಗಳ ಪಾಲಾಗಿದ್ದರೂ ಸಹ ಕುಟುಂಬದವರು ಸಂತೋಷದಿಂದ ಇದ್ದಾರೆ.
ಎರಡು ರಾಜ್ಯಗಳಲ್ಲಿ ಕುಟುಂಬ ಸದಸ್ಯರ ವಾಸ
ಈ ಬಗ್ಗೆ ಎಎನ್ ಐ ಸುದ್ದಿ ಸಂಸ್ಥೆ ತಿಳಿಸಿದೆ. ಮಹಾರಾಷ್ಟ್ರದ ಗಡಿ ಭಾಗದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಕುಟುಂಬದ ಮನೆಯು ಎರಡು ರಾಜ್ಯಗಳಲ್ಲಿ ವಿಭಜನೆಯಾಗಿದೆ. ಚಂದ್ರಾಪುರ ಜಿಲ್ಲೆಯ ಸೀಮಾವರ್ತಿ ಜೀವತಿ ತೆಹಸಿಲ್ ನ ಮಹಾರಾಜಗುಡಾ ಎಂಬ ಗ್ರಾಮದಲ್ಲಿ ಪವಾರ್ ಕುಟುಂಬವು ವಾಸ ಮಾಡುತ್ತಿದೆ.
13 ಸದಸ್ಯರನ್ನು ಹೊಂದಿರುವ ಕುಟುಂಬವು ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡರಲ್ಲೂ ವಾಸ ಮಾಡ್ತಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಭಾಗದಲ್ಲಿ ಸುಮಾರು 14 ಹಳ್ಳಿಗಳಿವೆ. ಅದರಲ್ಲಿ ಮಹಾರಾಜಗುಡಾ ಸಹ ಒಂದು. ಹಳ್ಳಿಯಲ್ಲಿನ ಪವಾರ್ ಕುಟುಂಬವು ಎರಡು ರಾಜ್ಯಗಳಲ್ಲಿ ವಾಸ ಮಾಡ್ತಿದೆ.
ಪವಾರ್ ಕುಟುಂಬದ ಭೂಮಿ ವಿಭಜನೆ
1969ರಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ವಿವಾದ ಇತ್ಯರ್ಥವಾಗಿತ್ತು. ಆಗ ಪವಾರ್ ಕುಟುಂಬದ ಭೂಮಿಯು ಎರಡು ರಾಜ್ಯಗಳಲ್ಲಿ ವಿಂಗಡನೆಯಾಗಿದೆ. ಎರಡು ವಿಭಿನ್ನ ರಾಜ್ಯಗಳ ಗಡಿಯುದ್ದಕ್ಕೂ ವಾಸ ಮಾಡಿದ ಅನುಭವ ಈ ಕುಟುಂಬದವರದ್ದು.
ಅಡುಗೆ ಮನೆ ತೆಲಂಗಾಣ, ಮಲಗುವ ಕೋಣೆ ಮತ್ತು ಹಾಲ್ ಮಹಾರಾಷ್ಟ್ರದಲ್ಲಿದೆ
ಮಹಾರಾಜಗುಡ ಗ್ರಾಮದದಲ್ಲಿ ಪವಾರ್ ಕುಟುಂಬದ ಭೂಮಿಯಲ್ಲಿ ಹತ್ತು ಕೋಣೆಗಳ ಮನೆಯಿದೆ. ಈ ಮನೆಯಲ್ಲಿ ಹಲವು ವರ್ಷಗಳಿಂದ ಕುಟುಂಬ ವಾಸ ಮಾಡ್ತಿದೆ. ಮನೆಯಲ್ಲಿ ನಾಲ್ಕು ಕೊಠಡಿಗಳು ತೆಲಂಗಾಣದಲ್ಲಿವೆ. ಇನ್ನು ನಾಲ್ಕು ಕೊಠಡಿಗಳು ಮಹಾರಾಷ್ಟ್ರದಲ್ಲಿವೆ. ಅಡುಗೆ ಮನೆ ತೆಲಂಗಾಣದಲ್ಲಿದ್ರೆ, ಮಲಗುವ ಕೋಣೆ ಮತ್ತು ಹಾಲ್ ಮಹಾರಾಷ್ಟ್ರದಲ್ಲಿದೆ ಅಂತಾರೆ ಕುಟುಂಬಸ್ಥರು.
ಅಂದ ಹಾಗೇ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಗಡಿಯಲ್ಲಿರುವ 14 ಗ್ರಾಮಗಳ ಮೇಲೆ ತಮ್ಮ ಹಕ್ಕು ಮಂಡಿಸಿವೆ. ಹಾಗಾಗಿ ಪವಾರ್ ಕುಟುಂಬದ ಮನೆಯು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಂಗಡನೆಯಾಗಿದೆ. ಒಂದು ಅರ್ಧ ಭಾಗ ಮಹಾರಾಷ್ಟ್ರದಲ್ಲಿದ್ರೆ, ಇನ್ನು ಅರ್ಧ ಭಾಗ ತೆಲಂಗಾಣದಲ್ಲಿದೆ.
ಎರಡೂ ರಾಜ್ಯಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ
ಪವಾರ್ ಕುಟುಂಬಸ್ಥರು ಎರಡೂ ರಾಜ್ಯಗಳ ಕಲ್ಯಾಣ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅವರು ಮಹಾರಾಷ್ಟ್ರ ಮತ್ತು ತೆಲಂಗಾಣದ ನೋಂದಣಿ ಫಲಕದ ಜೊತೆ ಸ್ವಂತ ವಾಹನ ಹೊಂದಿದ್ದಾರೆ. ಜೊತೆಗೆ ಎರಡೂ ರಾಜ್ಯಗಳಿಗೆ ತೆರಿಗೆಯನ್ನೂ ಸಹ ಪಾವತಿ ಮಾಡ್ತಾರೆ.
ಮನೆಯ ಮಾಲೀಕ ಉತ್ತಮ್ ಪವಾರ್ ಮಾತನಾಡಿದ್ದು, ಮನೆಯು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ನಡುವೆ ವಿಂಗಡನೆಯಾಗಿದೆ. ಆದರೆ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ನಾವು ಎರಡೂ ರಾಜ್ಯಗಳಿಗೆ ಆಸ್ತಿ ತೆರಿಗೆ ಪಾವತಿ ಮಾಡ್ತಿದ್ದೇವೆ. ಜೊತೆಗೆ ಎರಡೂ ರಾಜ್ಯಗಳ ಯೋಜನೆಗಳ ಲಾಭ ಪಡೆದುಕೊಳ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ರೊಮೇನಿಯಾದಲ್ಲಿ ಜಸ್ಟ್ 20 ಬಸ್ಕಿ ಹೊಡೆದ್ರೆ ಸಾಕು, ಬಸ್ ಟಿಕೆಟ್ ಫ್ರೀ ಅಂತೆ!
ಕಾನೂನುಬದ್ಧವಾಗಿ ಮಹಾರಾಜಗುಡಾ ಗ್ರಾಮ ಹಾಗೂ ಸುತ್ತಲ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿವೆ. ಆದರೆ ತೆಲಂಗಾಣ ಸರ್ಕಾರ ವಿವಿಧ ಯೋಜನೆಗಳ ಮೂಲಕ ಈ ಗಡಿ ಭಾಗದ ಜನರನ್ನು ಸೆಳೆಯುತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ