ನವದೆಹಲಿ: ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾದ ನಂತರ ಲೋಕಸಭೆಯ ಸದಸ್ಯತ್ವ ಕಳೆದುಕೊಂಡ ಏಕೈಕ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ (Rising India Summit) ಮಾತನಾಡಿದ ಅವರು, ಸೂರತ್ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದೆ. ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಮತ್ತು ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡ ಏಕೈಕ ರಾಜಕಾರಣಿ ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲ ಎಂದು ಹೇಳಿದರು.
17 ಪ್ರಮುಖ ನಾಯಕರು ಸ್ಥಾನ ಕಳೆದುಕೊಂಡಿದ್ದರು
ಯುಪಿಎ ಸರ್ಕಾರದ ಅವಧಿಯಲ್ಲಿ 2013ರ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಇದು ಸುಪ್ರೀಂ ಕೋರ್ಟ್ನ ತೀರ್ಪು ಎಂದು ನೆನಪಿಸಿಕೊಂಡ ಅಮಿತ್ ಶಾ, ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ, ಯಾರೂ ಇದರ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿಲ್ಲ, ಏಕೆಂದರೆ ಇದು ದೇಶದ ಕಾನೂನು ಎಂದು ಅವರು ಹೇಳಿದರು.
ಇದನ್ನೂ ಓದಿ: Rising India Summit: ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಯುಪಿಎ ಸರ್ಕಾರ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್ ಶಾ
ಇನ್ನು ‘ರಾಹುಲ್ ಗಾಂಧಿಯವರ ಸಂಪೂರ್ಣ ಭಾಷಣವನ್ನು ಆಲಿಸಿ, ಅವರು ಕೇವಲ ನರೇಂದ್ರ ಮೋದಿ ಬಗ್ಗೆ ನಿಂದನೀಯ ಮಾತುಗಳನ್ನು ಆಡಿಲ್ಲ. ಅವರು ಇಡೀ ಮೋದಿ ಸಮುದಾಯ ಮತ್ತು ಒಬಿಸಿ ಸಮಾಜದ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂದ ಅಮಿತ್ ಶಾ, ಈ ದೇಶದ ಕಾನೂನು ಸ್ಪಷ್ಟವಾಗಿದೆ. ಸೇಡಿನ ರಾಜಕೀಯದ ಪ್ರಶ್ನೆಯೇ ಇಲ್ಲ. ಇದು ಅವರ ಸರ್ಕಾರದ ಅವಧಿಯಲ್ಲಿ ಬಂದ ಭಾರತದ ಸುಪ್ರೀಂ ಕೋರ್ಟ್ನ ತೀರ್ಪು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ತಮ್ಮ ಅಳಲನ್ನು ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ತನ್ನ ರಾಜಕೀಯ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆರೋಪ ಹೊರಿಸುವ ಬದಲು ರಾಹುಲ್ ಗಾಂಧಿ ನ್ಯಾಯಾಲಯದ ಮೆಟ್ಟಿಲೇರಲಿ. ಕಾಂಗ್ರೆಸ್ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿದೆ. ಕನ್ವಿಕ್ಷನ್ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Rising India Summit: ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ
ರಾಹುಲ್ ಗಾಂಧಿ ಅವರು ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಲ್ಲ ಎಂದಿರುವ ಅಮಿತ್ ಶಾ. ಇದು ಯಾವ ರೀತಿಯ ದುರಹಂಕಾರ? ನಿಮಗೆ ಅನುಕೂಲ ಬೇಕು. ನೀವು ಸಂಸದರಾಗಿ ಮುಂದುವರಿಯಲು ಬಯಸುತ್ತೀರಿ ಆದರೆ ನ್ಯಾಯಾಲಯದ ಮುಂದೆ ಹೋಗುವುದಿಲ್ಲ. ಇಂತಹ ದುರಹಂಕಾರ ಎಲ್ಲಿ ಹುಟ್ಟುತ್ತದೆ ಎಂದು ಕಿಡಿಕಾರಿದರು.
ವೀರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಬಗ್ಗೆಯೂ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ ಕ್ಷಮೆ ಯಾಚಿಸಲು ಬಯಸದಿದ್ದರೆ ಅದು ಅವರಿಷ್ಟ. ಆದರೆ ಅವರು ಸಾವರ್ಕರ್ ಜಿಗಾಗಿ ಅಂತಹ ಪದಗಳನ್ನು ಬಳಸಬಾರದು. ಈ ದೇಶಕ್ಕಾಗಿ ತೀವ್ರ ಹಿಂಸೆ ಅನುಭವಿಸಿದವರಲ್ಲಿ ವೀರ ಸಾವರ್ಕರ್ ಕೂಡ ಒಬ್ಬರು. ರಾಹುಲ್ ಗಾಂಧಿ ನಮ್ಮನ್ನು ನಂಬದಿದ್ದರೆ, ಅವರ ಸ್ವಂತ ಅಜ್ಜಿ ಇಂದಿರಾಜಿ ಅವರ ಭಾಷಣವನ್ನು ಕೇಳಬೇಕು, ಸಾವರ್ಕರ್ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿದು ಕೊಳ್ಳಬೇಕು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ