ನವದೆಹಲಿ(ಅ. 27): ಕೇಂದ್ರ ಸರ್ಕಾರ ಕಾನೂನುಬಾಹಿರ ಕ್ರಮಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಉಗ್ರರ ಪಟ್ಟಿಗೆ ಇನ್ನಷ್ಟು 18 ಮಂದಿಯನ್ನು ಸೇರಿಸಲಾಗಿದೆ. ಈ 18 ಉಗ್ರರು ದೇಶದ ವಿವಿಧೆಡೆ ವಿವಿಧ ಕಾಲಘಟ್ಟಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನ ಎಸಗಿದ ಆರೋಪ ಎದುರಿಸುತ್ತಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ, 1999ರ ಕಂದಹಾರ್ ವಿಮಾನ ಹೈಜಾಕ್ ಘಟನೆ, 2008ರ ಮುಂಬೈ ಉಗ್ರ ದಾಳಿ, ಪುಲ್ವಾಮಾ ದಾಳಿ, ಪಠಾಣಕೋಟ್ ದಾಳಿ, ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯ ಇತ್ಯಾದಿ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ. ಭಟ್ಕಳ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್, ದಾವೂದ್ನ ಬಂಟರಾದ ಛೋಟಾ ಶಕೀಲ್, ಟೈಗರ್ ಮೆಮೋನ್, ಜಾವೇದ್ ಚಿಕನಾ, ಐಎಸ್ಐ ಬೆಂಬಲಿತ ಉಗ್ರ ಸಾಜಿದ್ ಮೀರ್ ಮೊದಲಾದವರು ಈ 18 ಮಂದಿಯಲ್ಲಿ ಸೇರಿದ್ದಾರೆ.
ಸಾಜಿದ್ ಮೀರ್ ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ಐಎಸ್ಐ ನಿರ್ದೇಶನದಂತೆ ಭಾರತದ ಹಲವೆಡೆ ಉಗ್ರ ಕೃತ್ಯಗಳನ್ನ ಆಯೋಜಿಸದ್ದ. ಹಾಗೆಯೇ, ಅಬ್ದುಲ್ ರೌಫ್ ಅಸ್ಘರ್ ಕೂಡ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ನಿರ್ದೇಶನದ ಮೇರೆಗೆ ಸಂಸತ್ತು, ಪಠಾಣಕೋಟ ಮತ್ತು ಪುಲ್ವಾಮದಲ್ಲಿ ಉಗ್ರ ದಾಳಿಗೆ ನೆರವಾಗಿದ್ದನೆನ್ನಲಾಗಿದೆ.
ಇದನ್ನೂ ಓದಿ: ದೇಶದ ಯಾವುದೇ ಪ್ರಜೆಯೂ ಕಾಶ್ಮೀರದಲ್ಲಿ ಜಮೀನು ಕೊಳ್ಳಬಹುದು: ಕೇಂದ್ರದಿಂದ ಕಾನೂನು
ಯುಎಪಿಎ ಅಡಿ ಸೇರಿಸಲಾದ 18 ಭಯೋತ್ಪಾದಕರ ಪಟ್ಟಿ:
1) ಸಾಜಿದ್ ಮೀರ್, ಐಎಸ್ಐ ಸಹವರ್ತಿ
2) ಸಯದ್ ಸಲಾಹುದ್ದೀನ್, ಹುಜ್ಬುಲ್ ಮುಜಾಹಿದೀನ್ ಮುಖ್ಯಸ್ಥ
3) ಅಬ್ದುರ್ ರೆಹಮಾನ್ ಮಕ್ಕಿ, ಲಷ್ಕರ್-ಎ-ತೈಯಬಾ ಮುಖ್ಯಸ್ಥ ಹಫೀಜ್ ಸಯೀದ್ ಸೋದರಳಿಯ
4) ಅಬ್ದುಲ್ ರೌಫ್ ಅಸ್ಘರ್, ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಸಹೋದರ್
5) ರಿಯಾಜ್ ಭಟ್ಟಳ್, ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಂಸ್ಥಾಪಕ
6) ಇಕ್ಬಾಲ್ ಭಟ್ಕಳ್, ರಿಯಾಜ್ ಸಹೋದರ
7) ಛೋಟಾ ಶಕೀಲ್, ದಾವೂಡ್ ಬಲಗೈ ಬಂಟ
8) ಟೈಗರ್ ಮೆಮೋನ್, ದಾವೂದ್ ಸಹಚರ
9) ಜಾವೇದ್ ಚಿಕ್ನಾ, ದಾವೂಡ್ ಸಹಚರ
10) ಯೂಸುಫ್ ಮುಜಾಮ್ಮಿಲ್ ಅಲಿಯಾಸ್ ಹುರೇರಾ ಭಾಯ್, ಮುಂಬೈ ದಾಳಿ ಘಟನೆಯ ಆರೋಪಿ
11) ಶಾಹಿದ್ ಮೆಹಮೂದ್, ಲಷ್ಕರ್ ಸಂಘಟನೆಯ ಹಣಕಾಸು ವಿಭಾಗ ಫಲಾ-ಇ-ಇನ್ಸಾನಿಯಾತ್ ಫೌಂಡೇಶನ್ನ ಉಪ ಮುಖ್ಯಸ್ಥ
12) ಫರ್ಹತುಲ್ಲಾ ಘೋರಿ ಅಲಿಯಾಸ್ ಅಬು ಸುಫಿಯಾನ್, 2002ರ ಅಕ್ಷರಧಾಮ ದೇವಸ್ಥಾನದ ಮೇಲಿನ ದಾಳಿ ಹಾಗೂ 2005ರಲ್ಲಿ ಹೈದರಾಬಾದ್ನ ಕಾರ್ಯಪಡೆ ಕಚೇರಿ ಮೇಲೆ ನಡೆದ ಆತ್ಮಹತ್ಯಾ ದಾಳಿ ಪ್ರಕರಣದ ಆರೋಪಿ.
13) ಇಬ್ರಾಹಿಂ ಅಥಾರ್, ಮಸೂದ್ ಅಜರ್ನ ಸಂಬಂಧಿ ಹಾಗೂ 1996ರ ಕಂದಹಾರ್ ವಿಮಾನ ಅಪಹರಣ ಪ್ರಕರಣದ ಆರೋಪಿ ಮತ್ತು ಸಂಸತ್ ದಾಳಿ ಘಟನೆಯ ಪ್ರಮುಖ ಸಂಚುಕೋರ
14) ಯೂಸುಫ್ ಅಜರ್, ಕಂದಹಾರ್ ವಿಮಾನ ಅಪಹರಣ ಪ್ರಕರಣದ ಆರೋಪಿ
15) ಶಾಹಿದ್ ಲತೀಫ್, ಜೈಷ್-ಎ-ಮೊಹಮ್ಮದ್ ಸಂಘಟನೆಯ ಕಮಾಂಡರ್
16) ಗುಲಾಂ ನಬೀ ಖಾನ್, ಹಿಜ್ಬುಲ್ ಮುಜಾಹಿದೀನ್ನ ಉಪ ಮುಖ್ಯಸ್ಥ
17) ಜಾಫರ್ ಹುಸೇನ್ ಭಟ್, ಹಿಜ್ಬುಲ್ ಮುಜಾಹಿದೀನ್ ಸಂಘಟನೆ
18) ಮೊಹಮ್ಮದ್ ಅನಿಸ್ ಶೇಖ್, 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ
ಇದನ್ನೂ ಓದಿ: ಸಾರ್ವಭೌಮತ್ವಕ್ಕೆ ಹೋರಾಡುತ್ತಿರುವ ಭಾರತಕ್ಕೆ ನಮ್ಮ ಬೆಂಬಲ ಇದೆ: ಅಮೆರಿಕ
ಈ ಯುಎಪಿಎ ಕಾಯ್ದೆಯ ವಿಶೇಷತೆ ಏನು?
ಯುಎಪಿಎ ಕಾಯ್ದೆ ಈ ಮುಂಚೆಯೇ ಅಸ್ತಿತ್ವದಲ್ಲಿತ್ತು. ಆದರೆ, ಉಗ್ರ ಸಂಘಟನೆಗಳನ್ನಷ್ಟೇ ಹೆಸರಿಸಲು ಅವಕಾಶ ಇತ್ತು. ವೈಯಕ್ತಿಕವಾಗಿ ಉಗ್ರರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಆಗುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರಂತೆ ವೈಯಕ್ತಿಕ ಉಗ್ರರನ್ನೂ ಈ ಕಾಯ್ದೆ ಅಡಿ ತರಬಹುದಾಗಿದೆ. ಇವರ ವೈಯಕ್ತಿಕ ಆಸ್ತಿ, ಹಣಕಾಸು ವ್ಯವಹಾರವನ್ನು ಕಾನೂನು ರೀತ್ಯ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ