ಚೆನ್ನೈ: ಇಂದು ಪ್ರೇಮಿಗಳ ದಿನ. ವ್ಯಾಲೆಂಟೈನ್ಸ್ ಡೇ (Valentines Day) ದಿನ ಪ್ರೇಮಿಗಳು (Lovers) ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡ್ತಾ ಪ್ರೇಮ ಲೋಕದಲ್ಲಿ ಸಂಚಾರ ಮಾಡ್ತಿರ್ತಾರೆ. ಒಂದಷ್ಟು ಜನ ತನ್ನ ಸಂಗಾತಿಗೆ ಇಷ್ಟವಾಗೋ ಗಿಫ್ಟ್ ಕೊಟ್ಟು ಒಲಿಸಿಕೊಂಡ್ರೆ ಮತ್ತೊಂದಷ್ಟು ಜನ ಅವರ ಇಷ್ಟದ ಜಾಗಗಳಿಗೆ ಕರೆದುಕೊಂಡು ಹೋಗಿ ಖುಷಿ ಪಡಿಸ್ತಾರೆ. ಇನ್ನೂ ಕೆಲವರು ಸಾರ್ವಜನಿಕ ಸ್ಥಳಗಳು, ಜನರು ನೋಡ್ತಾರೆ ಅನ್ನೋದನ್ನೆಲ್ಲ ಗಮನದಲ್ಲಿಟ್ಟುಕೊಳ್ಳದೆ ನೋಡುಗರಿಗೂ ಮುಜುಗರ ತರುವಂತಹ ಕೆಲಸದಲ್ಲಿ ತೊಡಗಿಸಿಕೊಳ್ತಾರೆ. ಇದೆಲ್ಲದರ ಮಧ್ಯೆ ಪ್ರೇಮಿಗಳ ದಿನವನ್ನು ವಿರೋಧಿಸುವ ಹಿಂದುತ್ವ ಪರ ಸಂಘಟನೆಯೊಂದು ವಿಶಿಷ್ಟವಾಗಿ ಪ್ರತಿಭಟನೆ (Protest) ನಡೆಸಿದೆ.
ಹೌದು.. ತಮಿಳುನಾಡಿನ ಶಿವಗಂಗಾದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆಯನ್ನು ವಿರೋಧಿಸಿ ಹಿಂದುತ್ವ ಪರ ಸಂಘಟನೆಯೊಂದು ನಾಯಿಗಳಿಗೆ ಮದುವೆ ಮಾಡಿಸುವುದರ ಮೂಲಕ ವಿಚಿತ್ರವಾಗಿ ಪ್ರತಿಭಟನೆಯನ್ನು ಮಾಡಿದೆ. ವ್ಯಾಲೆಂಟೈನ್ಸ್ ಆಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಪ್ರತಿಪಾದಿಸಿರುವ ಆ ಸಂಘಟನೆಯ ಸದಸ್ಯರು ಸೋಮವಾರ 2 ಬೀದಿ ನಾಯಿಗಳನ್ನು ಕರೆ ತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: Republic Day Special: ಜನವರಿ 26ರ ಪರೇಡ್ ಆರಂಭವಾಗಿದ್ದು ಯಾವಾಗ? ಟ್ಯಾಬ್ಲೋ ಇತಿಹಾಸ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
'ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು'
ಪ್ರೇಮಿಗಳ ದಿನ ಯುವ ಜೋಡಿಗಳು ಪಬ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅನುಚಿತವಾಗಿ ವರ್ತಿಸುತ್ತಾರೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ನಮ್ಮ ಭಾರತೀಯ ಸಂಸ್ಕೃತಿಗೆ ಅದರದ್ದೇ ಆದ ಮೌಲ್ಯವಿದೆ. ಇಂತಹವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸಿ ನಮ್ಮ ದೇಶಕ್ಕೆ ದ್ರೋಹ ಮಾಡುತ್ತಿದ್ದಾರೆ. ಹಾಗಾಗಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಅವಕಾಶ ನೀಡಬಾರದು ಎಂದು ಬೀದಿ ನಾಯಿಗಳಿಗೆ ಅಣಕು ಮದುವೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಪ್ರೇಮಿಗಳ ದಿನದ ಆಚರಣೆಗೆ ಬಜರಂಗದಳದ ವಿರೋಧ
ಇತ್ತ ಮಂಗಳೂರಿನಲ್ಲಿ ಕೂಡ ಭಜರಂಗದಳದ ಕಾರ್ಯಕರ್ತರು ವ್ಯಾಲೆಂಟೈನ್ಸ್ ಡೇ ಆಚರಣೆಗೆ ವಿರೋಧ ವ್ಯಕ್ತಪಡಿಸಿದೆ. ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಯಾವುದೇ ಮಳಿಗೆ, ಅಂಗಡಿಗಳಲ್ಲಿ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಭಜರಂಗ ದಳದ ಕಾರ್ಯಕರ್ತರು ಮನವಿ ಮಾಡಿದ್ದಾರೆ.
'ಯಾರೂ ಬೆಂಬಲ ನೀಡಬಾರದು'
ಈ ಬಗ್ಗೆ ಮನವಿ ಮಾಡಿರುವ ಭಜರಂಗ ದಳ ಮುಖಂಡ ನವೀನ್ ಮೂಡುಶೆಡ್ಡೆ, ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ವ್ಯಾಲೆಂಟೈನ್ಸ್ ಡೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ಪ್ರೇಮಿಗಳ ದಿನ ಆಚರಿಸಬಾರದು. ಎಲ್ಲಾ ಹೂವಿನ ಮಳಿಗೆಗಳು ಮತ್ತು ಉಡುಗೊರೆ ಕೇಂದ್ರಗಳು ಪ್ರೇಮಿಗಳ ದಿನವನ್ನು ಆಚರಿಸಲು ಯುವಕರನ್ನು ಆಕರ್ಷಿಸುವ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಜತೆಗೆ ಇಂತಹ ಆಚರಣೆಗೆ ಯಾರೂ ಬೆಂಬಲ ನೀಡಬಾರದು ಎಂದು ಹೇಳಿದ್ದಾರೆ.
ಅಲ್ಲದೇ, ಭಾರತ ಪುಣ್ಯಭೂಮಿ. ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ನಮ್ಮ ಆಚರಣೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅವುಗಳಿಗೆ ಶತಮಾನಗಳ ಇತಿಹಾಸವಿದೆ. ಪಾಶ್ಚಿಮಾತ್ಯ ಸಂಸ್ಕೃತಿಯು ಭಾರತೀಯ ಪದ್ಧತಿಗಳಿಗೆ ಸವಾಲು ಹಾಕುತ್ತಿದೆ ಮತ್ತು ಯುವ ಪೀಳಿಗೆಯನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ