ಬೆಂಗಳೂರು: ಪಂಚ ರಾಜ್ಯಗಳ ಮತಎಣಿಕೆ ಬಿರುಸು ಪಡೆದುಕೊಂಡಿದ್ದು ಫಲಿತಾಂಶ ಸ್ಪಷ್ಟ ಚಿತ್ರಣದತ್ತ ದಾಪುಗಾಲಿಡುತ್ತಿದೆ. ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಡಳಿತಾರೂಢ ಪಕ್ಷವೇ ಪುನರ್ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಎಲ್ಡಿಎಫ್ ಮೈತ್ರಿಕೂಟ ಮಧ್ಯಾಹ್ನ 12 ಗಂಟೆ ಹೊತ್ತಿಗೆ 95 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪ್ರತಿಪಕ್ಷ ಸ್ಥಾನದಲ್ಲಿದ್ದ ಯುಡಿಎಫ್ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೆಟ್ರೋಮ್ಯಾನ್ ಶ್ರೀಧರ್ ಮುನ್ನಡೆ ಕಾಯ್ದುಕೊಂಡಿದ್ದಾರಾದರೂ ಕೇರಳದಲ್ಲಿ ಬಿಜೆಪಿ ಕೇವಲ 3 ಕ್ಷೇತ್ರಗಳ ಮತ ಎಣಿಕೆಯಲ್ಲಿ ಮಾತ್ರ ಮುಂದಿದೆ.
ಕೇರಳದ ಇತಿಹಾಸದಲ್ಲಿ ಎಂದಿಗೂ ಒಂದೇ ಪಕ್ಷ ಸತತ 2 ಬಾರಿ ಅಧಿಕಾರದ ಗದ್ದುಗೆ ಹಿಡಿದಿಲ್ಲ. ಇದನ್ನು ಇಂದು ಪಿಣರಾಯಿ ವಿಜಯನ್ ಮುರಿದು ಮತ್ತೆ ಸಿಎಂ ಗಾದ್ದಗೆಯೇರುತ್ತಾರೆ ಎನ್ನಲಾಗ್ತಿದೆ. ಕೊರೋನಾ ಪರಿಸ್ಥಿತಿ ನಿರ್ವಹಣೆ, ಅಯ್ಯಪ್ಪ ಸ್ವಾಮಿ ದೇಗುಲ ವಿವಾದವನ್ನು ಸಮರ್ಥವಾಗಿ ಎದುರಿಸಿದಕ್ಕಾಗಿಯೇ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಎಲ್ಡಿಎಫ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಲೆಯಾಳಿಗಳು ಮತ್ತೊಮ್ಮೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಗೆ ಮಣೆ ಹಾಕದಿರುವುದು ಸ್ಪಷ್ಟವಾಗುತ್ತಿದೆ.
ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಮಲ ಅರಳೋದು ಬಹುತೇಕ ಪಕ್ಕಾ ಆಗಿದೆ. ಒಟ್ಟು 30 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಮೈತ್ರಿಕೂಟ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 1 ಕ್ಷೇತ್ರದಲ್ಲಿ ಗೆಲುವಿನ ಗೆರೆ ದಾಟಿದೆ. ಇನ್ನು ಅಸ್ಸಾಂನಲ್ಲೂ ಬಿಜೆಪಿಗೆ ಸಿಹಿಸುದ್ದಿ ಸಿಗಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಬಿಜೆಪಿ+ 85 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮ್ಯಾಜಿಕ್ ನಂಬರ್ ದಾಟುವುದು ಖಚಿತವಾಗುತ್ತಿದೆ. ಮಧ್ಯಾಹ್ನ 2 ಗಂಟೆಯ ನಂತರ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ