ಲಕ್ನೋ(ಅ. 04): ಉತ್ತರ ಪ್ರದೇಶದ ಹಾಥ್ರಸ್ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ದೇಶಾದ್ಯಂತ ರಾಜಕೀಯ ಮೇಲಾಟಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಪ್ರಕರಣದ ನಾಲ್ವರು ಆರೋಪಿಗಳ ಪರವಾಗಿ ಮೇಲ್ಜಾತಿಗಳ ಜನರಿಂದ ಪ್ರತಿಭಟನೆಯೂ ನಡೆದಿದೆ. ಘಟನೆ ನಡೆದ ಗ್ರಾಮದ ಹೊರಗೆ ಸ್ಥಳೀಯ ಮೇಲ್ವರ್ಗದ ಜನರ ಗುಂಪು ಪ್ರತಿಭಟನೆ ನಡೆಸಿತು. ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿಯಿಂದ ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಈ ಜನರು ಆಗ್ರಹಿಸಿದ್ದಾರೆ.
ಘಟನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ. ನಾಲ್ವರು ಯುವಕರನ್ನು ಬೇಕಂತಲೇ ಗುರಿ ಮಾಡಲಾಗುತ್ತಿದೆ. ನಮ್ಮ ಮಕ್ಕಳು (ಆರೋಪಿಗಳು) ತಪ್ಪಿತಸ್ಥರಾಗಿದ್ದರೆ ಶಿಕ್ಷೆ ನೀಡಿ. ಆದರೆ, ಅಮಾಯಕರಿಗೆ ಶಿಕ್ಷೆ ಆಗುವಂತಾಗಬಾರದು. ತಪ್ಪಿತಸ್ಥರನ್ನು ಬಿಡಬಾರದು ಎಂದು ಮೇಲ್ವರ್ಗದವರು ಹೇಳಿದ್ದಾರೆ.
ಇದಕ್ಕೂ ಮುನ್ನ ಸಂತ್ರಸ್ತೆಯ ಬುಲ್ಗಾಡಿ ಗ್ರಾಮದಿಂದ 5 ಕಿಮೀ ದೂರದ ಭಗ್ನ ಗ್ರಾಮದಲ್ಲಿ ಪಂಚಾಯಿತಿ ನಡೆಸಿದ ಬಳಿಕ ಪ್ರತಿಭಟನೆ ಪ್ರಾರಂಭವಾಯಿತು. ಪಂಚಾಯಿತಿಯಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕರು ಈ ಪ್ರಕರಣದಲ್ಲಿ ಆರೋಪಿಗಳನ್ನ ಸುಮ್ಮನೆ ಸಿಲುಕಿಸಲಾಗಿದೆ. ಕೆಲ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಪ್ರಕರಣಕ್ಕೆ ಬಣ್ಣ ಕಟ್ಟುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದರೆನ್ನಲಾಗಿದೆ.
ಇದನ್ನೂ ಓದಿ: ಜಾತಿಭೇದಕ್ಕೆ ಬೇಸತ್ತು ನಟ ಕಲಾಭವನ್ ಮಣಿ ಸಹೋದರ ರಾಮಕೃಷ್ಣನ್ ಆತ್ಮಹತ್ಯೆಗೆ ಯತ್ನ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್ಐಟಿ ತನಿಖೆ ನಡೆಯುತ್ತಿರುವಂತೆಯೇ ಸಿಬಿಐ ತನಿಖೆಗೂ ಶಿಫಾರಸು ಮಾಡಿದ್ದಾರೆ. ಘಟನೆಯಲ್ಲಿ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ.
ಸಂತ್ರಸ್ತೆಯ ಕುಟುಂಬಕ್ಕೆ ವೈ ಭದ್ರತೆ ನೀಡಲು ಆಜಾದ್ ಆಗ್ರಹ:
ಇದೇ ವೇಳೆ, ಹಾಥ್ರಸ್ನಲ್ಲಿರುವ ಸಂತ್ರಸ್ತೆಯ ಬುಲ್ಗಾಡಿ ಗ್ರಾಮಕ್ಕೆ ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮಗಳ ಪ್ರತಿನಿಧಿಗಳ ದಂಡೇ ದೌಡಾಯಿಸುತ್ತಿದೆ. ಎಸ್ಐಟಿ ತನಿಖೆ ನಡೆಯುತ್ತಿದ್ದುದ್ದರಿಂದ ಸರ್ಕಾರವು ಈ ಗ್ರಾಮಕ್ಕೆ ನಾಕಾಬಂದಿ ಹಾಕಿತ್ತು. ಎಸ್ಐಟಿಯ ಪ್ರಾಥಮಿಕ ವರದಿ ಬಂದ ಬಳಿಕ ಹೊರಗಿನವರ ಭೇಟಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಿನ್ನೆ ಬಂದು ಹೋಗಿದ್ದರು. ಇಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೂಡ ಬಂದು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಹೋಗಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಸಹವಾಸ ಬೇಡ; ಬಿಜೆಪಿ ಜೊತೆ ಮಾತ್ರ ಮೈತ್ರಿ: ಎಲ್ಜೆಪಿ ಹಠ
ಸಂತ್ರಸ್ತೆಯ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಅವರಿಗೆ ವೈ ಮಟ್ಟದ ಭದ್ರತೆ ನೀಡಬೇಕು. ಇಲ್ಲದಿದ್ದರೆ ಅವರನ್ನ ತನ್ನ ಮನೆಗೆ ಕರೆದೊಯ್ದು ಭದ್ರತೆ ಒದಗಿಸುತ್ತೇನೆ ಎಂದು ಆಜಾದ್ ಸವಾಲು ಹಾಕಿದ್ದಾರೆ. ಹಾಗೆಯೇ, ಪ್ರಕರಣದ ತನಿಖೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಹಾಥ್ರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರು ಮಾಡುತ್ತಿರುವ ಒತ್ತಾಯವೂ ಹೌದು. ಎಸ್ಐಟಿ ಅಥವಾ ಸಿಬಿಐನಿಂದ ವಿಶ್ವಾಸಾರ್ಹ ತನಿಖೆ ಸಾಧ್ಯವಿಲ್ಲ. ನ್ಯಾಯಾಂಗ ತನಿಖೆ ಆಗಬೇಕು ಎಂಬುದು ಅವರ ಆಗ್ರಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ