ನಾಳೆ ಅಂದರೆ ಸೆಪ್ಟೆಂಬರ್ 5ರಂದು ಭಾರತ ರತ್ನ, ಶಿಕ್ಷಕ, ತತ್ವಜ್ಞಾನಿ, ವಿದ್ವಾಂಸ, ರಾಜಕಾರಣಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅವರು ಹುಟ್ಟಿದ ದಿನವನ್ನು ವಿಶೇಷವಾಗಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಒಬ್ಬ ಮಾದರಿ ಶಿಕ್ಷಕನಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಶಿಕ್ಷಣ ಹಾಗೂ ದೇಶದ ಯುವಜನತೆಗಾಗಿ ಮುಡುಪಾಗಿಟ್ಟಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ, ಜೊತೆಗೆ ಎರಡನೇ ರಾಷ್ಟ್ರಪತಿಯಾಗಿದ್ದರು. ಆದರೂ ಸಹ ಅವರ ತುಡಿತ ಇದ್ದದ್ದು ಶಿಕ್ಷಕ ವೃತ್ತಿಯ ಕಡೆಗೆ.
ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಒಂದು ಉದ್ದೇಶವಿದೆ. ಒಮ್ಮೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರ ಬಳಿ ಬಂದು ನಿಮ್ಮ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಿದ್ದೇವೆ, ತಾವುಗಳು ದಯಮಾಡಿ ಬರಲೇಬೇಕು ಎಂದು ಆಹ್ವಾನ ನೀಡಿದ್ದರಂತೆ. ಆಗ ರಾಧಾಕೃಷ್ಣನ್ ಅವರು, ಈ ದಿನವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ಶಿಕ್ಷಕರ ದಿನ ಎಂದು ಏಕೆ ಆಚರಿಸಬಾರದು? ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ ಎಂದರಂತೆ. ಇದನ್ನು ಒಪ್ಪಿದ ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888ರ ಸೆಪ್ಟೆಂಬರ್ 5ರಂದು ತಮಿಳುನಾಡಿನ ತಿರುತನಿಯಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು.
ರಾಧಾಕೃಷ್ಣ ಅವರು ಉತ್ತಮ ವಿದ್ಯಾರ್ಥಿಯಾಗಿದ್ದು, ಬಾಲ್ಯದಲ್ಲೇ ಓದಿನಲ್ಲಿ ಮುಂದೆ ಇದ್ದರು. ಬಳಿಕ ಮದ್ರಾಸ್ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಫಿಲಾಸಪಿ(ತತ್ವಶಾಸ್ತ್ರ)ಯಲ್ಲಿ ಎಂ.ಎ ಮಾಡಿದರು.
ರಾಧಾಕೃಷ್ಣ ಅವರು ಹಲವಾರು ಕಾಲೇಜುಗಳಲ್ಲಿ ಉಪನ್ಯಾಸ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಲ್ಕತ್ತಾ ಯೂನಿವರ್ಸಿಟಿವರೆಗೂ ಅಧ್ಯಾಪಕರಾಗಿದ್ದರು. ತಮ್ಮ ಶಿಕ್ಷಕ ವೃತ್ತಿಯ ಜೊತೆ-ಜೊತೆಗೆ ಭಾರತದ ತತ್ವಶಾಸ್ತ್ರವನ್ನು ವಿಶ್ವಾದ್ಯಂತ ಪರಿಚಯಿಸಿಕೊಡಲು ಅವಿರತವಾಗಿ ಶ್ರಮಿಸಿದರು.
ಬಳಿಕ ಆಂಧ್ರ ವಿಶ್ವವಿದ್ಯಾಲಯ, ದೆಹಲಿ ಯೂನಿವರ್ಸಿಟಿ ಮತ್ತು ಬನಾರಸ್ ಹಿಂದೂ ಯೂನಿವರ್ಸಿಟಿಯ ಉಪಕುಲಪತಿಗಳಾಗಿ ನೇಮಕಗೊಂಡರು.
ಅಷ್ಟೇ ಅಲ್ಲದೇ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಮೊದಲ ಬಾರಿಗೆ ಪ್ರೊಫೆಸರ್ ಆಗಿ ನೇಮಕಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ರಾಧಾಕೃಷ್ಣ ಅವರು ಪಾತ್ರರಾದರು. ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಪೂರ್ವಾತ್ಯ ಸಮುದಾಯ ಮತ್ತು ತತ್ವಗಳು ಎಂಬ ವಿಷಯದ ಪ್ರೊಫೆಸರ್ ಆಗಿ 1936-1952ರವರೆಗೆ ಕಾರ್ಯನಿರ್ವಹಿಸಿದರು.