ಬೆಂಗಳೂರು(ಫೆ. 03): ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನ ಮೊದಲ ದಿನ ಹೆಚ್ಎಎಲ್ ಸಂಸ್ಥೆಗೆ ಭರ್ಜರಿ ಒಪ್ಪಂದ ಸಿಕ್ಕಿದೆ. 83 ತೇಜಸ್ ಲೈಟ್ ಕಾಂಬಾಟ್ ಯುದ್ಧವಿಮಾನಗಳ ಖರೀದಿಗಾಗಿ ಹೆಚ್ಎಎಲ್ ಜೊತೆ ಸರ್ಕಾರ 48,000 ಕೋಟಿ ರೂ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ ಹಾಕಿದೆ. ಇವತ್ತಿನ ಏರೋ ಇಂಡಿಯಾ ಶೋನ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಇಲಾಖೆ ಡಿಜಿ ವಿ ಎಲ್ ಕಾಂತ ರಾವ್ ಅವರು ಒಪ್ಪಂದವನ್ನ ಹೆಚ್ಎಲ್ನ ಛೇರ್ಮನ್ ಮತ್ತು ಎಂಡಿ ಆರ್ ಮಾಧವನ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.
ಹೆಚ್ಎಲ್ ಸಂಸ್ಥೆಯೇ ತೇಜಸ್ ಅನ್ನ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ತೇಜಸ್ ಹಗುರ ಯುದ್ಧವಿಮಾನವಾದರೂ ಬಹಳ ಶಕ್ತಿಶಾಲಿಯಾಗಿದೆ. ಸಿಂಗಲ್ ಎಂಜಿನ್ನ ಮಲ್ಟಿ ರೋಲ್ ಸೂಪರ್ ಸಾನಿಕ್ ಫೈಟರ್ ವಿಮಾನವಾಗಿರುವ ತೇಜಸ್ ಎಂಥದ್ದೇ ಅಪಾಯದ ವಾತಾವರಣದಲ್ಲೂ ಕ್ಷಮತೆಯಿಂದ ಕಾರ್ಯನಿರ್ವಹಿಸಬಲ್ಲುದು. ಭಾರತದ ವಾಯುಪಡೆಗೆ ಈ ಯುದ್ಧವಿಮಾನಗಳು ಪ್ರಬಲ ಅಸ್ತ್ರವೆನಿಸಲಿವೆ.
ಹೆಚ್ಎಎಲ್ನಿಂದ 73 ತೇಜಸ್ ಮಾರ್ಕ್-1A ಮತ್ತು 10 ಎಲ್ಸಿಎ ಮಾರ್ಕ್-1 ತರಬೇತಿ ವಿಮಾನಗಳನ್ನ ಖರೀದಿಸುವ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಭದ್ರತಾ ಸಮಿತಿ ಅನುಮೋದನೆ ನೀಡಿತ್ತು.
ಇದನ್ನೂ ಓದಿ: ಭಾರತದೊಂದಿಗಿನ ಬಂದರು ಅಭಿವೃದ್ಧಿ ಒಪ್ಪಂದ ರದ್ದುಗೊಳಿಸಿ ಶಾಕ್ ಕೊಟ್ಟ ಶ್ರೀಲಂಕಾ
“ಹೆಚ್ಎಎಲ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ 83 ಹೊಸ ತೇಜಸ್ MK1A ಎಲ್ಸಿಎಗಳನ್ನ ಖರೀದಿಸಲು ಭಾರತೀಯ ವಾಯು ಪಡೆ 48 ಸಾವಿರ ಕೋಟಿ ರೂ ಮೊತ್ತದ ಆರ್ಡರ್ಗಳನ್ನ ನೀಡಿದ್ದು ನನಗೆ ಸಂತಸ ತಂದಿದೆ. ಇದು ಮೇಕ್ ಇನ್ ಇಂಡಿಯಾ ಆಶಯದಲ್ಲಿ ನಡೆದ ಅತಿದೊಡ್ಡ ರಕ್ಷಣಾ ಒಪ್ಪಂಕವಾಗಿದೆ” ಎಂದು ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ