ಅಯೋಧ್ಯೆ ರಾಮ ಮಂದಿರ (Ayodhya Ram Mandir) ವಿಚಾರದ ನಂತರ ಇದೀಗ ವಾರಣಾಸಿಯ (Varanasi) ಕಾಶಿ ವಿಶ್ವನಾಥ್ ಮಂದಿರದ (Kashi Vishwanath Mandir) ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದ (Mosque Controversy) ಹಿಂದೂ ಮತ್ತು ಮುಸ್ಲಿಮರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹಿಂದೂ-ಮುಸ್ಲಿಂ ವಿವಾದ ಒಂದು ಕಡೆಯಾದರೆ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಒಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ (Ravikumar Diwakar) ಸದ್ಯ ಜೀವ ಭಯ ಕಾಡುತ್ತಿದೆಯಂತೆ. ಸಾಮಾನ್ಯ ಸಿವಿಲ್ ವಿಷಯವನ್ನು ಅಸಾಧಾರಣ ಸಮಸ್ಯೆಯಾಗಿ ಪರಿವರ್ತಿಸಿರುವುದರಿಂದ ಅವರ ಕುಟುಂಬವು ನನ್ನ ಸುರಕ್ಷತೆಯ ಬಗ್ಗೆ ಮತ್ತು ನಾನು ಅವರ ಸುರಕ್ಷತೆಯ ಬಗ್ಗೆ ಚಿಂತಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಹಿಂದೂ ದೇಗುಲಕ್ಕೆ ವರ್ಷಪೂರ್ತಿ ಪ್ರವೇಶವನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಗಳ ನಂತರ ಏಪ್ರಿಲ್ನಲ್ಲಿ ನ್ಯಾಯಾಲಯವು ತಪಾಸಣೆಗೆ ಆದೇಶಿಸಿತ್ತು.
ಏನಿದು ಜ್ಞಾನವಾಪಿ ಮಸೀದಿ ವಿವಾದ?
1669ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ಪುರೋಹಿತರ ಗುಂಪೊಂದು ವಾರಣಾಸಿ ನ್ಯಾಯಾಲಯಕ್ಕೆ ತೆರಳಿ 1991 ರಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲಿಂದ ಶುರುವಾದ ವಿವಾದ ಸದ್ಯ ಸರ್ವೇಕ್ಷಣೆ ನಡೆಸುವವರೆಗೆ ಬಂದು ತಲುಪಿದೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ್ ಗೌರಿ ಮತ್ತಿತರ ದೇವರುಗಳ ವಿಗ್ರಹಗಳಿದ್ದು ಅಲ್ಲಿ ದಿನವೂ ಪೂಜೆ ಸಲ್ಲಿಸಬೇಕೆಂದು ಐವರು ಮಹಿಳೆಯರು ಕಳೆದ ವರ್ಷ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿರುವ ಹಿಂದೂ ದೇವರ ವಿಗ್ರಹಗಳಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ಒದಗಿಸಬೇಕೆಂದು ಇವರು ಕೋರಿದ್ದರು.
ಸ್ಥಳೀಯ ನ್ಯಾಯಾಲಯವು ಈ ಹಿಂದೆ ಮೇ 10 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಕಳೆದ ಶುಕ್ರವಾರ ಪ್ರಾರಂಭವಾದ ಸಮೀಕ್ಷೆಯು ಮಸೀದಿಯೊಳಗೆ ವೀಡಿಯೋಗ್ರಫಿ ವಿವಾದದ ಕಾರಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೇ 17 ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ನಿನ್ನೆ ಗುರುವಾರ ನೀಡಿದ ತೀರ್ಪಿನಲ್ಲಿ ವಾರಣಾಸಿಯ ನ್ಯಾಯಾಲಯವು, ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಮೇ 17ರೊಳಗೆ ಸರ್ವೇಕ್ಷಣೆ ನಡೆಸಬೇಕು ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ