ನವದೆಹಲಿ(ಆ.18): ಗುಲ್ಜಾರ್ ಕವಿ ಬಹುಶಃ ಎಲ್ಲರಿಗೂ ಚಿರಪರಿಚಿತ. ತಮ್ಮ ಕವಿತೆಗಳಿಂದಲೇ ಪ್ರಖ್ಯಾತಿಯಾಗಿರುವ ಕವಿ ಗುಲ್ಜಾರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸಂಪೂರನ್ ಸಿಂಗ್ ಕಲ್ರಾ ಆಗಿ ಜನಿಸಿದ ಅವರು, ಗುಲ್ಜಾರ್ ಎಂಬ ತಮ್ಮ ಕಾವ್ಯನಾಮದಿಂದಲೇ ಚಿರಪರಿಚಿತರಾಗಿದ್ದಾರೆ. ಗುಲ್ಜಾರ್ ಅವರಿಗೆ ಇಂದಿಗೆ 86 ವರ್ಷ.
ಗುಲ್ಜಾರ್ ಅವರು ಅಪ್ರತಿಮ ಕವಿ ಮತ್ತು ಗೀತರಚನೆಕಾರ. ಇವರು ಪ್ರಮುಖವಾಗಿ ಪ್ರೀತಿ-ಪ್ರೇಮದ ಬಗ್ಗೆ ಹೆಚ್ಚು ಬರಹಗಳನ್ನು ಬರೆದಿದ್ದಾರೆ. ಗುಲ್ಜಾರ್ ತಮ್ಮ ಐದು ದಶಕಗಳ ವೃತ್ತಿ ಜೀವನದಲ್ಲಿ ಜನಪ್ರಿಯ ಹಿಂದಿ ಚಲನಚಿತ್ರ ಸಂಗೀತಕ್ಕೆ ಕಾವ್ಯದ ಸಂವೇದನೆಯನ್ನು ಒದಗಿಸಿಕೊಟ್ಟ ಸಾಹಿತಿ ಎಂದರೆ ತಪ್ಪಾಗಲಾರದು.
ಗುಲ್ಜಾರ್ 1963ರಲ್ಲಿ ಬಂಧಿನಿ ಚಿತ್ರದ ಮೂಲಕ ಗೀತರಚನಾಕಾರರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಮೇರಾ ಗೋರ ಆಂಗ್ ಲಾಯ್ಲೆ ಗೀತೆಯನ್ನು ಬರೆದರು. ಬಳಿಕ ಗುಲ್ಜಾರ್ ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ನಿರ್ದೇಶನದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದರು.
ಕೃಷ್ಣಾ ನದಿಯಲ್ಲಿ ಪ್ರವಾಹ; ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಪತ್ತೆ
ಗುಲ್ಜಾರ್ ಅವರ ಅಪ್ರತಿಮ ಪ್ರತಿಭೆ ಮತ್ತು ಕಾವ್ಯಕೃಷಿಗೆ ಬಹಳಷ್ಟು ಪ್ರಶಸ್ತಿಗಳು ಅವರ ಮಡಿಲು ಸೇರಿವೆ. ಗುಲ್ಜಾರ್ ಅವರು ಪದ್ಮಭೂಷಣ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇನ್ನೂ ಮೊದಲಾದ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇಷ್ಟೇ ಅಲ್ಲದೇ ಅವರು ಜೈ ಹೋ ಗೀತೆಗಾಗಿ ಗ್ರ್ಯಾಮಿ ಮತ್ತು ಆಸ್ಕರ್ ಅವಾರ್ಡ್ನ್ನು ಸಹ ಪಡೆದಿದ್ದಾರೆ. ಜೊತೆಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 21 ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಸಹ ಗುಲ್ಜಾರ್ ಪಡೆದಿದ್ದಾರೆ.
ತುಟಿ ಬಿಚ್ಚದ ಒಂದು ಗಾಯದಂತಿದೆ
ಈ ಬದುಕೇ ಒಂದು ಕಾವ್ಯದಂತಿದೆ.
ರಕ್ತ ತೊಟ್ಟಿಕ್ಕಿದರೆ ಗಾಯ ಎಂದೆನಿಸುತ್ತದೆ,
ಇಲ್ಲವಾದಲ್ಲಿ ಪ್ರತಿ ತರಚು ಗಾಯನದಂತಿದೆ.
ಗೆಳೆಯರ ನಡುವೆ ನಾ ತೀರಾ ಒಬ್ಬಂಟಿ,
ಒಂಟಿನಂತವೇ ಗೆಳೆಯರ ಬಳಗದಂತಿದೆ.
ನನ್ನ ಪ್ರತಿ ಹೆಜ್ಜೆಯೂ ನನ್ನ ನೆರಳ ಮೇಲೆ,
ಕಾಲ ಹುಣ್ಣಿಗೆ ಸ್ವಲ್ಪ ಆರಾಮವಾದಂತಿದೆ.
ಚಂದ್ರನ ಹಣೆ ಮುಟ್ಟಿ ನೋಡಿ ಒಮ್ಮೆ,
ಈ ರಾತ್ರಿಗೆ ಚಳಿ-ಜ್ವರ ಹಿಡಿದಂತಿದೆ.
ಬದುಕಿರಲೇ ಬೇಕೆಂಬ ಅಪ್ಪಣೆ ಪಾಲಿಸುವಾಗ,
ಕ್ಷಣ ಕ್ಷಣ ಸಾಯುವುದು ಕಡ್ಡಾಯ ಎಂಬಂತಿದೆ.
*************************************************************
ಹಗೂರ
ಹೆಜ್ಜೆ ಹಾಕು.
ಇನ್ನೂ
ಹ
ಗೂ
ರ
ಮತ್ತೂ
ನಿ
ಧಾ
ನ.
ನೋಡು, ಎಚ್ಚರದಿಂದ ಕಾಲಿಡು
ಹೆಜ್ಜೆ ಸಪ್ಪಳ ಸದ್ದು ಮಾಡದಿರಲಿ ಜೋರು
ಗಾಜಿನ ಕನಸುಗಳು ಒಂಟಿತನದ ಮೇಲೆ ಹರಡಿವೆ
ಕನಸುಗಳು ಒಡೆಯದಿರಲಿ, ಎಚ್ಚರಗೊಳ್ಳದಿರಲಿ
ಎಚ್ಚರಗೊಂಡರೆ
ಕನಸು
ಇಲ್ಲವಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ