ಕೊಲ್ಕತ್ತಾ: ಪೆಗಾಸಸ್ ಗೂಢಾಚರ್ಯೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. ಹುತಾತ್ಮರ ಗೌರವ ದಿನದ ಅಂಗವಾಗಿ ವರ್ಚುವಲ್ ಮೂಲಕ ಮಾತನಾಡಿದ ದೀದಿ, ಗೂಢಾಚರ್ಯೆ ಮೂಲಕ ಕೇಂದ್ರ ಸರ್ಕಾರ ಇಡೀ ಭಾರತದ ವ್ಯವಸ್ಥೆಯನ್ನು ಹಾಳು ಮಾಡಿದೆ. ಪ್ರತಿಪಕ್ಷ ನಾಯಕರ ಜೊತೆ ಫೋನ್ನಲ್ಲಿ ಮಾತನಾಡಲು ಸಾಧ್ಯವಾಗದಂತೆ ಮಾಡಿದೆ. ಕೇಂದ್ರ ಸರ್ಕಾರ ಪೆಗಾಸಸ್ ಬಳಸಿಕೊಂಡು ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಸೇರಿದಂತೆ ಹಲವು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಿಜ್ಞಾನಿಗಳ ಫೋನ್ ಕದ್ದಾಲಿಕೆ ಮಾಡಿದೆ ಎಂದು ಆರೋಪಿಸಿದರು.
ವಿಧಾನಸಭೆ ಚುನಾವಣೆ ವೇಳೆ ಟಿಎಂಸಿ ಸ್ಲೋಗನ್ ಆಗಿದ್ದ ಕೇಲ್ ಹೂಬೆ ದೇಶಾದ್ಯಂತ ಮುಂದುವರಿಯಬೇಕು. ದೇಶದಿಂದ ಬಿಜೆಪಿಯನ್ನು ಸಂಪೂರ್ಣವಾಗಿ ಕಿತ್ತೊಗೆದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತೊಗೆದ ದಿನ ಅಂದರೆ ಆ.16ರಂದು ಕೇಲ್ ದಿವಸ್ ಆಗಿ ಆಚರಿಸೋಣ ಎಂದು ಕರೆ ನೀಡಿದರು. ಕೈಯಲ್ಲಿದ್ದ ಮೊಬೈಲ್ ಫೋನ್ನ ತೋರಿಸಿದ ದೀದಿ, ನನ್ನ ಮೊಬೈಲ್ಗೆ ಪ್ಲಾಸ್ಟರ್ ಹಾಕಿದ್ದೇನೆ. ಕೇಂದ್ರ ಸರ್ಕಾರಕ್ಕೂ ಪ್ಲಾಸ್ಟರ್ ಹಾಕಬೇಕು. ಇಲ್ಲವಾದರೆ ಭಾರತವನ್ನು ಗೂಢಾಚರ್ಯೆ ಮೂಲಕ ಹಾಳು ಮಾಡುತ್ತೆ ಎಂದು ಕಿಡಿಕಾರಿದರು.
ನಮ್ಮ ಫೋನ್ಗಳನ್ನು ಟ್ರ್ಯಾಪ್ ಮಾಡಲಾಗುತ್ತಿದೆ. ನನಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಗೂಢಾಚರ್ಯೆ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಬಿಜೆಪಿ ತನ್ನ ಮಂತ್ರಿಗಳನ್ನೇ ನಂಬುವುದಿಲ್ಲ, ತನಿಖಾ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ. ಇನ್ನು ಪೆಗಾಸಸ್ನ ಇಸ್ರೇಲಿ ಎನ್ಎಸ್ಓ ಗ್ರೂಪ್ ಸೃಷ್ಟಿಸಿದೆ. ಅದನ್ನು ಭಾರತದ 100ಕ್ಕೂ ಹೆಚ್ಚು ನಾಯಕರ ಮೇಲೆ ಗೂಢಾಚರ್ಯೆ ಮಾಡಲು ಬಳಸಲಾಗಿದೆ ಎಂದು ಮಮತಾ ಕೇಂದ್ರದ ವಿರುದ್ಧ ಕಿಡಿಕಾರಿದರು.
ಪೆಗಾಸಸ್ ಸ್ಪೈಯಿಂಗ್ ವಿರುದ್ಧ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಗೂಢಾಚರ್ಯೆ ಮೂಲಕವೇ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉರುಳಿಸಿದ್ದಾರೆ ಎಂದು ಆರೋಪಿದರು. ಬಿಜೆಪಿ ಸಾಕಷ್ಟು ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದಿದ್ದರ ಹಿಂದೆ ಪೆಗಾಸಸ್ ಜಾಲವಿದೆ ಎಂದು ಕಾಂಗ್ರೆಸ್ ನಾಯಕರು ದೂರಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ