ಕಾನ್ಪುರ (ಜು.9): 8 ಪೊಲೀಸರನ್ನು ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ ಗ್ಯಾಂಗಸ್ಟರ್ ವಿಕಾಸ್ ದುಬೆಯನ್ನು ಉತ್ತರ ಪ್ರದೇಶ ಪೊಲೀಸರು ಉಜ್ಜಯಿನಿಯಲ್ಲಿ ಬಂಧಿಸಿದ್ದಾರೆ. ವಿಕಾಸ್ ಸಹಚರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ವಿಕಾಸ್ನನ್ನು ಬಂಧಿಸಲಾಗಿದೆ.
ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ಕುಖ್ಯಾತ ಗ್ಯಾಂಗಸ್ಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್ಪುರ ಪೊಲೀಸ್ ಠಾಣಾಧಿಕಾರಿ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್, ಐದು ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಘಟನೆ ನಂತರ ವಿಕಾಸ್ ತಲೆಮೆರಿಸಿಕೊಂಡಿದ್ದ. ಈತನಿಗಾಗಿ ಪೊಲೀಸರು ನಾನಾ ಕಡೆಗಳಲ್ಲಿ ಹುಡುಕಿದ್ದರು. ನಿನ್ನೆ ಈತ ಹರಿಯಾಣದ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿತ್ತು. ಈ ಮಧ್ಯೆ ಆತನ ಆಪ್ತ ಅಮರ್, ಸಹಚರರಾದ ಪ್ರಭಾತ್ ಹಾಗೂ ರಣಬೀರ್ನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು. ಈ ಬೆನ್ನಲ್ಲೇ ಈಗ ವಿಕಾಸ್ನನ್ನು ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ