ಪಂಜಾಬ್: ಖಲಿಸ್ತಾನಿ (Khalistan Fighter) ಪರ ಹೋರಾಟಗಾರ, ವಾರಿಸ್ ಪಂಜಾಬ್ ದೆ (Waris Punjab De) ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ನನ್ನು ಕೊನೆಗೂ ಪೊಲೀಸರು ಬಂಧನ (Amrit Pal Singh Arrested) ಮಾಡಿದ್ದಾರೆ. 36 ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಬಳಿಕ ಕೊನೆಗೂ ಪೊಲೀಸರು ಅಮೃತ್ ಪಾಲ್ ಸಿಂಗ್ನನ್ನು ಹೆಡೆಮುರಿ ಕಟ್ಟಿದ್ದು, ಪಂಜಾಬ್ನ ಮೊಗ ಬಳಿ ಬಂಧಿಸಿದ್ದಾರೆ.
ಒಂದು ತಿಂಗಳ ಹಿಂದಿನಿಂದ ತಲೆಮರೆಸಿಕೊಂಡಿದ್ದ ಸ್ವಘೋಷಿತ ಮೂಲಭೂತವಾದಿ ಹಾಗೂ ಸಿಖ್ ಭೋಧಕ ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಸಮಾಜದಲ್ಲಿ ಅಶಾಂತಿ ಎಬ್ಬಿಸಲು ಪ್ರಯತ್ನಿಸಿದ್ದ ಅಮೃತ್ ಪಾಲ್ ಸಿಂಗ್ ಸಹಚರರನನ್ನು ಇತ್ತೀಚೆಗೆ ಬಂಧಿಸಿ, ಅಪಾರ ಪ್ರಮಾಣದಲ್ಲಿ ಶಸ್ತಾಸ್ತ್ರಗಳನ್ನು ವಶಪಡಿಕೊಳ್ಳಲಾಗಿತ್ತು.
ಇದನ್ನೂ ಓದಿ: Amit Shah: ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿ ನಿಮಗೂ ಬರುತ್ತೆ: ಅಮಿತ್ ಶಾಗೆ ಖಲಿಸ್ತಾನಿಗಳ ಬೆದರಿಕೆ!
ಪಂಜಾಬ್ನ ಮೊಗ ಬಳಿಯ ಗುರುದ್ವಾರದಲ್ಲಿ ಅಮೃತ್ಪಾಲ್ ಸಿಂಗ್ ಅಡಗಿಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಅಮೃತ್ಪಾಲ್ನನ್ನುಪತ್ತೆ ಹಚ್ಚಿ ಆತನ ಕೈಗೆ ಕೋಳ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅಮೃತ್ ಪಾಲ್ ಸಿಂಗ್ನನ್ನು ಡಿಬ್ರುಗಢ ಜೈಲಿಗೆ ಕರೆದೊಯ್ಯಲಾಗುತ್ತಿದ್ದು, ಪೊಲೀಸರ ವಾಹನಗಳು ಆತನನ್ನು ಸುತ್ತುವರೆದಿದೆ.
ಖೆಡ್ಡಾ ತೋಡಿದ್ದ ಪೊಲೀಸರು
ಕಳೆದ ಮಾರ್ಚ್ 18 ರಿಂದ ಅಮೃತಪಾಲ್ ಸಿಂಗ್ ಬಂಧಿಸಲು ಪಂಜಾಬ್ನ ನಾಕೋಡರ್ ಬಳಿ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಳ್ಳುತ್ತಿದ್ದ. ಇತ್ತೀಚೆಗಷ್ಟೇ ಅಮೃತ್ ಪಾಲ್ ಸಿಂಗ್ನ ಪತ್ನಿ ಕಿರಿಣ್ ದೀಪ್ ಕೌರ್ಳನ್ನು ಪಂಜಾಬ್ ಪೊಲೀಸರು ಅಮೃತ್ಸರ್ನ ಶ್ರೀ ಗುರುರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಕಿರಿಣ್ದೀಪ್ ಲಂಡನ್ಗೆ ಹಾರಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಪೊಲೀಸರು ಖೆಡ್ಡಾ ತೋಡಿದ್ದರು.
ಮಾರ್ಚ್ 18ರಂದು ಅಮೃತ್ಪಾಲ್ ಸಿಂಗ್ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಂದಿನಿಂದ ಇಲ್ಲಿಯವರೆಗೂ ಸುಮಾರು 36 ದಿನಗಳಿಂದ ಪೊಲೀಸರಿಂದ ಎಸ್ಕೇಪ್ ಆಗಿದ್ದ ಅಮೃತ್ಪಾಲ್ನನ್ನು ಕೊನೆಗೂ ಬಂಧಿಸಲಾಗಿದೆ. ಈಗಾಗಲೇ ಈತನ ಹಲವು ಸಹಚರರು ಮತ್ತು ವಾರಿಸ್ ಪಂಜಾಬ್ ದೆ ಸಂಘಟನೆಯ ಅನೇಕ ಸದಸ್ಯರನ್ನು ಬಂಧಿಸಲಾಗಿದೆ.
ಇನ್ನು ಅಪಹರಣ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ತೂಫಾನ್ ಸಿಂಗ್ ಎಂಬಾತನನ್ನು ಬಿಡುಗಡೆ ಮಾಡುವಂತೆ ಅಮೃತ್ಪಾಲ್ ಸಿಂಗ್ ಮತ್ತು ಆತನ ಬೆಂಬಲಿಗರು ಫೆಬ್ರವರಿಯಲ್ಲಿ ಅಮೃತಸರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಖಲಿಸ್ತಾನಿ ಗುಂಪು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿತ್ತು. ಆಗ ಹೇಳಿಕೆ ನೀಡಿದ್ದ ಅಮೃತ್ ಪಾಲ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿದ್ದ. ‘ಅಮಿತ್ ಶಾ ಅವರು ಖಲಿಸ್ತಾನ್ ಚಳವಳಿಯನ್ನು ಹುಟ್ಟುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಏನಾಯಿತು ಎಂದು ಯೋಚಿಸಿಕೊಳ್ಳಿ, ಅದೇ ರೀತಿ ನೀವು ಕೂಡ ಮಾಡಿದರೆ, ಅವರಿಗೆ ಆದ ಗತಿಯೇ ನಿಮಗೂ ಆಗಬಹುದು. ಅಂತಹ ಪರಿಸ್ಥಿತಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ನಮ್ಮ ಚಳವಳಿಯನ್ನು ಹತ್ತಿಕ್ಕುವ ಬಗ್ಗೆ ಎಚ್ಚರಿಕೆ ನೀಡಿದಂತೆಯೇ ಹಿಂದೂ ರಾಷ್ಟ್ರಕ್ಕೆ ಆಗ್ರಹಿಸುತ್ತಿರುವವರಿಗೂ ಎಚ್ಚರಿಕೆ ಕೊಟ್ಟರೆ ನೀವು ಕೇಂದ್ರ ಗೃಹ ಸಚಿವರಾಗಿ ಉಳಿಯುವುದಿಲ್ಲ. ಅದರ ಅರಿವು ಅಮಿತ್ ಶಾಗೆ ಇದೆ ಎಂದು ಅಮೃತ್ ಪಾಲ್ ಸಿಂಗ್ ಹೇಳಿದ್ದ.
ಮಾರ್ಚ್ 24ರಂದು ನಾಲ್ವರ ಬಂಧನ
ಖಲಿಸ್ತಾನಿ ನಾಯಕ ಹಾಗೂ ವಾರಿಸ್ ಪಂಜಾಬ್ ದೇ (Waris Punjab De) ಮುಖ್ಯಸ್ಥ ಅಮೃತಪಾಲ್ ಸಿಂಗ್ನನ್ನು ಬೆಂಬಲಿಸಿ ನಗರದಲ್ಲಿ ರ್ಯಾಲಿ ನಡೆಸಿದ್ದಕ್ಕಾಗಿ ರಾಯ್ಪುರದಲ್ಲಿ ಮಾರ್ಚ್ 24ರಂದು ನಾಲ್ವರನ್ನು ಬಂಧಿಸಲಾಗಿತ್ತು. ಎಲ್ಲಾ ಆರೋಪಿಗಳು ಛತ್ತೀಸ್ಗಢದ ರಾಜಧಾನಿ ರಾಯ್ಪುರ ನಿವಾಸಿಗಳೆಂದು ತಿಳಿದುಬಂದಿದ್ದು, ದಿಲೇರ್ ಸಿಂಗ್ ರಾಂಧ್ವಾ (46), ಮಣಿಂದರ್ಜಿತ್ ಸಿಂಗ್ ಅಲಿಯಾಸ್ ಮಿಂಟು ಸಂಧು ಅಲಿಯಾಸ್ ಹರಿಂದರ್ ಸಿಂಗ್ ಖಾಲ್ಸಾ (44) ಮತ್ತು ಹರ್ಪ್ರೀತ್ ಸಿಂಗ್ ರಾಂಧವಾ ಅಲಿಯಾಸ್ ಚಿಂಟು (42) ಎಂಬುವವರನ್ನು ಅಂದು ಬಂಧಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ