ತಮಿಳುನಾಡು: 'ಮಾಂಡೌಸ್' ಚಂಡಮಾರುತದ (Mandous Cyclone) ಅಬ್ಬರ ಜೋರಾಗಿದೆ. ಮುಖ್ಯವಾಗಿ ತಮಿಳುನಾಡು (Tamil Nadu), ಪಾಂಡಿಚೇರಿ (Pondicherry), ತೆಲಂಗಾಣದಲ್ಲಿ (Telangana) ಮಾಂಡೌಸ್ ಆರ್ಭಟಿಸುತ್ತಿದೆ. ಪರಿಣಾಮ ಪಕ್ಕದ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲೂ ಭಾರೀ ಮಳೆಯಾಗುತ್ತಿದೆ. ಚಂಡಮಾರುತದಿಂದಾಗಿ ತಮಿಳುನಾಡಿನ ಚೆನ್ನೈ (Chennai) ಸೇರಿದಂತೆ ಹಲವೆಡೆ ಭಾರೀ ಗಾಳಿ ಮಳೆ ಸುರಿದಿದೆ. ಇನ್ನು ಚೆನ್ನೈನ ಮರೀನಾ ಬೀಚ್ (Marina Beach) ಬಳಿ ಜಲಾವೃತವಾಗಿದೆ. ಕರಾವಳಿ ಭಾಗದಲ್ಲಿ ಹಲವಾರು ದೋಣಿಗಳು ಮತ್ತು ಆಹಾರ ಮಳಿಗೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಮಾಂಡೌಸ್ ಅಬ್ಬರಕ್ಕೆ ತಮಿಳುನಾಡಿನ ವಿವಿಧ ಭಾಗದಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಸರ್ಕಾರ (Tamil Nadu Government) ತಿಳಿಸಿದೆ. ಅತ್ತ ತಿರುಪತಿಯಲ್ಲೂ (Tirupati) ಮಳೆ ಅಬ್ಬರ ಜೋರಾಗಿದೆ. ತಿರುಪತಿ ಬಾಲಾಜಿ ದೇವಸ್ಥಾನದ (Tirupati Balaji Temple) ಬಳಿ ಹಲವು ಪ್ರದೇಶ ಜಲಾವೃತವಾಗಿದೆ.
ಮಾಂಡೌಸ್ ಚಂಡಮಾರುತದ ಅಬ್ಬರ
ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ ಜೋರಾಗಿದೆ. ತಮಿಳುನಾಡಿನ ಉತ್ತರ ಭಾಗ, ಪಾಂಡಿಚೇರಿ ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದ ತೀರ ಪ್ರದೇಶಗಳಲ್ಲಿ ಚಂಡಮಾರುತದ ಆರ್ಭಟ ಜಾಸ್ತಿಯಾಗಿದೆ.
ತಮಿಳುನಾಡಲ್ಲಿ ನಾಲ್ವರು ಸಾವು
ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ ಜೋರಾಗಿದೆ. ಈವರೆಗೆ ನಾಲ್ವರು ಸಾವನ್ನಪ್ಪಿದ್ದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ. ತಮಿಳುನಾಡು ಮತ್ತು ಕಾರೈಕಲ್ ಪ್ರದೇಶದಲ್ಲಿ ಕಡಲೂರು, ನಾಗಪಟ್ಟಿಣಂ, ತಿರುವರೂರ್ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ತಮಿಳುನಾಡಿನ ಕಾಂಚೀಪುರಂ, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಪಾಂಡಿಚೇರಿಯ ಕೆಲವು ಸ್ಥಳಗಳಲ್ಲಿ ಗಾಳಿ, ಮಳೆಯ ಅಬ್ಬರ ಜೋರಾಗಿದೆ.
ಇದನ್ನೂ ಓದಿ: Rain Update: ಇನ್ನೂ 4 ದಿನ ಬೆಂಗಳೂರು ಸಖತ್ ಕೂಲ್, ಮಳೆ ಜೊತೆ ಚುಮು-ಚಮು ಚಳಿ
ಚೆನ್ನೈನಲ್ಲಿ ದಾಖಲೆಯ ಮಳೆ
ಚೆನ್ನೈನಲ್ಲಿ 115 ಮಿಮೀ ದಾಖಲೆಯ ಮಳೆಯಾಗಿದೆ. ಡಿಸೆಂಬರ್ 9 ಮತ್ತು 10 ರ ಮಧ್ಯರಾತ್ರಿಯಲ್ಲಿ ಸೈಕ್ಲೋನ್ ಕರಾವಳಿಯನ್ನು ದಾಟಿದಾಗ 70 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. ಪರಿಣಾಮ ಚೆನ್ನೈನಲ್ಲಿ ಸುಮಾರು 400 ಮರಗಳು ಬಿದ್ದಿವೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾಹಿತಿ ನೀಡಿದ್ದಾರೆ.
ಹಲವೆಡೆ ಹೈ ಅಲರ್ಟ್
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿರುವ ಕಾರಣ , ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯ ಕೆಲವು ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.
ಮೀನುಗಾರಿಕೆಗೆ ತೊಂದರೆ
ಕೋವಲಂ, ಪಕ್ಕದ ಮಾಮಲ್ಲಪುರಂ, ಸಮುದ್ರ ತೀರದ ಅಂಗಡಿಗಳಲ್ಲದೆ ದೋಣಿಗಳಿಗೂ ಹಾನಿಯಾಗಿದೆ. "ಅಂಗಡಿಗಳ ತಗಡಿನ ಛಾವಣಿಗಳು ಹಾರಿಹೋಗಿವೆ. ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೇ ಸ್ಥಳೀಯರು ನಷ್ಟ ಅನುಭವಿಸಿದ್ದಾರೆ.
ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ
ತಮಿಳುನಾಡಿನ ಹತ್ತು ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ. ತಮಿಳುನಾಡು ಸರ್ಕಾರವು 5,000 ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ತೆರೆದಿದೆ. ಚೆಂಗಲ್ಪಟ್ಟು ಜಿಲ್ಲೆಯೊಂದರಲ್ಲೇ 1,058 ಕುಟುಂಬಗಳು 28 ಕೇಂದ್ರಗಳಿಗೆ ಸ್ಥಳಾಂತರಗೊಂಡಿವೆ.
ಇದನ್ನೂ ಓದಿ: Cyclone Mandous: ಮಾಂಡೌಸ್ ಎಫೆಕ್ಟ್: ತಮಿಳುನಾಡು, ಚೆನ್ನೈ, ಪುದುಚೇರಿಯಲ್ಲಿ ಭಾರೀ ಮಳೆ?
ಕರ್ನಾಟಕದಲ್ಲೂ ಮಾಂಡೌಸ್ ಅಬ್ಬರ
ಚಂಡಮಾರುತದ ಪರಿಣಾಮ ಇತ್ತ ಕರ್ನಾಟಕದಲ್ಲೂ ಮಳೆಯಾಗುತ್ತಿದೆ. ಡಿಸೆಂಬರ್ 12ರವರೆಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಜಿಲ್ಲೆಗಳಲ್ಲಿ, ಚಿಕ್ಕಮಗಳೂರು, ಕೋಲಾರ, ಮೈಸೂರು, ತುಮಕೂರು ಮತ್ತು ಉತ್ತರ ಕರ್ನಾಟಕದ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ