ನವ ದೆಹಲಿ: ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ ಕೇಂದ್ರ ಬಜೆಟ್ (Union Budget 2023) ಕುರಿತು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ (P Chidambaram) ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ಈ ಬಜೆಟ್ನಲ್ಲಿ ಬಡವರು ಅಥವಾ ನಿರುದ್ಯೋಗಿಗಳಿಗೆ ಏನೂ ಇಲ್ಲ ಎಂದು ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿದ 90 ನಿಮಿಷಗಳ ಬಜೆಟ್ನಲ್ಲಿ ಅವರು ಬಡವರು ಎಂಬ ಶಬ್ದವನ್ನು ಎರಡು ಬಾರಿ ಉಚ್ಛರಿಸಿದ್ದು ಬಿಟ್ಟರೆ, ಒಮ್ಮೆಯೂ ‘ಬಡತನ, ನಿರುದ್ಯೋಗ, ಅಸಮಾನತೆ’ ಎಂಬ ಪದಗಳ ಕುರಿತು ಮಾತನಾಡುವ ಬಗ್ಗೆ ಯೋಚನೆಯೇ ಮಾಡಿಲ್ಲ ಎಂದರು.
ಈ ಬಜೆಟ್ನಲ್ಲಿ ಬಡವರಿಗಾಗಿ ಏನಿದೆ? ಎಂದು ಪ್ರಶ್ನಿಸಿದ ಪಿ ಚಿದಂಬರಂ, ಜನರು ಪಾವತಿಸುತ್ತಿರುವ ಪರೋಕ್ಷ ತೆರಿಗೆಯನ್ನು ಕಡಿತಗೊಳಿಸಲಾಗಿದೆಯೇ? ಜಿಎಸ್ಟಿ ಕಡಿತ ಮಾಡಿದ್ದಾರೆಯೇ? ಬಡ ಅಥವಾ ಮಧ್ಯಮ ವರ್ಗದ ಜನರು ಬಳಸುವ ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಸಿಮೆಂಟ್ ಬೆಲೆಗಳನ್ನು ಕಡಿತ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದರು. ಇದೇ ವೇಳೆ ಅಜೀಂ ಪ್ರೇಂ ಜೀ ವಿಶ್ವ ವಿದ್ಯಾಲಯದ ಸಂಶೋಧನೆಯನ್ನು ಉಲ್ಲೇಖ ಮಾಡಿದ ಚಿದಂಬರಂ, ಕೊರೊನಾ ಸಾಂಕ್ರಾಮಿಕ ಕಾಯಿಲೆ ಕಾರಣದಿಂದ ಲಾಕ್ಡೌನ್ ಆದ ಬಳಿಕ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 5.6 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಈಗ ನೀವು ಅವರನ್ನು ಬಡತನದಿಂದ ಮೇಲಕ್ಕೆತ್ತಲು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.
ಅರವಿಂದ್ ಕೇಜ್ರಿವಾಲ್ ಕಿಡಿ
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೆಹಲಿಯ ಜನರು 1.75 ಲಕ್ಷ ಕೋಟಿಗಿಂತ ಹೆಚ್ಚು ಆದಾಯ ತೆರಿಗೆ ಕಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿಯ ಅಭಿವೃದ್ಧಿಗೆ ಈ ಬಜೆಟ್ನಲ್ಲಿ ಕೇವಲ 325 ಕೋಟಿ ರೂಪಾಯಿ ಮೀಸಲು ಇಟ್ಟಿದೆ. ರಾಷ್ಟ್ರ ರಾಜಧಾನಿಯ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗೆ ಬಜೆಟ್ನಲ್ಲಿ ಯಾವುದೇ ಯೋಜನೆ ಹಾಕಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Budget 2023: ಬಜೆಟ್ ದಿನಸಿ ಅಂಗಡಿ ರಸೀದಿಯಂತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟೀಕೆ, ಎಲೆಕ್ಷನ್ ಬಜೆಟ್ ಎಂದ ಖರ್ಗೆ!
ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಮತ್ತು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್, ಈ ಬಜೆಟ್ನಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಯಾವುದೇ ಪ್ರಮುಖ ಯೋಜನೆಗಳು ಇಲ್ಲ. ಶಿಕ್ಷಣಕ್ಕೆ ನೀಡುವ ಅನುದಾನವನ್ನು 2.64% ನಿಂದ ಶೇ.2.5ಕ್ಕೆ ಇಳಿಸಿರುವುದು ನಿಜಕ್ಕೂ ದುರದೃಷ್ಟಕರ. ಆರೋಗ್ಯ ಬಜೆಟ್ ಅನ್ನು 2.2% ನಿಂದ ಶೇ 1.98 ಇಳಿಸಿರುವುದು ಕೂಡ ಆಘಾತಕಾರಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟೀಕೆ ಮಾಡಿದ್ಧಾರೆ.
'ಈ ಬಜೆಟ್ ಕನಸಿನ ವ್ಯಾಪಾರಿಯಂತೆ'
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್ ಜನರಿಗೆ ಆಶಾಭಾವನೆ ಮೂಡಿಸುವ ಬದಲು ನಿರಾಶಾ ಭಾವನೆ ನೀಡಿದೆ ಎಂದು ಹೇಳಿದರೆ, ಜೆಡಿಯು ಸಂಸದ ರಾಜೀವ್ ರಂಜನ್ ಅವರು, ಈ ಸಾಲಿನ ಬಜೆಟ್ನಲ್ಲಿ ಏನೂ ಇಲ್ಲ. ಇದು ಕನಸಿನ ವ್ಯಾಪಾರಿಯಂತೆ. ಕನಸಿನ ನಂತರ ನೀವು ಎಚ್ಚರಗೊಂಡಾಗ ಏನೂ ನನಸಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ಯಾವುದೇ ರೀತಿಯ ಯೋಜನೆ ಹಾಕಿಕೊಂಡಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ