ನವದೆಹಲಿ (ಡಿ. 3): ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಣ ಪ್ರಶಸ್ತಿಯನ್ನು ಕೇಂದ್ರಕ್ಕೆ ಮರಳಿಸಿದ್ದಾರೆ. ಕೃಷಿ ಮಸೂದೆ ವಿರೋಧಿಸಿ ಎನ್ಡಿಎ ಒಕ್ಕೂಟ ತೊರೆದಿರುವ ಶಿರೋಮಣಿ ಅಕಾಲಿದಳದ ನಾಯಕ, ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಯನ್ನು ಬಿಜೆಪಿ ಮೈತ್ರಿ ಪಕ್ಷ ಅಕಾಲಿದಳ ತೀವ್ರವಾಗಿ ವಿರೋಧಿಸಿತ್ತು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೆ ತರಲು ಮುಂದಾದ ಹಿನ್ನಲೆ ಮೋದಿ ಸಂಪುಟದಿಂದ ಅಕಾಲಿದಳದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಹೊರ ಬಂದಿದ್ದರು. ಕೇಂದ್ರದ ಈ ಮಸೂದೆಗೆ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ನಾನಾ ಭಾಗದ ರೈತರು ತೀವ್ರವಾಗಿ ಖಂಡಿಸಿ ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಸರ್ಕಾರ ನಡೆಸುತ್ತಿರುವ ಮಾತುಕತೆಗಳು ವಿಫಲವಾಗಿದೆ. ಕಾಯ್ದೆಯನ್ನು ರದ್ದುಪಡಿಸುವಂತೆ ರೈತರು ಬಿಗಿಪಟ್ಟು ಹಿಡಿಸಿದ್ದಾರೆ. ಇಂದು ಮತ್ತೊಮ್ಮೆ ರೈತರೊಂದಿಗೆ ಕೇಂದ್ರ ಸಚಿವರು ಚರ್ಚೆ ನಡೆಸುತ್ತಿದ್ದು, ಹೋರಾಟ ಕೈ ಬಿಡುವಂತೆ ಮನವೊಲಿಕೆಗೆ ಮುಂದಾಗಿದ್ದಾರೆ.
ಪಂಜಾಬ್ನ ರೈತರ ಹೋರಾಟಕ್ಕೆ ರಾಜ್ಯದ ಕ್ರೀಡಾಪಟುಗಳು ಬೆಂಬಲಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕ್ರೀಡಾಪಟುಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನು ಓದಿ: ನೂತನ ಕೃಷಿ ಕಾಯ್ದೆ ರದ್ದುಪಡಿಸಲು ವಿಶೇಷ ಸಂಸತ್ ಅಧಿವೇಶನಕ್ಕೆ ರೈತರ ಒತ್ತಾಯ
ಭಾರತೀಯ ಬಾಸ್ಕೆಟ್ಬಾಲ್ ಕ್ರೀಡಾಪಟುವಾಗಿರುವ ಅರ್ಜುನ್ ಸಿಂಗ್ ಚೀಮಾ ತಮ್ಮ ಅರ್ಜುನ ಪ್ರಶಸ್ತಿ ಹಾಗೂ ಪದ್ಮ ಪ್ರಶಸ್ತಿಗಳನ್ನು ಹಿಂದಿರುಗಿರುಸುವ ಮೂಲಕ ರೈತರ ಪರವಾಗಿ ನಿಂತಿದ್ದಾರೆ. ಹಾಕಿ ಒಲಂಪಿಕ್ನಲ್ಲಿ ಚಿನ್ನದ ಪದಕ ಗೆದ್ದ ತಂಡದ ಗುರುಮಲ್ ಸಿಂಗ್, ಸುರಿಂದ್ರ ಸಿಂಗ್ ಸೋದಿ ಕೂಡ ಈಗಾಗಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭೇಟಿಗೆ ಕಾಯುತ್ತಿದ್ದು, ಪ್ರಶಸ್ತಿ ವಾಪಸ್ ನೀಡಲು ಮುಂದಾಗಿದ್ದಾರೆ. ಬಾಸ್ಕೆಟ್ ಬಾಲ್ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಚೀಮಾ ಸಹೋದರರಾದ ಬಲ್ಕರ್ ಸಿಂಗ್, ಕುಲ್ದೀಪ್ ಸಿಂಗ್, ಗುರ್ಮಿತ್ ಸಿಂಗ್ ಸಿಂಗ್ ಪ್ರಶಸ್ತಿ ಮರಳಿಸಿದ್ದಾರೆ.
ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಹಾಕಿ ಪಟು ರಾಜ್ಬೀರ್ ಕೌರ್ ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಮಾಜಿ, ಹಾಲಿ ಕ್ರೀಡಾಪಟುಗಳು ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೇ ರೈತರ ಈ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹರಿಯಾಣದ ಮಾಜಿ ಆಟಗಾರರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ