ಪುಣೆ: ಭಾರತದ ಮಾಜಿ ರಾಷ್ಟ್ರಪತಿ (President) ಪ್ರತಿಭಾ ಪಾಟೀಲ್ (Pratibha Patil)ಪತಿ ಹಾಗೂ ಪುಣೆಯ (Pune) ಅಮರಾವತಿ ನಗರ ಮೊದಲ ಮೇಯರ್ (Mayor) ಆಗಿದ್ದ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ (Devisingh R Shekhawat) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಶಿಕ್ಷಣ ತಜ್ಞರಾಗಿ, ರಾಜಕಾರಣಿಯಾಗಿ ಗಮನಾರ್ಹ ಸಾಧನೆ ಮಾಡಿದ್ದ ದೇವಿಸಿಂಗ್ ಅವರು ತಮ್ಮ 88ನೇ ವಯಸ್ಸಿಯಲ್ಲಿ ನಿಧನರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದರು ದೇವಿಸಿಂಗ್ ಇಂದು ಭಾರತದ ಮಾಜಿ ರಾಷ್ಟ್ರಪತಿ, ಪತ್ನಿ ಪ್ರತಿಭಾ ಪಾಟೀಲ್, ಮಗ ರಾಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ನಾಯಕಿ ಮತ್ತು ಪುತ್ರಿ ಜ್ಯೋತಿ ರಾಥೋಡ್ ಅವರನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ ಶೇಖಾವತ್ ಫೆಬ್ರವರಿ 12 ರಂದು ಪುಣೆಯ ತಮ್ಮ ಮನೆಯ ಹೊರಗೆ ಕುಸಿದು ಬಿದ್ದಿದ್ದರು ಎನ್ನಲಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೇ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಶೇಖಾವತ್ ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೇಯರ್, ಶಾಸಕರಾಗಿದ್ದ ಶೇಖಾವತ್
ಶೇಖಾವತ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದು(NCP) 1985ರಲ್ಲಿ ಅಮರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 1990ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದರು. ನಂತರ ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮರಾವತಿಯ ಮೊದಲ ಮೇಯರ್ ಆಗಿ ಆಯ್ಕೆಯಾಗಿದ್ದರು.
ಶೇಖಾವತ್ ಅವರು 1969ರಲ್ಲಿ ಮುರ್ಬಾಗ್ ಪ್ರದೇಶದಲ್ಲಿ ವಿಶ್ವಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರು. ನಂತರದ 1970ರಲ್ಲಿ ಶಿವನಾಗಾಂವ್ನಲ್ಲಿ 2ನೇ ಶಾಲೆ ತೆರೆದಿದ್ದರು. 1971ರಲ್ಲಿ ಅಮರಾವತಿಯಲ್ಲಿ ವಿದ್ಯಾಭಾರತಿ ಕಾಲೇಜು ಆರಂಭಿಸಿದ್ದರು.
1965ರಲ್ಲಿ ಪ್ರತಿಭಾ ಪಾಟೀಲ್ರೊಂದಿಗೆ ವಿವಾಹ
ದೇವಿಸಿಂಗ್ ಶೇಖಾವತ್ ಅವರು ಜುಲೈ 7, 1965ರಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ರನ್ನು ವಿವಾಹವಾಗಿದ್ದರು. ಈ ದಂಪತಿಗೆ ರಾಜೇಂದ್ರ ಸಿಂಗ್ ಶೇಖಾವತ್ ಎಂಬ ಮಗ ಹಾಗೂ ಜ್ಯೋತಿ ರಾಥೋಡ್ ಎಂಬ ಮಗಳಿದ್ದಾರೆ. ರಾಜೇಂದ್ರ ಅವರು ಅಮರಾವತಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು.
ಹಲವು ರಾಜಕೀಯ ನಾಯಕರಿಂದ ಸಂತಾಪ
ಹಿರಿಯ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಖ್ಯಾತ ಕೃಷಿ ತಜ್ಞ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಹಿರಿಯ ನಾಯಕ ಅಮರಾವತಿಯ ಮೊದಲ ಮೇಯರ್ ಆಗಿ ಸೇವೆ ಸಲ್ಲಿಸಿದರು ಮತ್ತು ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದ ಶ್ರೀಮತಿ ಪ್ರತಿಭಾ ತಾಯಿಗೆ ಬೆಂಬಲವಾಗಿದ್ದರು ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಸಂತಾಪ ಸೂಚಿಸಿದ್ದಾರೆ.
ಅದೇ ರೀತಿ, ಮಹಾರಾಷ್ಟ್ರದ ರಾಜ್ಯಪಾಲ ರಮೇಶ್ ಬೈಸ್ ಕೂಡ ಶೇಖಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ " ಭಾರತದ ಮಾಜಿ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರ ಪತಿ, ಮಾಜಿ ಶಾಸಕ ದೇವಿಸಿಂಗ್ ಶೇಖಾವತ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಅವರೊಬ್ಬ ಜನಪ್ರಿಯರಾಗಿ ನಾಯಕ ಮತ್ತು ಸಮರ್ಪಿತ ಸಾಮಾಜಿಕ ಕಾರ್ಯಕರ್ತರಾಗಿದ್ದರು" ಎಂದು ಟ್ವೀಟ್ ಮಾಡಿದ್ದಾರೆ.
ಅಮರಾವತಿಯ ಮೇಯರ್ ಆಗಿ ಮತ್ತು ನಂತರ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. ಡಾ. ಶೇಖಾವತ್ ಅವರು ಪ್ರಸಿದ್ಧ ಶಿಕ್ಷಣತಜ್ಞರಾಗಿದ್ದರು ಎಂದು ಬೈಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ