ಪಶ್ಚಿಮ ಬಂಗಾಳ (ಜನವರಿ 30): ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಬಂಗಾಳದಲ್ಲಿ ಈ ಭಾರಿ ಸಿಎಂ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲೇಬೇಕು ಎಂದು ಬಿಜೆಪಿ ಹೈಕಮಾಂಡ್ ತಿರ್ಮಾನಿಸಿದೆ. ಇದೇ ಕಾರಣಕ್ಕೆ ಈವರೆಗೆ ಟಿಎಂಸಿ ಪಕ್ಷದ ಪ್ರಮುಖ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ಸಾಕಷ್ಟು ಹಿರಿಯ ನಾಯಕರು ಮತ್ತು ಸಚಿವರನ್ನೇ ತನ್ನೆಡೆಗೆ ಸೆಳೆದು ಪಕ್ಷಾಂತರ ಮಾಡಿಸುತ್ತಿದೆ. ಕಳೆದ ವಾರ ಸಹ ಓರ್ವ ಕ್ಯಾಬಿನೆಟ್ ಸಚಿವ ಸೇರಿದಂತೆ 9 ಜನ ಬಿಜೆಪಿ ಪಾಲಾಗಿದ್ದರು. ಇದೀಗ ಈ ಸರಣಿ ಮುಂದುವರೆಯುತ್ತಿದ್ದು, ಟಿಎಂಸಿ ಪಕ್ಷದಿಂದ ಮತ್ತೆ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಸೇರಿದಂತೆ 5 ಜನ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆಯುತ್ತಿರುವ ಪಕ್ಷಾಂತರದ ಪರ್ವ ಸದ್ಯಕ್ಕಂತು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಟಿಎಂಸಿ ಪಕ್ಷದ ಕ್ಯಾಬಿನೆಟ್ ಸಚಿವ ರಾಜೀಬ್ ಬ್ಯಾನರ್ಜಿ ಜೊತೆಗೆ ಬಾಲಿಯ ತೃಣಮೂಲ ಶಾಸಕ ಬೈಶಾಲಿ ದಾಲ್ಮಿಯಾ, ಉತ್ತರಪಾರ ಶಾಸಕ ಪ್ರಬೀರ್ ಘೋಶಾಲ್, ಹೌರಾ ಮೇಯರ್ ರತಿನ್ ಚಕ್ರವರ್ತಿ ಮತ್ತು ಮಾಜಿ ಶಾಸಕ ರಣಘಾಟ್ ಪಾರ್ಥ ಸಾರಥಿ ಚಟರ್ಜಿ ಇದೀಗ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಐದೂ ಜನ ನಾಯಕರು ಟಿಎಂಸಿ ಪಕ್ಷದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂಬುದು ಉಲ್ಲೇಖಾರ್ಹ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪಶ್ಚಮ ಬಂಗಾಳದ ಗೌರಾ ಎಂಬಲ್ಲಿ ರ್ಯಾಲಿ ನಡೆಸಲಿದ್ದಾರೆ. ಅಸಲಿಗೆ ಎಲ್ಲಾ ಅಂದುಕೊಂಡತೆ ನಡೆದಿದ್ದರೆ, ಈ 5 ಜನ ತೃಣಮೂಲ ಕಾಂಗ್ರೆಸ್ ನಾಯಕರು ಇದೇ ರ್ಯಾಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು. ಆದರೆ, ಈಗ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಎಲ್ಲಾ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಇವರನ್ನು ಬಿಜೆಪಿಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.
ಈ ಕುರಿತು ಮಾತನಾಡಿರುವ ಸಚಿವ ರಾಜೀಬ್ ಬ್ಯಾನರ್ಜಿ, "ಅಮಿತ್ ಶಾ ಅವರು ಈ ರ್ಯಾಲಿಯನ್ನು ಮುಗಿಸಿ ಕೂಡಲೇ ದೆಹಲಿಗೆ ತಲುಪುತ್ತಿರುವುದರಿಂದ ಹೌರಾದಲ್ಲಿ ನಾವು ಬಿಜೆಪಿಗೆ ಸೇರ್ಪಡೆಯಾಗಲು ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಸಲುವಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಮಗೆ ಚಾರ್ಟಡ್ ವಿಮಾನವನ್ನೂ ಸಹ ಏರ್ಪಾಟು ಮಾಡಲಾಗಿದೆ. ಈ ವಿಮಾನದ ಮೂಲಕ ಇಂದೇ (ಶನಿವಾರ) ಸಂಜೆ 4 ಗಂಟೆ ವೇಳೆಗೆ ಬಂಗಾಳದಿಂದ ಹೊರಡಲಿದ್ದೇವೆ" ಎಂದು ತಿಳಿಸಿದ್ದಾರೆ.
ಇದಲ್ಲದೆ, "ಹೌರಾದ ಡುಮುರ್ಜೋಲಾದಲ್ಲಿ ಭಾನುವಾರದ ಮೆಗಾ ಬಿಜೆಪಿ ರ್ಯಾಲಿ ನಿಗದಿಯಂತೆ ನಡೆಯಲಿದೆ, ಈ ರ್ಯಾಲಿಯಲ್ಲಿ ಕೇಂದ್ರ ನಾಯಕರಾದ ಸ್ಮೃತಿ ಇರಾನಿ ಸೇರಿದಂತೆ ಅನೇಕರು ವರ್ಚುವಲ್ ಆಗಿ ಭಾಗವಹಿಸಿದ್ದಾರೆ" ಎಂದು ರಾಜೀಬ್ ಬ್ಯಾನರ್ಜಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ