• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಿಲಾದ್‌–ಉನ್‌–ನಬಿ ಪ್ರಾರ್ಥನೆಗೆ ತೆರಳಿದ್ದ ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರಿಗೆ ತಡೆ

ಮಿಲಾದ್‌–ಉನ್‌–ನಬಿ ಪ್ರಾರ್ಥನೆಗೆ ತೆರಳಿದ್ದ ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರಿಗೆ ತಡೆ

ಫಾರೂಕ್ ಅಬ್ದುಲ್ಲಾ.

ಫಾರೂಕ್ ಅಬ್ದುಲ್ಲಾ.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಜಮ್ಮು ಕಾಶ್ಮೀರ ಆಡಳಿತದ ವರ್ತನೆಯನ್ನು ಖಂಡಿಸಿ, ಟ್ವೀಟ್ ಮಾಡಿದ್ದಾರೆ. ಪ್ರಾರ್ಥನೆಗೆ ತೆರಳದಂತೆ ತಡೆಯೊಡ್ಡುವುದು ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಖಂಡನೀಯವಾಗಿದೆ ಎಂದಿದ್ದಾರೆ.

  • Share this:

    ಜಮ್ಮು-ಕಾಶ್ಮೀರ (ಅಕ್ಟೋಬರ್​ 30); ಇಸ್ಲಾಂ ಧರ್ಮ ಪಾಲಕರಿಗೆ ಮಿಲಾದ್‌–ಉನ್‌–ನಬಿ ಪವಿತ್ರವಾದ ಆಚರಣೆ. ಇಸ್ಲಾಂ ಧರ್ಮ ಪ್ರವರ್ತಕ ಮಹಮ್ಮದ್​ ಪೈಗಂಬರ್​ ಅವರ ಹುಟ್ಟುಹಬ್ಬವನ್ನು ಮಿಲಾದ್​-ಉನ್-ನಬಿ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಈ ಪವಿತ್ರ ದಿನದಂದು ಎಲ್ಲಾ ಮುಸ್ಲೀಮರು ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯ ಮತ್ತು ಎಲ್ಲರಿಗೂ ಶುಭಾಶಯಗಳನ್ನು ಕೋರುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ  ಶ್ರೀನಗರದ ಹಝರತ್‌ಬಲ್ ದರ್ಗಾಕ್ಕೆ ಹೊರಟ್ಟಿದ್ದರು. ಆದರೆ, ಅವರನ್ನು ಪ್ರಾರ್ಥನೆಗೆ ತೆರಳದಂತೆ ಒತ್ತಾಯದಿಂದ ಕೇಂದ್ರ ಸರ್ಕಾರ ತಡೆದಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷ ಆರೋಪಿಸಿದೆ.


    ಘಟನೆ ಸಂಬಂಧ ವಿಶಾಷ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್​ ಪಕ್ಷ, "ಪ್ರಾರ್ಥನೆ ಸಲ್ಲಿಸುವುದು ಯಾವುದೇ ಧರ್ಮವನ್ನು ಆಚರಿಸುವ ವ್ಯಕ್ತಿಯ ಮೂಲಭೂತ ಹಕ್ಕು. ಸಂವಿಧಾನವೇ ಎಲ್ಲರಿಗೂ ಈ ಹಕ್ಕನ್ನು ನೀಡಿದೆ. ಆದರೆ, ಪ್ರಾರ್ಥನೆ ಸಲ್ಲಿಸದಂತೆ ತಡೆಯುವ ಮೂಲಕ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ" ಎಂದು ಕಿಡಿಕಾರಲಾಗಿದೆ.



    "ಜಮ್ಮು ಮತ್ತು ಕಾಶ್ಮೀರ ಆಡಳಿತವು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಪ್ರಾರ್ಥನೆ ಸಲ್ಲಿಸಲು ಹಝರತ್‌ಬಲ್‌ ದರ್ಗಾಕ್ಕೆ ತೆರಳದಂತೆ ತಡೆ ಹಿಡಿದಿದ್ದಾರೆ. ಮಿಲಾದ್‌–ಉನ್‌–ನಬಿ ಯಂತಹ ಶುಭ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದೇ, ವ್ಯಕ್ತಿಯೊಬ್ಬರ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದನ್ನು ಜೆಕೆಎನ್‌ಸಿ ಖಂಡಿಸುತ್ತದೆ" ಎಂದು ಜೆಕೆಎನ್‌ಸಿ ಪಕ್ಷ ಟ್ವಿಟರ್‌‌ನಲ್ಲಿ ಆರೋಪಿಸಿದೆ.


    ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಜಮ್ಮು ಕಾಶ್ಮೀರ ಆಡಳಿತದ ವರ್ತನೆಯನ್ನು ಖಂಡಿಸಿ, ಟ್ವೀಟ್ ಮಾಡಿದ್ದಾರೆ. "ಪ್ರಾರ್ಥನೆಗೆ ತೆರಳದಂತೆ ತಡೆಯೊಡ್ಡುವುದು ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಖಂಡನೀಯವಾಗಿದೆ" ಎಂದಿದ್ದಾರೆ.


    ಇದನ್ನೂ ಓದಿ : 10 ಲಕ್ಷ ಉದ್ಯೋಗ ನೀಡುವ ತೇಜಸ್ವಿ ಯಾದವ್​ ಭರವಸೆ ಬೋಗಸ್​; ಬಿಹಾರ ಸಿಎಂ ನಿತೀಶ್​ ಕುಮಾರ್​ ಆರೋಪ


    ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಕಲಂ 370 ರ ಅಡಿಯಲ್ಲಿ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ಕಳೆದ  2019ರ ಆಗಸ್ಟ್ 5 ರಂದು ರದ್ದುಪಡಿಸಿತ್ತು. ಆದರೆ, ಇದನ್ನು ರದ್ದು ಪಡಿಸುವ ಮುನ್ನವೇ ಕೇಂದ್ರ ಸರ್ಕಾರ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್​ ಅಬ್ದುಲ್ಲಾ, ಮೆಹಬೂಬಾ ಮುಪ್ತಿ ಸೇರಿದಂತೆ ಅನೇಕ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿಟ್ಟಿತ್ತು. ಕೊರೋನಾ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಅಂದರೆ, ಈ ವರ್ಷದ ಮಾರ್ಚ್‌‌ನಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲಾಗಿತ್ತು.


    ಸದ್ಯ ಕಾಶ್ಮೀರದಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್‌ ಎಂಬ ಗುಂಪು ಸ್ಥಾಪಿಸಲಾಗಿದ್ದು, 370 ನೇ ವಿಧಿ ಪುನಃಸ್ಥಾಪನೆ ಮತ್ತು ಕಾಶ್ಮೀರದ ನಿರ್ಣಯಕ್ಕಾಗಿ ಹೋರಾಡಲು ಕಣಿವೆ ರಾಜ್ಯದ ಎಲ್ಲಾ ಸ್ಥಳೀಯ ರಾಜಕೀಯ ಪಕ್ಷಗಳೂ ಒಟ್ಟಾಗಿವೆ.

    Published by:MAshok Kumar
    First published: