news18-kannada Updated:December 7, 2020, 6:03 PM IST
ಪ್ರಶಸ್ತಿ ಹಿಂದಿರುಗಿಸಲು ಹೊರಟಿರುವ ಕ್ರೀಡಾಪಟುಗಳು.
ನವ ದೆಹಲಿ (ಡಿಸೆಂಬರ್ 12); ಕೇಂದ್ರ ಸರ್ಕಾರದ ನೂತನ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಇಡೀ ದೇಶದ ರೈತರು ಹೋರಾಟ ನಡೆಸುತ್ತಿದ್ದಾರೆ. ದೇಶದ ವಿವಿಧೆಡೆ ಹೋರಾಟಗಳು ನಡೆಯುತ್ತಿವೆ. ಆದರೆ, ಇಡೀ ದೇಶದ ಹೋರಾಟ ಒಂದು ತೂಕವಾದರೆ ಪಂಜಾಬ್ ರೈತರ ಹೋರಾಟವೇ ಮತ್ತೊಂದು ತೂಕ ಎಂಬಂತಾಗಿದೆ. ರೈತರ ದೆಹಲಿ ಚಲೋ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜೊತೆಗಿನ ಮಾತುಕತೆಯೂ ವಿಫಲವಾಗಿದೆ. ಅಲ್ಲದೆ, ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್ ರಾಜ್ಯದ ಕ್ರೀಡಾಪಟುಗಳು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ. ಅಲ್ಲದೆ, ಇಂದು ಪ್ರಶಸ್ತಿಯನ್ನು ಹಿಂದಿರುಗಿಸಲು ರಾಷ್ಟ್ರಪತಿ ಭವನದ ಎದುರು 30ಕ್ಕೂ ಹೆಚ್ಚು ಕ್ರೀಡಾಪಟುಗಳು ರ್ಯಾಲಿ ನಡೆಸಿದ್ದು, ಪೊಲೀಸರು ಅವರನ್ನು ತಡೆದಿರುವ ಘಟನೆಯು ವರದಿಯಾಗಿದೆ.
"ಪಂಜಾಬ್ನ 30 ಕ್ರೀಡಾಪಟುಗಳು ಮತ್ತು ಇತರರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತಮ್ಮ ಪ್ರಶಸ್ತಿಯನ್ನು ಹಿಂತಿರುಗಿಸಲು ಬಯಸುತ್ತಾರೆ" ಎಂದು ಕುಸ್ತಿಪಟು ಕರ್ತಾರ್ ಸಿಂಗ್ ತಿಳಿಸಿದ್ದಾರೆ. ನಿನ್ನೆ ಕೂಡ ಒಲಂಪಿಕ್ ಬಾಕ್ಸಿಂಗ್ ಚಾಂಪಿಯನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದ್ದರು. ಅಲ್ಲದೆ, ಕರಾಳ ಕೃಷಿ ನೀತಿಯನ್ನು ಹಿಂಪಡೆಯದಿದ್ದರೆ ತನಗೆ ಸಿಕ್ಕಿರುವ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಹಿಂದಿರುಗಿಸುವುದಾಗಿ ಅವರು ಘೋಷಿಸಿದ್ದಾರೆ.
ಪಂಜಾಬ್, ಹರಿಯಾಣದ ಕ್ರೀಡಾಪಟುಗಳ ಜೊತೆಗೆ ಕವಿಗಳು, ಸಾಹಿತಿಗಳು ಕೃಷಿ ಮಸೂದೆಗಳಿಗೆ ತಮ್ಮ ಪ್ರತಿರೋಧ ತೋರಿ, ರೈತರ ಜೊತೆಗೆ ನಿಲ್ಲುತ್ತಿದ್ದಾರೆ. ಪಂಜಾಬ್ ಕವಿ, ಪದ್ಮಶ್ರೀ ಪುರಸ್ಕೃತ ಸುರ್ಜಿತ್ ಪತಾರ್ ಅನ್ನದಾತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯಿಂದ ನೋವಾಗಿದೆ ಎಂದು ತಿಳಿಸಿದ್ದಾರೆ.
"ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಾಗ ಕೇಂದ್ರದ ವರ್ತನೆಯಿಂದ ನನಗೆ ತೀವ್ರ ನೋವಾಗಿದೆ. ಹಲವು ಬಾರಿ ಪ್ರಯತ್ನಗಳನ್ನು ಮಾಡಿದರೂ, ರೈತರ ಬೇಡಿಕೆಗಳನ್ನು ಪೂರೈಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಯಾವುದೇ ಪ್ರಯತ್ನ ಮಾಡಲಾಗಿಲ್ಲ. ರೈತರಿಗೆ ಬೆಂಬಲವಾಗಿ ಪದ್ಮಶ್ರೀ ಅನ್ನು ಹಿಂದಿರುಗಿಸಲು ನಾನು ನಿರ್ಧರಿಸಿದ್ದೇನೆ" ಎಂದು ಪಂಜಾಬಿ ಬರಹಗಾರ ಮತ್ತು ಕವಿ ಸುರ್ಜಿತ್ ಪತಾರ್ ಹೇಳಿದ್ದಾರೆ.
ಇದನ್ನೂ ಓದಿ : Farmers Protest: ಚುನಾವಣಾ ಪ್ರಚಾರ ಕಣಕ್ಕೆ ವೇಗವಾಗಿ ಧುಮುಕುವ ನಟರು ರೈತರ ಹೋರಾಟಕ್ಕೆ ಭಾಗಿಯಾಗುವರೇ?; ನಟ ಚೇತನ್ ಪ್ರಶ್ನೆ
ಈ ಹಿಂದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು. ರೈತರ ಪ್ರತಿಭಟನೆಗೆ ಇಡೀ ಪಂಜಾಬ್ ಒಟ್ಟಾಗಿ ನಿಂತಿದೆ. ಪಂಜಾಬ್ ಚಿತ್ರರಂಗ, ನಟ-ನಟಿಯರು, ಕ್ರೀಡಾಪಟುಗಳು, ಜೊತೆಗೆ ಬಾಲಿವುಡ್ ಕಲಾವಿದರು ರೈತರ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಬಾಲಿವುಡ್ ಗಾಯಕ, ನಟ ದಿಲ್ಜಿತ್ ದೋಸಾಂಜ್ ಪ್ರತಿಭಟನಾಕಾರರಿಗೆ ಚಳಿಗಾಲದ ಉಡುಪುಗಳನ್ನು ಕೊಳ್ಳಲು ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ರೈತರ ಪ್ರತಿಭಟನೆ ವಿಚಾರವಾಗಿ ಅವಹೇಳನ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧ ದಿಲ್ಜಿತ್ ಟೀಕೆಗಳು ಟ್ವಿಟರ್ ಸಮರಕ್ಕೆ ಕಾರಣವಾಗಿದ್ದವು.
Published by:
MAshok Kumar
First published:
December 7, 2020, 6:01 PM IST