Eluru Mystery Disease: ನಿಗೂಢ ರೋಗದಿಂದ ಆಂಧ್ರ ಪ್ರದೇಶದ ಎಲೂರಿನಲ್ಲಿ 450ಕ್ಕೂ ಹೆಚ್ಚು ಜನ ಅಸ್ವಸ್ಥ

ಎಲೂರಿನ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಎಲೂರಿನ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಎಲೂರಿನಲ್ಲಿ ಹೆಚ್ಚಾಗಿರುವ ನಿಗೂಢ ರೋಗಕ್ಕೆ ತರಕಾರಿ, ಕೃಷಿ ಉತ್ಪನ್ನಗಳಿಗೆ, ಸೊಳ್ಳೆಗಳನ್ನು ನಿಯಂತ್ರಿಸಲು ಸಿಂಪಡಿಸುವ ಕೀಟನಾಶಕಗಳಲ್ಲಿರುವ ಅಧಿಕ ರಾಸಾಯನಿಕ ಕಾರಣ ಎಂದು ಹೇಳಲಾಗಿದೆ. ಲ್ಯಾಬೋರೇಟರಿ ವರದಿ ಬಂದ ನಂತರವೇ ಈ ಕುರಿತು ಖಚಿತತೆ ಸಿಗಲಿದೆ.

  • Share this:

ಹೈದರಾಬಾದ್ (ಡಿ. 8): ಇಡೀ ಜಗತ್ತೇ ಕೊರೋನಾದಿಂದ ನಲುಗುತ್ತಿದೆ. ಭಾರತದಲ್ಲೂ ಕೊರೋನಾ ಅಟ್ಟಹಾಸ ಕಡಿಮೆಯಾಗಿಲ್ಲ. ದಿರ ನಡುವೆ ಶನಿವಾರದಿಂದ ಆಂಧ್ರ ಪ್ರದೇಶದ ಎಲೂರಿನಲ್ಲಿ ಮತ್ತೊಂದು ವಿಚಿತ್ರ ಮತ್ತು ನಿಗೂಢ ರೋಗ ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶ ಮಾತ್ರವಲ್ಲದೆ ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿರುವ ಈ ವಿಚಿತ್ರವಾದ ರೋಗದಿಂದ 450ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ರೋಗಕ್ಕೆ ಕೀಟನಾಶಕಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದ ರಾಸಾಯನಿಕವೇ ಕಾರಣ ಎನ್ನಲಾಗುತ್ತಿದೆ.


ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರಿನಲ್ಲಿ ಕಾಣಿಸಿಕೊಂಡಿರುವ ಈ ನಿಗೂಢ ಕಾಯಿಲೆ ಸಾಂಕ್ರಾಮಿಕವೆಂಬ ಅನುಮಾನವಿದೆ. ಶನಿವಾರ ರಾತ್ರಿಯಿಂದ 450ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಸೇರಿದ್ದಾರೆ. ಈಗಾಗಲೇ ಈ ಕಾಯಿಲೆಗೆ ಒಬ್ಬರು ಬಲಿಯಾಗಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವವರನ್ನು ಎಲೂರಿನಿಂದ ವಿಜಯವಾಡ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.


ಇದ್ದಕ್ಕಿದ್ದಂತೆ ಅಸ್ವಸ್ಥರಾದ ಎಲೂರು ಪಟ್ಟಣದ ಜನರು ನಿಗೂಢ ರೋಗದಿಂದ ಬಳಲುತ್ತಿದ್ದಾರೆ. ವಾಂತಿ, ಪ್ರಜ್ಞಾಹೀನತೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಈ ಮೂರ್ಛೆ ರೋಗದ ಲಕ್ಷಣಗಳು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಒಂದೇ ಬಾರಿಗೆ ಒಂದೇ ರೀತಿಯ ರೋಗ ಲಕ್ಷಣಗಳಿರುವ 450ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.


ಇದನ್ನೂ ಓದಿ: Nishant Singh: ಮಿಗ್-29ಕೆ ಯುದ್ಧ ವಿಮಾನ ಪತನವಾದ 11 ದಿನಗಳ ಬಳಿಕ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಪತ್ತೆ


ಎಲೂರಿನಲ್ಲಿ ಹೆಚ್ಚಾಗಿರುವ ನಿಗೂಢ ರೋಗಕ್ಕೆ ತರಕಾರಿ, ಕೃಷಿ ಉತ್ಪನ್ನಗಳಿಗೆ ಸಿಂಪಡಿಸುವ ಕೀಟನಾಶಕಗಳಲ್ಲಿರುವ ಅಧಿಕ ರಾಸಾಯನಿಕವೇ ಕಾರಣ ಎಂದು ಹೇಳಲಾಗಿದೆ. ರೋಗಿಗಳ ದೇಹದಲ್ಲಿರುವ ರಾಸಾಯನಿಕದ ಅಂಶದ ವರದಿಯಿಂದ ಈ ರೀತಿ ಅಂದಾಜಿಸಲಾಗಿದೆ. ಈ ಕೀಟನಾಶಕಗಳನ್ನು ಸೊಳ್ಳೆ ನಿಯಂತ್ರಣ ಮತ್ತು ಕೃಷಿ ಉತ್ಪನ್ನಗಳ ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಕೀಟನಾಶಕಗಳಲ್ಲಿ ಡಿಡಿಟಿ ಕೂಡ ಸೇರಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ವಿಪರೀತವಾಗಿ ಡಿಡಿಟಿ ಸಿಂಪಡಣೆ ಮಾಡಿರುವುದರಿಂದ ಈ ರೀತಿ ಸಮಸ್ಯೆ ಉಂಟಾದ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ, ಲ್ಯಾಬೋರೇಟರಿ ವರದಿ ಬಂದ ನಂತರವೇ ಈ ಕುರಿತು ಖಚಿತತೆ ಸಿಗಲಿದೆ.



ಬಾಯಿಯಲ್ಲಿ ನೊರೆ ಬಂದು, ಮೂರ್ಛೆ ಹೋಗುತ್ತಿರುವ ರೋಗಿಗಳಿಂದ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಒಂದೇ ರೀತಿಯ ಸಮಸ್ಯೆಯಿಂದ 45ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗಿರುವುದನ್ನು ಆಂಧ್ರ ಪ್ರದೇಶ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಎಲೂರು ಆಸ್ಪತ್ರೆಗಳಿಗೆ ತೆರಳಿ ರೋಗಿಗಳನ್ನು ಭೇಟಿಯಾಗಿದ್ದಾರೆ.

ಇದೇ ರೋಗ ಲಕ್ಷಣಗಳಿಂದ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ರೋಗಿಯೊಬ್ಬರು ಭಾನುವಾರ ಸಂಜೆ ಸಾವನ್ನಪ್ಪಿದ್ದಾರೆ. ಇದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಈ ನಿಗೂಢ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಹೆಚ್ಚಿನವರು ವೃದ್ಧರು ಮತ್ತು ಮಕ್ಕಳು ಎಂಬುದು ಇನ್ನೂ ಆತಂಕಕಾರಿ ಸಂಗತಿ.

Published by:Sushma Chakre
First published: