ನವದೆಹಲಿ: ಚುನಾವಣೆಗಳ (Election) ಪರಿಶುದ್ಧತೆಯನ್ನು ಕಾಪಾಡುವ ಹಾಗೂ ರಾಜಕೀಯ ಹಸ್ತಕ್ಷೇಪದಿಂದ (Political Interference) ಚುನಾವಣಾ ಸಂಸ್ಥೆಯನ್ನು ರಕ್ಷಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪನ್ನು ನೀಡಿದೆ. ಮುಖ್ಯ ಚುನಾವಣಾ ಆಯುಕ್ತರು (Chief Election Commissioner) ಮತ್ತು ಚುನಾವಣಾ ಆಯುಕ್ತರ ನೇಮಕಾತಿಯ ನಿರ್ಧಾರಗಳನ್ನು ಪ್ರಧಾನಮಂತ್ರಿ, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕರು ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಸಮಿತಿಯು ತೆಗೆದುಕೊಳ್ಳಬೇಕು ಎಂದು ಗುರುವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ಮಹತ್ವದ ತೀರ್ಪನ್ನು ನೀಡಿದೆ.
ಏಕಪಕ್ಷೀಯ ನಿರ್ಧಾರದ ಆರೋಪ
ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕದಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಮುಕ್ತ ಚುನಾವಣೆಗೆ ಅಡ್ಡಿಯಾಗಲಿದೆ. ಹೀಗಾಗಿ ಆಯುಕ್ತರ ನೇಮಕಕ್ಕೆ ನ್ಯಾಯಾಧೀಶರ ನೇಮಕ ಮಾಡುವುದಕ್ಕೆ ಇರುವ ಕೊಲಿಜಿಯಂ ಮಾದರಿ ಸಮಿತಿ ರಚಿಸಬೇಕೆಂದು ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಿಬಿಐ ನಿರ್ದೇಶಕ ಅಥವಾ ಲೋಕಪಾಲರ ನೇಮಕಾತಿಗಿಂತ ಆಯುಕ್ತರ ನೇಮಕ ಭಿನ್ನವಾಗಿದೆ. ಇದು ಏಕಪಕ್ಷೀಯ ನಿರ್ಧಾರವಾಗಿರಬಾರದು ಎಂದು ಅರ್ಜಿದಾರರ ತಿಳಿಸಿದ್ದರು.
ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ
ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ದೇಶಾದ್ಯಂತ ಚುನಾವಣಾ ಉಸ್ತುವಾರಿ ವಹಿಸುವ ಇಬ್ಬರು ಚುನಾವಣಾ ಆಯುಕ್ತರನ್ನು ಸಮಿತಿ ನೀಡಿದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷ ನಾಯಕರು ನೆರವಾಗಬೇಕು. ಒಂದು ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲದಿದ್ದರೆ, ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕರು ಸಮಿತಿಯಲ್ಲಿರಬೇಕು. ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕಾತಿ ಸಂಬಂಧ ಕಾನೂನು ಜಾರಿಯಾಗುವವರೆಗೂ ಈ ಸಮಿತಿ ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯಬೇಕು
" ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ನಿಸ್ಸಂಶಯವಾಗಿ ನ್ಯಾಯಸಮ್ಮತವಾಗಿ ನಡೆಯಬೇಕು. ಭಾರತೀಯ ಚುನಾವಣಾ ಆಯೋಗದ ನಿರ್ಧಾರಗಳು ಅದರ ಪರಿಶುದ್ಧತೆಯನ್ನು ಕಾಪಾಡುವುದಕ್ಕೆ ಜಾಗೃತಿವಹಿಸಬೇಕು. ಇಲ್ಲವಾದರೆ ವಿನಾಶಕಾರಿ ಪರಿಣಾಮಗಳಿಗೆ ಅದು ಎಡೆಮಾಡಿಕೊಡುತ್ತದೆ " ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪಂಚಪೀಠ ಹೇಳಿದೆ.
ಚುನಾವಣಾ ಆಯೋಗಕ್ಕೆ ಹಲವು ಅಧಿಕಾರ
ಈ ತೀರ್ಪಿನ ಪ್ರಕಾರ, ಚುನಾವಣಾ ಆಯೋಗವು ಸ್ವತಂತ್ರ ಕಾರ್ಯಾಲಯ, ನಿಯಮ ರೂಪಿಸುವ ಅಧಿಕಾರ, ಸ್ವತಂತ್ರ ಆಯವ್ಯಯ ಮತ್ತು ವಾಗ್ದಂಡನೆಯಿಂದ ಸಮಾನ ರಕ್ಷಣೆಯನ್ನು ಕೂಡ ಪಡೆದುಕೊಳ್ಳಲಿದೆ. ಭಾರತೀಯ ಏಕೀಕೃತ ನಿಧಿಯಿಂದ ನೇರವಾಗಿ ಅನುದಾನಗಳನ್ನು ಪಡೆದುಕೊಳ್ಳಬಹುದು. ಪ್ರಸ್ತುತ ಚುನಾವಣೆಯ ಫಂಡ್ಗೆ ಅನುಮೋದನೆಗಳಿಗಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಕಾನೂನು ಸಚಿವಾಲಯದ ಬಳಿಗೆ ಹೋಗುವ ಬದಲು ನೇರವಾಗಿ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾದಿಂದ ಹಣವನ್ನು ಪಡೆಯಬಹುದಾಗಿದೆ.
ಪ್ರಸ್ತುತ ಪ್ರಧಾನಿ ನೀಡುವ ಶಿಫಾರಸಿಗೆ ಅನುಗುಣವಾಗಿ ರಾಷ್ಟ್ರಪತಿಯವರು ಚುನಾವಣಾ ಆಯುಕ್ತರನ್ನು ನೇಮಿಸುವ ವ್ಯವಸ್ಥೆ ಇದೆ. ಆದರೆ ಭಾರತದ ಸಂವಿಧಾನದ 324 (2)ನೇ ವಿಧಿಯನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರ ನೇಮಕಾತಿ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ದೇಶದಲ್ಲಿ ನ್ಯಾಯೋಚಿತ ಚುನಾವಣೆಗಳನ್ನು ನಡೆಯುವಂತೆ ನೋಡಿಕೊಳ್ಳಲು ಕೊಲಿಜಿಯಂ ವ್ಯವಸ್ಥೆ ಮಾದರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ಪದ್ಧತಿ ಜಾರಿಗೆ ಬರಬೇಕು. ಹಾಲಿ ಇರುವ ಪ್ರಕ್ರಿಯೆಯು ಕಾರ್ಯಾಂಗದ ಪ್ರಭಾವಕ್ಕೆ ಒಳಗಾಗಿದೆ ಎಂದು ಅರ್ಜಿಗಳಲ್ಲಿ ವಿವರಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ