Ban Pre-Poll Surveys| ಮಾಧ್ಯಮಗಳ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಿ; ಆಯೋಗಕ್ಕೆ ಮಾಯಾವತಿ ಒತ್ತಾಯ
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮತ್ತು ಯುಪಿ ಸರ್ಕಾರಗಳು ರಾಜ್ಯದ ಆಡಳಿತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿವೆ. ಈ ತಂತ್ರಗಳು ಕೆಲಸ ಮಾಡದಿದ್ದಾಗ, ಬಿಜೆಪಿ ಅಂತಿಮವಾಗಿ ಚುನಾವಣೆಗೆ ಹಿಂದೂ-ಮುಸ್ಲಿಂ ಬಣ್ಣವನ್ನು ನೀಡುತ್ತದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಲಖ್ನೋ (ಅಕ್ಟೋಬರ್ 09); ಯಾವುದೇ ಚುನಾವಣೆ ನಡೆಯುವ 6 ತಿಂಗಳ ಮೊದಲೇ ಮಾಧ್ಯಮಗಳು ಅಥವಾ ಇತರೆ ಯಾವುದೇ ಸಂಘ ಸಂಸ್ಥೆಗಳು ನಡೆಸುವ ಚುನಾವಣಾ ಪೂರ್ವ ಸಮೀಕ್ಷೆಗಳನ್ನು (Pre-Poll Surveys) ನಿಷೇಧಿಸಬೇಕು. ಈ ಸಮೀಕ್ಷೆಗಳು ಮತದಾನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಹೀಗಾಗಿ ಚುನಾವಣಾ ಆಯೋಗ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ (Mayawati) ಹೇಳಿದ್ದಾರೆ. ಅಲ್ಲದೆ, ಈ ಕುರಿತು ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಕಾನ್ಶಿರಾಮ್ ಸ್ಮಾರಕ ಸ್ಥಳದಲ್ಲಿ ನಡೆದ ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ 15 ನೇ ಪುಣ್ಯತಿಥಿಯಲ್ಲಿ ಮಾತನಾಡಿದ ಮಾಯಾವತಿ, "ದಿವಂಗತ ದಲಿತ ನಾಯಕರಿಕೆ ಭಾರತ ರತ್ನ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
ಸಮಾರಂಭದಲ್ಲಿ ಚುನಾವಣಾ ಸಮೀಕ್ಷೆಗಳ ಬಗ್ಗೆಯೂ ಗಮನ ಸೆಳೆದಿರುವ ಮಾಯಾವತಿ, "ಶೀಘ್ರದಲ್ಲೇ, ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಮಾಧ್ಯಮ ಸಂಸ್ಥೆಗಳು ಮತ್ತು ಇತರ ಏಜೆನ್ಸಿಗಳು ಚುನಾವಣಾ ಪೂರ್ವ ನಡೆಸುವ ಚುನಾವಣಾ ಸಮೀಕ್ಷೆಗಳನ್ನು ಆರು ತಿಂಗಳು ಮುಂಚಿತವಾಗಿ ನಿಷೇಧಿಸಲು ಒತ್ತಾಯಿಸುತ್ತೇವೆ. ಇದರಿಂದಾಗಿ ನಿರ್ದಿಷ್ಟ ರಾಜ್ಯದಲ್ಲಿ ನಡೆಯುವ ಚುನಾವಣೆಗಳ ಮೇಲೆ ಪ್ರಭಾವ ಬೀರುವುದಿಲ್ಲ" ಎಂದು ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದಾಗ, ಮಮತಾ ಬ್ಯಾನರ್ಜಿ ಹಿಂದುಳಿಯಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಫಲಿತಾಂಶ ಬಂದಾಗ ಸಮೀಕ್ಷೆಗಳ ಹಳಿಕೆ ವಿರುದ್ಧವಾಗಿತ್ತು. ಅಧಿಕಾರದ ಕನಸು ಕಾಣುತ್ತಿದ್ದವರ ಕನಸು ಭಗ್ನಗೊಂಡಿತ್ತು. ಮಮತಾ ಬ್ಯಾನರ್ಜಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದರು. ಹೀಗಾಗಿ ನೀವು ಈ ಸಮೀಕ್ಷೆಗಳಿಂದ ನೀವು ತಪ್ಪುದಾರಿಗೆ ಹೋಗಬಾರದು" ಎಂದು ಮಾಯಾವತಿ ಸಾರ್ವಜನಿಕರಿಗೆ ಹೇಳಿದ್ದಾರೆ.
ಮುಂಬರುವ 2022 ರ ವಿಧಾನಸಭಾ ಚುನಾವಣೆಯಲ್ಲಿ ಯುಪಿಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಸಿದ್ಧವಾಗಿದೆ ಎಂದು ಸಮೀಕ್ಷೆಯೊಂದರಲ್ಲಿ ಹೇಳಲಾಗಿದ್ದು ಇದರ ಹಿನ್ನೆಲೆಯಲ್ಲಿ ಮಾಯಾವತಿ ಇವುಗಳನ್ನು ನಿಷೇಧಿಸಬೇಕು ಎಂದಿದ್ದಾರೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮತ್ತು ಯುಪಿ ಸರ್ಕಾರಗಳು ರಾಜ್ಯದ ಆಡಳಿತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿವೆ. ಈ ತಂತ್ರಗಳು ಕೆಲಸ ಮಾಡದಿದ್ದಾಗ, ಬಿಜೆಪಿ ಅಂತಿಮವಾಗಿ ಚುನಾವಣೆಗೆ ಹಿಂದೂ-ಮುಸ್ಲಿಂ ಬಣ್ಣವನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ.
"ಸಣ್ಣ ಪಕ್ಷಗಳು ಮತ್ತು ಸಂಘಟನೆಗಳಿವೆ. ಅವುಗಳು ಏಕಾಂಗಿಯಾಗಿ ಅಥವಾ ಜಂಟಿಯಾಗಿ ಚುನಾವಣೆಗೆ ಸ್ಪರ್ಧಿಸಬಹುದು. ಅವರ ಕೆಲಸವು ಚುನಾವಣೆಯಲ್ಲಿ ಗೆಲ್ಲುವುದಲ್ಲ, ಆದರೆ ಆಡಳಿತದ ಪಕ್ಷಕ್ಕೆ ತೆರೆಮರೆಯಿಂದ ಲಾಭವನ್ನು ನೀಡುವುದು ಅವರ ಸ್ವಂತ ಹಿತಾಸಕ್ತಿ. ಆದ್ದರಿಂದ, ಸಮುದಾಯಗಳ ಜನರು ಈ ಪಕ್ಷಗಳು ಮತ್ತು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಬಾರದು" ಎಂದು ಮಾಯಾವತಿ ಕಿವಿಮಾತು ಹೇಳಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ