ರಾಜ್ಯಗಳಿಗೆ ಈ ವರ್ಷ ಹೆಚ್ಚಿನ ಜಿಎಸ್ಟಿ ಪರಿಹಾರ ಸಾಧ್ಯವಿಲ್ಲ: ಕೇಂದ್ರ ಸ್ಪಷ್ಟನೆ
ಕೊರೋನಾ ವೈರಸ್ ಪಿಡುಗು ಹಿನ್ನೆಲೆಯಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಬಹಳಷ್ಟು ಕೊರತೆ ಕಂಡಿದ್ದು, ರಾಜ್ಯಗಳಿಗೆ ಹೆಚ್ಚಿನ ಪರಿಹಾರ ಹಣ ಒದಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನವದೆಹಲಿ(ಆ. 27): ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಎಸ್ಟಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬಿದ್ದಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್ಟಿ ಪರಿಹಾರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ತಿಳಿಸಿದ್ದಾರೆ. ಇಂದು ಆನ್ಲೈನ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 41ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.
2019-20ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ 1.65 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಪರಿಹಾರ ಹಣ ನೀಡಲಾಗಿದೆ. 97 ಸಾವಿರ ಕೋಟಿ ರೂ ಪರಿಹಾರ ಹಣದ ಕೊರತೆ ಬೀಳುವ ಅಂದಾಜು ಇದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಕಾರ ಈ ವರ್ಷ ಜಿಎಸ್ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ಕೊರತೆ ಬೀಳುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ವ್ಯತ್ಯವಾದರೆ ಸರ್ಕಾರವೇ ಭರ್ತಿ ಮಾಡಬೇಕೆಂದು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಈ ಸಂದರ್ಭದಲ್ಲಿ ಒತ್ತಾಯಿಸಿದವು. ಆದರೆ, ಬಿಕ್ಕಟ್ಟಿನಿಂದ ಜಿಎಸ್ಟಿ ಸಂಗ್ರಹಕ್ಕೆ ಧಕ್ಕೆಯಾಗಿದ್ದರೆ ರಾಜ್ಯಗಳಿಗೆ ಪೂರ್ಣ ಜಿಎಸ್ಟಿ ಪಾಲು ಕೊಡಬೇಕೆಂಬ ನಿಯಮ ಇಲ್ಲವೆಂದು ಕೇಂದ್ರ ಸರ್ಕಾರ ಕಾನೂನು ಉಲ್ಲೇಖಿಸಿ ಸಭೆಯಲ್ಲಿ ಸ್ಪಷ್ಟಪಡಿಸಿತು.
ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಜಿಎಸ್ಟಿ ಸಭೆಯಲ್ಲಿ ಆದಾಯ ಕೊರತೆ ನೀಗಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು. ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದ್ದರೆ ರಾಜ್ಯ ಸರ್ಕಾರಗಳು ಹಣವನ್ನು ಸಾಲವಾಗಿ ಪಡೆಯಬಹುದು, ಸೆಸ್ ಮೊದಲಾದ ತೆರಿಗೆ ದರ ಏರಿಸಿ ಆದಾಯ ಮಾಡಬಹುದು ಎಂಬಿತ್ಯಾದಿ ಸಲಹೆಗಳು ಕೆಲ ರಾಜ್ಯಗಳಿಂದ ವ್ಯಕ್ತವಾದವು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ