ಚೆನ್ನೈ (ಮಾರ್ಚ್ 31); ತಮಿಳುನಾಡು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಜನನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ಡಿಎಂಕೆ ಮುಖಂಡ ಎ. ರಾಜಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆಯ ‘ಸ್ಟಾರ್ ಪ್ರಚಾರಕ’ರಾಗಿರುವ ಎ. ರಾಜಾ ಅವರನ್ನು ಬುಧವಾರ ಸಂಜೆ 6 ಗಂಟೆಯೊಳಗೆ ನೋಟಿಸ್ಗೆ ಪ್ರತಿಕ್ರಿಯಿಸುವಂತೆ ಚುನಾವಣಾ ಆಯೋಗ ಆದೇಶಿಸಲಾಗಿದೆ. "ಮಾರ್ಚ್ 31 ರಂದು 6 ಗಂಟೆ ಅಥವಾ ಅದಕ್ಕೂ ಮುನ್ನ ನಿಮ್ಮ ನಿಲುವನ್ನು ಆಯೋಗಕ್ಕೆ ತಿಳಿಸುವಂತೆ ಅವಕಾಶ ನೀಡಿದೆ. ಒಂದು ವೇಳೆ ಅದು ವಿಫಲವಾದರೆ ಆಯೋಗವು ನಿಮಗೆ ಯಾವುದೇ ಮುನ್ಸೂಚನೆ ನೀಡದೆ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ ಡಿಎಂಕೆ ಮುಖಂಡ ಎ.ರಾಜಾ, ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಉದಯಾನಿಧಿ ಸ್ಟಾಲಿನ್ ಪರ ಪ್ರಚಾರ ಮಾಡುವ ವೇಳೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು AIADMK ಮತ್ತು ಬಿಜೆಪಿ ಪ್ರತಿಭಟನೆ ನಡೆಸಿದ್ದರು. ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸದಂತೆ ತಡೆಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಆಯೋಗವು ಈಗ ನೋಟಿಸ್ ನೀಡಿದೆ.
ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ, ’ಪಳನಿಸ್ವಾಮಿ ಜನನ ಅಕ್ರಮ ಸಂಬಂಧದಿಂದ ಮತ್ತು ಅಕಾಲಿಕ ಜನನ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕೂ ಮೊದಲು ಮುಖ್ಯಮಂತ್ರಿಯನ್ನು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರ ಚಪ್ಪಲಿಗಿಂತ ಒಂದು ರೂಪಾಯಿ ಕಡಿಮೆ ಎಂದು ಕರೆದಿದ್ದರು.
ಹಾಗಾಗಿ ಡಿಎಂಕೆ ನಾಯಕ ಎ.ರಾಜಾ ವಿರುದ್ಧ ಐಪಿಸಿಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 294 ಬಿ (ಸಾರ್ವಜನಿಕ ಸ್ಥಳದಲ್ಲಿ ಕೆಟ್ಟ ಭಾಷೆ) ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 127 (ಚುನಾವಣಾ ಸಭೆಗಳಲ್ಲಿ ಅಡಚಣೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದರೆ ಘಟನೆ ಕುರಿತು ಕ್ಷಮೆಯಾಚಿಸರುವ ಎ ರಾಜಾ, “ನಾನು ನನ್ನ ಹೇಳಿಕೆಯನ್ನು ಪುನರುಚ್ಚರಿಸುತ್ತೇನೆ. ನನ್ನ ಭಾಷಣವು ಇಬ್ಬರು ನಾಯಕರ ವಿರುದ್ಧದ ವೈಯಕ್ತಿಕ ಟೀಕೆ ಅಲ್ಲ. ನನ್ನ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಇಬ್ಬರು ವ್ಯಕ್ತಿಗಳ ಹೋಲಿಕೆಯಾಗಿದೆ” ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ