ಮುಂಬೈ(ಮಾ. 09): ಯೆಸ್ ಬ್ಯಾಂಕ್ನ ಒಂದೊಂದೇ ಕರ್ಮಕಾಂಡಗಳು ಬಿಚ್ಚಿಕೊಳ್ಳುತ್ತಿವೆ. ಯೆಸ್ ಬ್ಯಾಂಕ್ನ ಕೆಲ ಅವ್ಯವಹಾರಗಳೇ ಅದರ ಇಂದಿನ ದುಸ್ಥಿತಿಗೆ ಕಾರಣ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಲಂಚ ಪ್ರಕರಣ ತಲೆ ಎತ್ತಿದೆ. ಯೆಸ್ ಬ್ಯಾಂಕ್ನ ಸಹ-ಸಂಸ್ಥಾಪಕ ರಾಣಾ ಕಪೂರ್ ಅವರ ಕುಟುಂಬದವರು ಡಿಎಚ್ಎಫ್ಎಲ್ ಸಂಸ್ಥೆಯಿಂದ 600 ಕೋಟಿ ರೂ ಲಂಚ ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ. ತಾನು ಸಲ್ಲಿಸಿರುವ ಎಫ್ಐಆರ್ನಲ್ಲಿ ಸಿಬಿಐ ಈ ಆರೋಪ ಮಾಡಿದೆ. ಈ ಸಂಬಂಧ ಮುಂಬೈನಲ್ಲಿ ರಾಣಾ ಕಪೂರ್ ಮತ್ತವರ ಕುಟುಂಬ ಸದಸ್ಯರಿಗೆ ಸೇರಿದ 7 ಸ್ಥಳಗಳಲ್ಲಿ ಸಿಬಿಐ ಇಂದು ರೇಡ್ ಮಾಡಿದೆ.
ಸಿಬಿಐ ಆರೋಪ ಏನು?
ಡಿಎಚ್ಎಫ್ಎಲ್ ಪ್ರೊಮೋಟರ್ ಕಪಿಲ್ ವಾಧವಾನ್ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮಧ್ಯೆ ಹಣಕಾಸು ಅವ್ಯವಹಾರಕ್ಕೆ ಕ್ರಿಮಿನಲ್ ಸಂಚು ನಡೆದಿತ್ತು. ಡಿಎಚ್ಎಫ್ಎಲ್ ಸಂಸ್ಥೆಗೆ ಯೆಸ್ ಬ್ಯಾಂಕ್ ಮೂಲಕ ಅಕ್ರಮವಾಗಿ ಹಣಕಾಸು ಸಹಾಯ ಒದಗಿಸಲಾಯಿತು ಮತ್ತು ಅದಕ್ಕೆ ಪ್ರತಿಯಾಗಿ ಕಪೂರ್ ಕುಟುಂಬದವರಿಗೆ ವಿವಿಧ ರೂಪಗಳಲ್ಲಿ ಅನುಕೂಲ ಮಾಡಿಕೊಡಲಾಗಿದೆ ಎಂಬುದು ಸಿಬಿಐನ ಆರೋಪವಾಗಿದೆ.
ಇದನ್ನೂ ಓದಿ: ಲಕ್ನೋದಲ್ಲಿ ಹಾಕಲಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಬ್ಯಾನರ್ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ
ಯೆಸ್ ಬ್ಯಾಂಕ್ ಮತ್ತು ಡಿಎಚ್ಎಫ್ಎಲ್ ಮಧ್ಯೆ ಅಕ್ರಮ ವ್ಯವಹಾರ ರೂಪುಗೊಂಡಿದ್ದು 2018, ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಎನ್ನಲಾಗಿದೆ. ಹಗರಣಗಳಿಂದ ಕಂಗೆಟ್ಟಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿ (ಡಿಎಚ್ಎಫ್ಎಲ್) ಸಂಸ್ಥೆಯಲ್ಲಿ ಯೆಸ್ ಬ್ಯಾಂಕ್ 3,700 ರೂ ಹಣ ಹೂಡಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ ಯೆಸ್ ಬ್ಯಾಂಕ್ನ ರಾಣಾ ಕಪೂರ್ ಕುಟುಂಬ ಸದಸ್ಯರ ಕಂಪನಿಗಳಿಗೆ ವಿವಿಧ ರೀತಿಯಲ್ಲಿ ಒಟ್ಟು 600 ಕೋಟಿ ರೂ ಮೊತ್ತದಷ್ಟು ಲಂಚಗಳನ್ನು ನೀಡಿತು. DoIT ಅರ್ಬನ್ ವೆಂಚರ್ಸ್ ಸಂಸ್ಥೆಯ ಮೇಲೆ ಸಾಲದ ರೂಪದಲ್ಲಿ ಲಂಚ ನೀಡಲಾಯಿತು ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪ ಮಾಡಿದೆ.
ಸಾವಿರಾರು ಕೋಟಿ ಮೊತ್ತದಷ್ಟು ಕೆಟ್ಟ ಸಾಲಗಳಿಂದ ಕಂಗೆಟ್ಟಿದ್ದ ಯೆಸ್ ಬ್ಯಾಂಕನ್ನು ಆರ್ಬಿಐ ಕಳೆದ ಗುರುವಾರ ಸೂಪರ್ಸೀಡ್ ಮಾಡಿತ್ತು. ಯೆಸ್ ಬ್ಯಾಂಕ್ನ ವಿವಿಧ ಖಾತೆಗಳ ಮೇಲೆ ನಿರ್ಬಂಧಗಳನ್ನ ಹೇರಿತು. ಒಬ್ಬ ಖಾತೆದಾರರು ಒಂದು ತಿಂಗಳಲ್ಲಿ ವಿತ್ಡ್ರಾ ಮಾಡಿಕೊಳ್ಳಬಹುದಾದ ಹಣದ ಮೊತ್ತವನ್ನು 50 ಸಾವಿರಕ್ಕೆ ಸೀಮಿತಗೊಳಿಸಿದೆ. ಯೆಸ್ ಬ್ಯಾಂಕ್ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಎಸ್ಬಿಐನ ಮಾಜಿ ಸಿಎಫ್ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸೂಚಿಸಲಾಗಿದೆ. ಆರ್ಬಿಐನಿಂದ ಮುಂದಿನ ಸೂಚನೆ ಸಿಗುವವರೆಗೂ ಯೆಸ್ ಬ್ಯಾಂಕ್ ಯಾವುದೇ ಹೊಸ ಸಾಲ ಅಥವಾ ಮುಂಡಗವನ್ನಾಗಲೀ ನೀಡುವಂತಿಲ್ಲ. ಯಾವುದೇ ಹೂಡಿಕೆ ಮಾಡುವಂತಿಲ್ಲ. ಯಾವುದೇ ಮರುಪಾವತಿ ಮಾಡುವಂತಿಲ್ಲ ಇತ್ಯಾದಿ ನಿರ್ಬಂಧಗಳನ್ನ ಹಾಕಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಇನ್ನಷ್ಟು ಅಗ್ಗ; ಜನವರಿ 11ರಿಂದೀಚೆ ಐದೂವರೆ ರೂ ಬೆಲೆ ಇಳಿಕೆ
ಕಳೆದ ವಾರ ಆರ್ಬಿಐನಿಂದ ಸೂಪರ್ಸೀಡ್ ಆದ ಬಳಿಕ ಯೆಸ್ ಬ್ಯಾಂಕ್ನ ಷೇರುಗಳು ಪ್ರಪಾತಕ್ಕೆ ಕುಸಿದಿದ್ದವು. ಆದರೆ, ಎಸ್ಬಿಐ ಸಂಸ್ಥೆ ಯೆಸ್ ಬ್ಯಾಂಕ್ನಲ್ಲಿ ಶೇ. 49 ರಷ್ಟು ಪಾಲು ಖರೀದಿಸಲು ನಿರ್ಧರಿಸಿದ ಬಳಿ ಷೇರು ಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ಚೇತರಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ