ಭೋಪಾಲ್ : ಉತ್ತರ ಭಾರತದಲ್ಲಿ ಸೂರ್ಯನ ಬಿಸಿಲು ನೆತ್ತಿ ಸುಡುತ್ತಿದ್ದು, ಮಧ್ಯಪ್ರದೇಶ (Madhya Pradesh) ಸೇರಿ ಹಲವೆಡೆ ಜೀವ ಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ಹಳ್ಳಿಗಾಡಿನ ಮಹಿಳೆಯರು ಕುಡಿಯುವ ನೀರಿಗಾಗಿ (Water) ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈಗ ಬೇಸಿಗೆ ಕಾಲ ಉತ್ತುಂಗದಲ್ಲಿದ್ದು, ಮಧ್ಯಪ್ರದೇಶದ ಗುಸೀಯಾ (Ghusiya) ಎಂಬ ಗ್ರಾಮದಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಜೀವ ಜಲಕ್ಕಾಗಿ ಯಾವುದೇ ಸುರಕ್ಷತಾ ಸಾಧನ ಬಳಸದೇ ಬಾವಿಗೆ ಇಳಿಯುತ್ತಿದ್ದಾರೆ. ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆಯು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ (Viral Video) ಅಲ್ಲಿನ ನಿವಾಸಿಗಳು ಬಾವಿಯಿಂದ ನೀರು ತರಲು ಬಹಳ ದೂರ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಆ ಬಾವಿಯಲ್ಲೂ ಕೂಡ ತಳಮಟ್ಟದಲ್ಲಿ ನೀರು ಇದ್ದು, ನೀರಿಗಾಗಿ ಬಾವಿಗೆ ಇಳಿಯಬೇಕಾದ ಅನಿವಾರ್ಯತೆ ಇದೆ.
ನೀರಿಗಾಗಿ ಬಾವಿಗೆ ಇಳಿಯುವ ಮಹಿಳೆಯರು
ಅದೇ ವಿಡಿಯೋದಲ್ಲಿ ಮಹಿಳೆಯರು ಯಾವುದೇ ಸುರಕ್ಷತಾ ಸಾಧನ ಅಥವಾ ಹಗ್ಗಗಳಿಲ್ಲದೇ ಬಾವಿಗೆ ಇಳಿದು ನೀರು ತರುತ್ತಿರುವುದು ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತದೆ. ಬಾವಿಯ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದು, ಅದನ್ನು ಬಟ್ಟಲಿನಿಂದ ಕೊಡಗಳಿಗೆ ತುಂಬಿಸಿಕೊಂಡು ನೀರು ತರುತ್ತಾರೆ. ಅದಲ್ಲದೇ ನೀರಿನ ಬಿಂದಿಗೆಯನ್ನು ಹೊತ್ತು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಮಹಿಳೆಯರು ಬಾವಿಯಿಂದ ಮೇಲೆ ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಮಸ್ಯೆಯ ಭೀಕರತೆಯನ್ನು ತೋರಿಸುತ್ತಿದೆ.
ಚುನಾವಣೆ ಬಹಿಷ್ಕಾರಕ್ಕೆ ಜನರ ನಿರ್ಧಾರ
ಇನ್ನು, ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ದಿಂಡೋರಿ ಜಿಲ್ಲೆಯ ಜನರು ಕಳೆದ ಹಲವು ವರ್ಷಗಳಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಆಕ್ರೋಶಗೊಂಡಿರುವ ಗ್ರಾಮಸ್ಥರು ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಸಿಗುವವರೆಗೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
#WATCH | Madhya Pradesh: People in Dindori's Ghusiya village risk their lives to fetch water from an almost dry well pic.twitter.com/jcuyLmE5xL
— ANI MP/CG/Rajasthan (@ANI_MP_CG_RJ) June 2, 2022
ಈ ಬಗ್ಗೆ ಮಾತನಾಡಿದ ಸ್ಥಳೀಯರು ರಾಜಕೀಯ ನಾಯಕರ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಘುಸಿಯಾದ ಬರೋ ತೋಲಾ ನಿವಾಸಿ ಕುಸುಮ್ ಎಂಬುವವರು, ನಾವು ಬಹಳ ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಆದರೆ, ನಮ್ಮ ಸಮಸ್ಯೆಗೆ ಸರ್ಕಾರ ಯಾವುದೇ ರೀತಿಯ ಗಮನ ಕೊಡುತ್ತಿಲ್ಲ. ಸರ್ಕಾರಿ ನೌಕರರು ಮತ್ತು ರಾಜಕೀಯ ನಾಯಕರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಅದಕ್ಕಾಗಿ ನಮಗೆ ಸಮರ್ಪಕವಾಗಿ ನೀರು ಪೂರೈಕೆಯಾಗುವವರೆಗೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ.
ಇದನ್ನೂ ಓದಿ: Ancient City: ಇರಾಕ್ನ ಅತಿ ದೊಡ್ಡ ಜಲಾಶಯ ಬತ್ತಿದಾಗ 3,400 ವರ್ಷಗಳ ಹಳೆಯ ನಗರ ಪತ್ತೆ; ಫೋಟೋಗಳು ಇಲ್ಲಿವೆ
ಮತ್ತೊಬ್ಬ ನಿವಾಸಿ ರೂಡಿಯಾ ಬಾಯಿ ಮಾತನಾಡಿ, ಗ್ರಾಮದಲ್ಲಿ ಬಹುತೇಕ ಬಾವಿಗಳು ಬತ್ತಿ ಹೋಗಿವೆ. ಹಗಲು ರಾತ್ರಿ ಎನ್ನದೆ ಬಾವಿಗೆ ಇಳಿದು ನೀರು ಸಂಗ್ರಹಿಸಬೇಕು. ಗ್ರಾಮದಲ್ಲಿ ಮೂರು ಬಾವಿಗಳಿದ್ದು ಎಲ್ಲವೂ ಬತ್ತಿ ಹೋಗಿವೆ. ಬೋರ್ವೆಲ್ಗಳಲ್ಲಿ ನೀರಿಲ್ಲ. ಹನ್ನೆರಡು ತಿಂಗಳಿಂದ ಪರಿಸ್ಥಿತಿ ಹೀಗೆಯೇ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನರ್ಮದಾ ನದಿಯಿಂದ 3 ಕಿಮೀ ದೂರ ಇದ್ದರೂ ಜಲಕ್ಷಾಮ
ಇನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಲ್ಜಲ್ ಯೋಜನೆ ಇಲ್ಲಿ ಅನುಷ್ಠಾನಗೊಳ್ಳುವುದಕ್ಕೆ ಬಹಳ ಸಮಯವೇ ಬೇಕಾಗುತ್ತದೆ. ಇಲ್ಲಿನ ಜನರು ಪ್ರತಿ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಘುಸಿಯಾ ಪಂಚಾಯಿತಿಯ ವರದಿಗಳು ಹೇಳುತ್ತವೆ. ಇಷ್ಟೊಂದು ನೀರಿನ ಸಮಸ್ಯೆ ಇರುವ ಈ ಗ್ರಾಮ ನರ್ಮದಾ ನದಿಯಿಂದ ಕೇವಲ 3 ಕಿಮೀ ದೂರದಲ್ಲಿದೆ ಎಂಬುದನ್ನು ಕೂಡ ಗಮನಿಸಬೇಕಿದೆ.
ಇದನ್ನೂ ಓದಿ: Labyrinth: ಗೊಂದಲಕ್ಕೀಡುವ ಮಾಡುವ ಈ ಸುಂದರ ರಚನೆಗಳು ನಿಮಗೆ ಗೊತ್ತೇ? ಪ್ರಪಂಚದ ಸುಂದರ ಚಕ್ರವ್ಯೂಹಗಳಿವು
ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರವು ಪ್ರತಿ ಮನೆಗೆ ಕುಡಿಯುವ ನೀರನ್ನು ಪೂರೈಸಲು ನಲ್ಜಲ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ, ದಿಂಡೋರಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದು, ಇಲ್ಲಿ ಜಲಕ್ಷಾಮ ತಲೆದೋರಿದೆ. ಮಧ್ಯಪ್ರದೇಶದ 313 ಬ್ಲಾಕ್ಗಳಲ್ಲಿ 84 ಬ್ಲಾಕ್ಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ರಾಜ್ಯದ ಲಕ್ಷಾಂತರ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ