ಸ್ಪೈಸ್ ಜೆಟ್ ಮಾಜಿ ಪ್ರವರ್ತಕ ಸನ್ ಗ್ರೂಪ್ನ ಕಲಾನಿಧಿ ಮಾರನ್ಗೆ 380 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಕಡಿಮೆ ದರದ ವಿಮಾನಯಾನ ಸಂಸ್ಥೆಯಾದ ಸ್ಪೈಸ್ಜೆಟ್ಗೆ ದೆಹಲಿ ಹೈಕೋರ್ಟ್ ಆದೇಶಿಸಿದ್ದು, ನಾಲ್ಕು ವಾರಗಳಲ್ಲಿ ಆಸ್ತಿಗಳ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಸಂಸ್ಥೆ 106.8 ಕೋಟಿ ರೂ. ಗಳಿಕೆಯಲ್ಲಿ ನಾಲ್ಕು ಪಟ್ಟು ಹೆಚ್ಚಳದೊಂದಿಗೆ ಅಚ್ಚರಿ ಮೂಡಿಸಿ ದಾಖಲೆ ನಿರ್ಮಿಸಿತ್ತಾದರೂ ಕೋರ್ಟ್ನ ತೀರ್ಪು ಸಂಸ್ಥೆಗೆ ಹಿನ್ನಡೆಯಾಗಿ ಕಂಡಬಂದಿದೆ. ಮಾರನ್ ಕುಟುಂಬ ಹಾಗೂ ಪ್ರಸ್ತುತ ಪ್ರವರ್ತಕರಾದ ಅಜಯ್ ಸಿಂಗ್ ಮತ್ತು ಸ್ಪೈಸ್ಜೆಟ್ ನಡುವಿನ ಒಪ್ಪಂದಗಳ ಹೊಣೆಗಾರಿಕೆಯ ನಡುವೆ ಹುಟ್ಟಿಕೊಂಡಿರುವ ಕಲಹಗಳು ಕೋರ್ಟ್ ಮೆಟ್ಟಿಲೇರಿದ್ದು ಪ್ರಸ್ತುತ ಹೈಕೋರ್ಟ್ ಮಾರನ್ಗೆ ಹಣ ಪಾವತಿಸುವಂತೆ ಸ್ಪೈಸ್ ಜೆಟ್ಗೆ ಆದೇಶಿಸಿದೆ.
ಸ್ಪೈಸ್ ಜೆಟ್ ವಿರುದ್ಧ ಮೊಕದ್ದಮೆ ಹೂಡಿದ್ದ ಮಾರನ್
ತಮಗೆ ಹಾಗೂ ಅವರ KAL ಏರ್ವೇಸ್ಗೆ ಕನ್ವರ್ಟಿಬಲ್ ವಾರಂಟ್ಗಳು ಹಾಗೂ ಷೇರುಗಳನ್ನು ನೀಡಲು ವಿಫಲವಾದ ಮೂಲಕ ನಷ್ಟವನ್ನು ಉಂಟುಮಾಡಿದ ಆರೋಪದ ಮೇಲೆ ಮಾರನ್ 2017 ರಲ್ಲಿ ಸ್ಪೈಸ್ ಜೆಟ್ ವಿರುದ್ಧ ಮಾರನ್ ಮೊಕದ್ದಮೆ ಹೂಡಿದ್ದರು.
ಬಡ್ಡಿ ಪಾವತಿಸದೇ ಸತಾಯಿಸಿದ್ದ ಸ್ಪೈಸ್ ಜೆಟ್
ನ್ಯಾಯಾಲಯದಲ್ಲಿ ದೀರ್ಘಕಾಲ ನಡೆದ ಈ ಹೋರಾಟದಲ್ಲಿ ಕೊನೆಗೆ ಸ್ಪೈಸ್ಜೆಟ್ ಮಾರನ್ಗೆ 579 ಕೋಟಿ ರೂ. ಅಸಲು ಮೊತ್ತವನ್ನು ಪಾವತಿಸಲು ರಾಜಿಯಾಗಿತ್ತಾದರೂ ಬಡ್ಡಿಯ ಭಾಗದ ತೀರ್ಪು ನಡೆಯದೇ ಹಾಗೆಯೇ ಬಾಕಿಯಾಗಿತ್ತು. 2020 ರ ಅಕ್ಟೋಬರ್ನಲ್ಲಿ 242 ಕೋಟಿ ರೂ.ನಷ್ಟಿದ್ದ ಬಡ್ಡಿಯು ಫೆಬ್ರವರಿ 2023 ರ ವೇಳೆಗೆ 362 ಕೋಟಿ ರೂ.ಗೆ ಏರಿಕೆಯಾಯಿತು ಹಾಗೂ ಅಂತಿಮವಾಗಿ 380 ಕೋಟಿ ರೂ.ಗೆ ಮುಟ್ಟಿತು.
ಬಡ್ಡಿಮೊತ್ತ ಶೀಘ್ರ ಪಾವತಿ ಸ್ಪೈಸ್ಜೆಟ್ ಪ್ರತಿಕ್ರಿಯೆ
ಸ್ಪೈಸ್ಜೆಟ್ ಈಗಾಗಲೇ ಮಾರನ್ ಮತ್ತು ಕೆಎಎಲ್ ಏರ್ವೇಸ್ನೊಂದಿಗೆ ಸಮಗ್ರ ಪರಿಹಾರಕ್ಕಾಗಿ ಚರ್ಚೆ ನಡೆಸುತ್ತಿದೆ ಎಂದು ಸ್ಪೈಸ್ಜೆಟ್ ವಕ್ತಾರರು ತಿಳಿಸಿದ್ದು ಸಂಪೂರ್ಣ ಅಸಲು ಮೊತ್ತವನ್ನು ನಾವು ಈಗಾಗಲೇ ಪಾವತಿಸಿರುವುದರಿಂದ ಬಡ್ಡಿ ಮೊತ್ತವನ್ನು ಶೀಘ್ರವೇ ಪಾವತಿಸುವ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ನಡೆದುಕೊಳ್ಳದ ಸಂಸ್ಥೆ
ಮಾರನ್ ಹಾಗೂ ಸ್ಪೈಸ್ಜೆಟ್ ವಿವಾದವು 2015 ಕ್ಕೂ ಹಿಂದಿನ ಸಂಘರ್ಷವಾಗಿದ್ದು ಮಾರನ್ ಮತ್ತು ಅವರ ಸಂಸ್ಥೆ ಕೆಎಎಲ್ ಏರ್ವೇಸ್ ಅವರು ಹೊಂದಿರುವ ಶೇ 58.46 ರಷ್ಟು ಷೇರುಗಳನ್ನು ಸ್ಪೈಸ್ಜೆಟ್ನ ಪ್ರಸ್ತುತ ಅಧ್ಯಕ್ಷ ಅಜಯ್ ಸಿಂಗ್ ಅವರಿಗೆ ವರ್ಗಾಯಿಸಿದ್ದರು. ಏರ್ಲೈನ್ ಸಹ ಸಂಸ್ಥಾಪಕರಾಗಿದ್ದ ಅಜಯ್ ಸಿಂಗ್ ರೂ 1,500 ಕೋಟಿ ರೂ. ಮೌಲ್ಯದ ಏರ್ಲೈನ್ ಹೊಣೆಗಾರಿಕೆಯನ್ನು ಹೊತ್ತಿದ್ದರು
ಹಾಗಾಗಿ ಅವರ ನಡುವೆ ನಡೆದ ಒಪ್ಪಂದದ ಪ್ರಕಾರ ಮಾರನ್ಗೆ ಅಜಯ್ ವಾರಂಟ್ ಮತ್ತು ಆದ್ಯತೆಯ ಷೇರುಗಳನ್ನು ನೀಡಬೇಕಾಗಿತ್ತು ಅಂತೆಯೇ ಅದಕ್ಕಾಗಿ 679 ಕೋಟಿ ರೂ.ವನ್ನು ಮಾರನ್ ನೀಡಿದ್ದರು. 2017 ರಲ್ಲಿ, ನಡೆದ ಕರಾರಿನಂತೆ ಮಾರನ್ಗೆ ಆದ್ಯತೆಯ ಷೇರುಗಳನ್ನು ನೀಡಲಾಗಿಲ್ಲ ಹಾಗೂ ಅವರು ಪಾವತಿಸಿದ 679 ಕೋಟಿ ರೂ.ವನ್ನು ಹಿಂತಿರುಗಿಸಿಲ್ಲವೆಂದು ಮಾರನ್ ದೆಹಲಿ ಕೋರ್ಟ್ಗೆ ಅರ್ಜಿ ಹಾಕಿದ್ದರು.
ಬಡ್ಡಿಮೊತ್ತ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಮಾರನ್
ಜುಲೈ 2018 ರಲ್ಲಿ, ಮಾರನ್ಗೆ 579 ಕೋಟಿ ರೂ. ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿತು. ಆದರೆ 1,323 ಕೋಟಿ ರೂ. ಹಾನಿಗಾಗಿ ಅವರ ಹಕ್ಕನ್ನು ತಿರಸ್ಕರಿಸಿತು. ಈ ಮಧ್ಯಸ್ಥಿಕೆ ತೀರ್ಪನ್ನು ಮಾರನ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ, ಮಾರನ್ ಪರ ತೀರ್ಪು ನೀಡಿದ ನ್ಯಾಯಾಲಯ ಬಡ್ಡಿ ಮೊತ್ತಕ್ಕೆ 243 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಸ್ಪೈಸ್ಜೆಟ್ಗೆ ಸೂಚಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ