ನವದೆಹಲಿ (ಡಿ. 1): ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ಜಾಸ್ತಿಯಾಗುತ್ತದೆ. ಹಾಗೇ, ಕ್ರಮೇಣವಾಗಿ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ದೀಪಾವಳಿ ಕಳೆದು 15 ದಿನವಾದರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಈಗ ಗಾಳಿಯ ಗುಣಮಟ್ಟ ಉಸಿರಾಟ ಮಾಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ ಇಂದು ಬೆಳಿಗ್ಗೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಈ ರೀತಿ ಇದೆ.
ದೆಹಲಿ ವಿಶ್ವವಿದ್ಯಾಲಯ ಪ್ರದೇಶದಲ್ಲಿ 336, ನೋಯ್ಡಾ ಸುತ್ತಮುತ್ತ 345, ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 331, ದೆಹಲಿ ಐಐಟಿ ಪ್ರದೇಶಗಳಲ್ಲಿ 319 ವಾಯು ಗುಣಮಟ್ಟದ ಸೂಚ್ಯಂಕವಿದೆ. ಗಾಳಿಯ ಗುಣಮಟ್ಟವು 301-400 ಅಂಕದ ನಡುವೆ ಇದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಜೊತೆಗೆ ಅದನ್ನು 'ಉಸಿರಾಡಲು ಅನರ್ಹ' ಎಂದೂ ಹೇಳಲಾಗುತ್ತದೆ. ಹಾಗಾಗಿಯೇ ಇಂದು ದೆಹಲಿಯಲ್ಲಿ ಸರಾಸರಿ ಏರ್ ಕ್ವಾಲಿಟಿ ಇಂಡೆಕ್ಸ್ 326 ಆಗಿರುವುದರಿಂದ ಜನ ಆತಂಕಕ್ಕೀಡಾಗಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬೆಳೆಯ ತ್ಯಾಜ್ಯವನ್ನು ಸುಡಲಾಗುತ್ತದೆ. ಅದರ ಹೊಗೆ ದೆಹಲಿಯತ್ತ ಬರುತ್ತದೆ. ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಪರೀತ ಪಟಾಕಿ ಸಿಡಿಸಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಗಾಳಿಯ ವೇಗ ಕೂಡ ಕಡಿಮೆ ಆಗುತ್ತದೆ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸಾಮಾನ್ಯ.
ಇದನ್ನೂ ಓದಿ: IMA Scam: ಐಎಂಎ ಹಗರಣ; ಇಂದು ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ
ಆದರೆ, ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸಲಾಗಿದೆ. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಲಾಗಿದೆ. ಇದಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇಷ್ಟೆಲ್ಲವನ್ನೂ ಮಾಡಿದ್ದರೂ ಮತ್ತು ದೀಪಾವಳಿ ಆಗಿ ವಾರ ಕಳೆದಿದ್ದರೂ ವಾಯುಮಾಲಿನ್ಯ ನಿಯಂತ್ರಣ ಆಗಿಲ್ಲದಿರುವುದರಿಂದ ಆತಂಕವನ್ನು ಸೃಷ್ಟಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ