Delhi Air Pollution: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಅಪಾಯಕಾರಿ ಹಂತ ತಲುಪಿದ ಗಾಳಿಯ ಗುಣಮಟ್ಟ

ವಾಯುಮಾಲಿನ್ಯ

ವಾಯುಮಾಲಿನ್ಯ

Delhi Air Pollution | ದೆಹಲಿಯಲ್ಲಿ ಇಂದು ಬೆಳಿಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ 347.‌ ಗಾಳಿಯ ಗುಣಮಟ್ಟವು 300 ಅಂಕದ ಮೇಲಿದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ.

  • Share this:

ನವದೆಹಲಿ, (ಫೆ. 2): ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ. ಹಾಗೆ ದಿನ ಕಳೆದಂತೆ ಅದು  ಕಡಿಮೆ ಕೂಡ ಆಗುತ್ತದೆ. ಆದರೆ ಈ ಬಾರಿ ದೆಹಲಿಯಲ್ಲಿ ನಿರಂತರವಾಗಿ ಗಾಳಿಯ ಗುಣಮಟ್ಟ ಕುಸಿಯುತ್ತಲೇ ಸಾಗಿದ್ದು ಅಪಾಯಕಾರಿ ಹಂತ ತಲುಪಿದೆ.


ದೆಹಲಿಯಲ್ಲಿ ಇಂದು ಬೆಳಿಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ 347.‌ ಗಾಳಿಯ ಗುಣಮಟ್ಟವು 300 ಅಂಕದ ಮೇಲಿದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಅಲ್ಲದೆ ಅಂತಹ ಗಾಳಿಯನ್ನು 'ಉಸಿರಾಡಲು ಅನರ್ಹ' ಎಂದು ಕೂಡ ಹೇಳಲಾಗುತ್ತದೆ. ದೆಹಲಿಯಲ್ಲಿ ನಿರಂತರವಾಗಿ ಗಾಳಿಯ ಗುಣಮಟ್ಟ ಹದಗೆಡುತ್ತಲೇ ಬಂದಿರುವುದರಿಂದ ಜನ ಸಹಜವಾಗಿ ಆತಂಕಕ್ಕೀಡಾಗಿದ್ದಾರೆ. ಸದ್ಯ ವಾಯು ಗುಣಮಟ್ಟದ ಸೂಚ್ಯಂಕ 347 ಆಗಿರುವುದರಿಂದ ರಾಷ್ಟ್ರ ರಾಜಧಾನಿಯ ಜನ‌ ಉಸಿರಾಡುವುದಕ್ಕೂ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ದೆಹಲಿ ಸಮೀಪದ ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬೆಳೆ ತಾಜ್ಯಾಜ್ಯ (ಒಣಹುಲ್ಲು) ಸುಡುತ್ತಿರುವುದರ ಪರಿಣಾಮಗಳು‌ ಏನಾಗುತ್ತಿವೆ? ಮಾಲಿನ್ಯ ತಡೆಯಲೆಂದು ರಚಿಸಿರುವ ಪರಿಸರ ಸಮಿತಿ ಏನು ಮಾಡುತ್ತಿದೆ? ಎಂಬ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಜೊತೆಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಖಾರವಾಗಿಯೇ ಹೇಳಿತ್ತು. ಹೀಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದರೂ ಸರ್ಕಾರಗಳು ಮೈಮರೆತು ಕೂತಿರುವುದರಿಂದ ಜನ 'ಗಾಳಿಯೊಂದಿಗೆ ಗುದ್ದಾಡಬೇಕಾಗಿದೆ'.


ಇದನ್ನೂ ಓದಿ: 10 ವರ್ಷದಿಂದ ತಾಯಿ ಶವವನ್ನು ಫ್ರೀಜರ್​​ನಲ್ಲಿ ಬಚ್ಚಿಟ್ಟ ಮಗಳು; ಹೀಗೇಕೆ ಮಾಡಿದಳು?


ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಧಿ ಬೆಳೆಯ ತ್ಯಾಜ್ಯವನ್ನು ಸುಡಲಾಗುತ್ತದೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಅಲ್ಲಿ ತ್ಯಾಜ್ಯ ಸುಟ್ಟಾಗ ಹೊಮ್ಮುವ ಹೊಗೆ ದೆಹಲಿಯ ಕಡೆಗೆ ಬರಲಿದೆ.‌ ತ್ಯಾಜ್ಯ ಸುಡುವುದನ್ನು ತಪ್ಪಿಸಲು ಈವರೆಗೆ ಯಾವುದೇ ವೈಜ್ಞಾನಿಕ ಕ್ರಮ ಕೈಗೊಂಡಿಲ್ಲ. ರೈತರಿಗೆ ಪರ್ಯಾಯ ಮಾರ್ಗವನ್ನು ಹೇಳಿಕೊಟ್ಟಿಲ್ಲ.‌ ಪರಿಹಾರದ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ.


ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಗಾಳಿಯ ವೇಗ ಕೂಡ ಕಡಿಮೆ ಇರುತ್ತದೆ. ಈ  ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಿ ಅಲ್ಲೇ ಕೊಳೆಯುವ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ದೀಪಾವಳಿ ಹಬ್ಬದ ಸಂದರಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣ ಬಾರದೇ ಇರುವುದು ಸಹಜವಾಗಿ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.


ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಹೊಸ ಕಾನೂನಿನ ಪ್ರಕಾರ ಗಾಳಿಯನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇವೆಲ್ಲವೂ ಕಾಗದದ ಮೇಲೆ ಇವೆಯೇ ಹೊರತು ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ದೆಹಲಿಯ ವಾಯು ಮಾಲಿನ್ಯ ಹೆಚ್ಚುತ್ತಿರುವುದರಿಂದ ಸ್ಪಷ್ಟವಾಗುತ್ತದೆ.

Published by:Sushma Chakre
First published: