ನವದೆಹಲಿ(ಫೆ.16): "ಜಾತಿ ಮತ್ತು ಧರ್ಮ ಎನ್ನದೇ ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಪಾಡುವ ಪೊಲೀಸರನ್ನು ಗೌರವಿಸುವ ಅಗತ್ಯವಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇಂದು ದೆಹಲಿ ಪೊಲೀಸರು 73ನೇ ರೈಸಿಂಗ್ ದಿನಾಚರಣೆ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಇಲ್ಲಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂಸಾತ್ಮಕ ಸಂದರ್ಭಗಳನ್ನು ಸೇನಾ ಬಲದೊಂದಿಗೆ ಸ್ವಾತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಶಾಂತಯುತವಾಗಿ ಹೇಗೆ ನಿಭಾಯಿಸುತ್ತಿದ್ದರು ಎನ್ನುವುದರ ಬಗ್ಗೆ ಹೇಳಿದರು.
ಇನ್ನು, ಸರ್ದಾರ್ ವಲ್ಲಭಭಾಯ್ ಪಟೇಲ್ ಸಲಹೆಯನ್ನು ನೆನೆದ ಕೇಂದ್ರ
ಗೃಹ ಸಚಿವ ಅಮಿತ್ ಶಾ " ಪೊಲೀಸರು ನಿಮ್ಮ ಶತ್ರುಗಳಲ್ಲ. ಬೇಕಾದರೆ ಟೀಕಿಸಿ, ಆದರೆ ಗೌರವಿಸಲು ಮರೆಯದಿರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಪೊಲೀಸರು ಹಗಲು ರಾತ್ರಿಯೆನ್ನದೇ ದೇಶಕ್ಕಾಗಿ ದುಡಿಯುತ್ತಾರೆ. ಅಗತ್ಯವಿದ್ದಾಗ ನಮ್ಮ ಸಹಾಯಕ್ಕೆ ಬರುತ್ತಾರೆ. ಅವರು ಯಾರಿಗೂ ಶತ್ರುಗಳಲ್ಲ. ಪೊಲೀಸರು ನಮ್ಮ ಸ್ನೇಹಿತರೇ. ಹಾಗಾಗಿ ಅವರಿಗೂ ಗೌರವ ನೀಡಬೇಕಾಗುತ್ತದೆ ಎಂದರು.
ಇಲ್ಲಿಯವರೆಗೂ ದೇಶಕ್ಕಾಗಿ 35 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಅವರು ದೇಶವನ್ನು ರಕ್ಷಿಸುವಲ್ಲಿ ಪ್ರಮುಖರು ಎಂಬ ಸತ್ಯವನ್ನು ನಾವು ಕಡೆಗಣಿಸಬಾರದು. ನಾವು ಪ್ರತಿದಿನ ಹಬ್ಬ ಆಚರಿಸುತ್ತೇವೆ. ನಾವು ಆಚರಿಸುವ ಹೋಳಿ, ದೀಪಾವಳಿ ಮತ್ತು ಈದ್ ಮುಂತಾದ ಹಬ್ಬಗಳಲ್ಲಿಯೂ ಪೊಲೀಸರು ಕರ್ತವ್ಯಕ್ಕೆ ಹಾಜಾರಾಗುತ್ತಾರೆ ಎಂದು ಕೊಂಡಾಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಬಸವಧರ್ಮ ಅಲೆ; ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಹೊಸ ದಾಖಲೆ
2001, ಡಿಸೆಂಬರ್ 13ನೇ ತಾರೀಕಿನಂದು ನಡೆದ ಭಯೋತ್ಪಾದಕ ದಾಳಿ ವೇಳೆ ಸಂಸತ್ತು ರಕ್ಷಿಸಲೋಗಿ ಪ್ರಾಣ ಕಳೆದುಕೊಂಡ ಐವರು ದೆಹಲಿ ಪೊಲೀಸರನ್ನು ಅಮಿತ್ ಶಾ ನೆನೆದರು. ಜತೆಗೆ 1991ರಿಂದೀಚೆಗೆ 30 ಪೊಲೀಸರು ಕರ್ತವ್ಯದಲ್ಲಿದಾಗಲೇ ಹುತಾತ್ಮರಾದ ಬಗ್ಗೆಯೂ ಹೇಳಿದರು.
ಹೀಗೆ ಮಾತು ಮುಂದುವರೆಸಿದ ಅಮಿತ್ ಶಾ, ಮಹಿಳೆಯರ ಸುರಕ್ಷತೆಗಾಗಿ 9300 ಸಿಸಿಟಿವಿಗಳನ್ನು ಅಳವಡಿಸಲು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ವಿವಿಧ ಹಂತಗಳಲ್ಲಿ ಪೊಲೀಸರಿಗೆ 4,500 ನಾಲ್ಕುಚಕ್ರ ಮತ್ತು 1600 ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ